ದೆಹಲಿ ಅಬಕಾರಿ ನೀತಿ ಹಗರಣ: ಲುಕೌಟ್ ನೋಟಿಸ್ ನೀಡಿಲ್ಲ ಎಂದ ಸಿಬಿಐ, ಕೇಜ್ರಿವಾಲ್ ಗೆ ಕೈಕೋಳ ಹತ್ತಿರವಾಗುತ್ತಿದೆ ಎಂದ ಬಿಜೆಪಿ

ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಯಾವುದೇ ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ)ವು "ಸದ್ಯಕ್ಕೆ" ಲುಕ್ ಔಟ್ ಸುತ್ತೋಲೆ (LOC) ಹೊರಡಿಸಿಲ್ಲ ಎಂದು ಅಧಿಕಾರಿಗಳು ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ
Updated on

ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಯಾವುದೇ ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ)ವು "ಸದ್ಯಕ್ಕೆ" ಲುಕ್ ಔಟ್ ಸುತ್ತೋಲೆ (LOC) ಹೊರಡಿಸಿಲ್ಲ ಎಂದು ಅಧಿಕಾರಿಗಳು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ಉದ್ಭವವಾಗಿರುವ ಗೊಂದಲಗಳ ಕುರಿತಂತೆ ಸ್ಪಷ್ಟನೆ ನೀಡಿರುವ ಸಿಬಿಐ, ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ ಮತ್ತು ವಿಚಾರಣೆಗಾಗಿ ಆರೋಪಿಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಹೇಳಿದೆ. 

"ಇಲ್ಲಿಯವರೆಗೆ" ಪ್ರಕರಣದ ಯಾವುದೇ ಆರೋಪಿಗಳ ವಿರುದ್ಧ ಲುಕೌಟ್ ಸುತ್ತೋಲೆಗಳನ್ನು (ಎಲ್‌ಒಸಿ) ಹೊರಡಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಂತೆಯೇ ಸರ್ಕಾರಕ್ಕೆ ತಿಳಿಸದೆ ದೇಶವನ್ನು ತೊರೆಯಲು ಸಾಧ್ಯವಿಲ್ಲದ ಕಾರಣ ಸಾರ್ವಜನಿಕ ಸೇವಕರ ವಿರುದ್ಧ ಎಲ್‌ಒಸಿ ಹೊರಡಿಸುವ ಅಗತ್ಯವನ್ನು ಸಿಬಿಐಗೆ ಇದುವರೆಗೆ ನೀಡಿಲ್ಲ ಎಂದು ಅವರು ಹೇಳಿದರು.

ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ವ್ಯಕ್ತಿಗಳು ಮತ್ತು ಘಟಕಗಳಲ್ಲಿ ಸಿಸೋಡಿಯಾ ಕೂಡ ಸೇರಿದ್ದಾರೆ. ಇದೇ ಕಾರಣಕ್ಕೆ ಸಿಸೋಡಿಯಾ ಅವರ ನಿವಾಸ ಮತ್ತು ಕೆಲವು ಅಧಿಕಾರಿಗಳು ಮತ್ತು ಉದ್ಯಮಿಗಳ ಆವರಣ ಸೇರಿದಂತೆ 31 ಸ್ಥಳಗಳಲ್ಲಿ ಸಿಬಿಐ ಶುಕ್ರವಾರ ಶೋಧ ನಡೆಸಿತು.

ಗಂಭೀರ ಆರೋಪ
ದೆಹಲಿ ಅಬಕಾರಿ ನೀತಿಗೆ ತಿದ್ದುಪಡಡಿ ತರುವ ಮೂಲಕ ಮದ್ಯದ ವ್ಯಾಪಾರಿಗಳಿಗೆ ಸಿಸೋಡಿಯಾ ನೆರವಾಗಿದ್ದಾರೆ. ಈ ಮೂಲಕ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪಗಳಿವೆ. ಪ್ರಮುಖವಾಗಿ ಇಂಡೋಸ್ಪಿರಿಟ್ಸ್ ಮಾಲೀಕ ಸಮೀರ್ ಮಹೇಂದ್ರು ಅವರು ಸಿಸೋಡಿಯಾ ಅವರ "ಆಪ್ತ ಸಹಚರರಿಗೆ" ಕನಿಷ್ಠ ಎರಡು ಕೋಟಿ ರೂಪಾಯಿ ಮೌಲ್ಯದ ಪಾವತಿಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಕಳೆದ ತಿಂಗಳು ನವೆಂಬರ್‌ನಿಂದ ಜಾರಿಗೆ ಬಂದ ಅಬಕಾರಿ ನೀತಿಯ ಅನುಷ್ಠಾನದಲ್ಲಿ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ತನಿಖೆಗೆ ಶಿಫಾರಸು ಮಾಡಿದ ನಂತರ ಶುಕ್ರವಾರ ಸುಮಾರು 15 ಗಂಟೆಗಳ ಕಾಲ ಸಿಬಿಐ ದಾಳಿಗಳು ನಡೆದಿದ್ದವು. 

ಕೇಜ್ರಿವಾಲ್ ಗೆ ಕೈಕೋಳ ಹತ್ತಿರವಾಗುತ್ತಿದೆ ಎಂದ ಬಿಜೆಪಿ
ಇದೇ ವಿಚಾರವಾಗಿ ಆಪ್ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, 'ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣದ "ಕಿಂಗ್‌ಪಿನ್" ಎಂದು ಆರೋಪಿಸಿದೆ ಮತ್ತು ಭ್ರಷ್ಟಾಚಾರದ ಗಂಟುಗಳನ್ನು ಬಿಚ್ಚಿಡುತ್ತಿದ್ದಂತೆ ಅವರಿಗೆ ಕೈಕೋಳ ಹತ್ತಿರವಾಗುತ್ತಿದೆ ಎಂದು ಹೇಳಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಕೋವಿಡ್ ಪೀಡಿತ ಜನರಿಗೆ ಅವರ ಸಹಾಯ ಬೇಕಾದಾಗ ಕೇಜ್ರಿವಾಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಿದರು.

ಅಂತೆಯೇ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ, "ದೆಹಲಿಯ ಅಬಕಾರಿ ನೀತಿಯು ಭ್ರಷ್ಟವಾಗಿದೆ ಎಂದು ಸಾಬೀತಾಗಿದೆ, ಈ ಸಂಪೂರ್ಣ ಹಗರಣದ ಕಿಂಗ್‌ಪಿನ್ ಅರವಿಂದ್ ಕೇಜ್ರಿವಾಲ್" ಎಂದು ಹೇಳಿದರು. ಅಬಕಾರಿ ನೀತಿ 'ಹಗರಣ'ದ ಬೇರುಗಳು ಭ್ರಷ್ಟ ಕೇಜ್ರಿವಾಲ್‌ನ ಮನೆ ಬಾಗಿಲಿಗೆ ಕಾರಣವಾಗುತ್ತವೆ. ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಯಾವುದೇ ಭ್ರಷ್ಟರನ್ನು ಬಿಡಲಾಗುವುದಿಲ್ಲ" ಎಂದು ಅವರು ಹೇಳಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com