ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಿವಸೇನೆ ನಾಯಕ ಸಂಜಯ್ ರಾವತ್'ಗೆ ಇಡಿ ಸಮನ್ಸ್
ಅಕ್ರಮ ಹಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಸೇನೆ ನಾಯಕ ಸಂಜಯ್ ರಾವತ್ ಅವರಿಗೆ ಸೋಮವಾರ ಸಮನ್ಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
Published: 27th June 2022 01:53 PM | Last Updated: 27th June 2022 01:58 PM | A+A A-

ಸಂಜಯ್ ರಾವತ್
ಮುಂಬೈ; ಅಕ್ರಮ ಹಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಸೇನೆ ನಾಯಕ ಸಂಜಯ್ ರಾವತ್ ಅವರಿಗೆ ಸೋಮವಾರ ಸಮನ್ಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
ಮುಂಬೈನ ಕೋರೇಂಗಾವ್ನಲ್ಲಿರುವ ಪತ್ರಾ ಬಡಾವಣೆ ಅಭಿವೃದ್ಧಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾವತ್ಗೆ ಸಮನ್ಸ್ ಜಾರಿ ಮಾಡಿರುವ ಇಡಿ, ನಾಳೆ (ಮಂಗಳವಾರ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
47 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಉದ್ಯಮಿ ಪ್ರವೀಣ್ ಜತೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಸಂಜಯ್ ರಾವತ್ ಮೇಲಿದ್ದು, 1,034 ಕೋಟಿ ರೂ. ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: 'ಗುವಾಹಟಿಯಲ್ಲಿ ಎಷ್ಟು ದಿನ ಬಚ್ಚಿಟ್ಟುಕೊಳ್ಳುವಿರಿ, ಹೊರಗೆ ಬರಲೇಬೇಕು: ಶಿವಸೇನೆ ಬಂಡಾಯ ಶಾಸಕರಿಗೆ ರಾವತ್
ಅತ್ತ ಮಹಾ ಆಘಾಡಿ ಸರ್ಕಾರಕ್ಕೆ ರೆಬಲ್ ಶಾಸಕರು ಬೆಂಬಲ ಹಿಂಪಡೆದಿದ್ದು, ಉದ್ಧವ್ ಠಾಕ್ರೆ ಸರ್ಕಾರ ಕುಸಿದು ಬೀಳುವ ಸಾಧ್ಯತೆಗಳಿವೆ. ಸಂಜಯ್ ರಾವತ್ ಅವರ ನಡವಳಿಕೆಯೇ ಮಹಾರಾಷ್ಟ್ರ ಸರ್ಕಾರ ಪತನಕ್ಕೆ ಕಾರಣ ಎಂದು ಕೆಲ ಬಂಡಾಯ ಶಾಸಕರು ಹೇಳಿದ್ದು, ಈ ನಡುವಲ್ಲೇ ಇಡಿ ಸಮನ್ಸ್ ಜಾರಿ ಮಾಡಿರುವುದು ರಾವತ್ ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಇಡಿ ಸಮನ್ಸ್ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾವತ್ ಅವರು, ಕೇಂದ್ರೀಯ ಸಂಸ್ಥೆ ಸಮನ್ಸ್ ಜಾರಿ ಮಾಡಿರುವುದಕ್ಕೆ ನನಗೇನು ಭಯವಿಲ್ಲ. ನಾನೊಬ್ಬ ನಿಜವಾದ ಶಿವ ಸೈನಿಕ, ಯಾವುದೇ ಸಂಕಷ್ಟ ಬರಲಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆಂದು ಹೇಳಿದ್ದಾರೆ.
ಅಧಿಕಾರಿಗಳು ನನ್ನ ಆಸ್ತಿಯನ್ನು ಜಪ್ತಿ ಮಾಡಲಿ, ನನ್ನ ಮೇಲೆ ಗುಂಡು ಹಾರಿಸಲಿ, ಜೈಲಿಗಟ್ಟಲಿ. ನಾನು ಬಾಳಾಸಾಹೇಬ್ ಠಾಕ್ರೆ ಅನುಯಾಯಿ. ನಿಜವಾದ ಶಿವ ಸೈನಿಕ. ಹೋರಾಟ ಮಾಡಿ, ಸತ್ಯ ಬಹಿರಂಗಪಡಿಸುತ್ತೇನೆ. ಇಷ್ಟಕ್ಕೆ ನಾನು ಸುಮ್ಮನಾಗುವುದಿಲ್ಲ. ಸತ್ಯ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ ಎಂದು ತಿಳಿಸಿದ್ದಾರೆ.