ಟ್ರಕ್‌-ಆಟೋ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ; ಆಟೋ ಮೇಲೆ ಗ್ರಾನೈಟ್ ಕಲ್ಲು ಬಿದ್ದು ಮೂವರು ಸಾವು

ಟ್ರಕ್‌ನಿಂದ ಗ್ರಾನೈಟ್ ಬ್ಲಾಕ್‌ಗಳು ಆಟೋ ರಿಕ್ಷಾ ಮೇಲೆ ಬಿದ್ದಿದ್ದು, ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವಿಗೀಡಾಗಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಟ್ರಕ್‌ನಿಂದ ಗ್ರಾನೈಟ್ ಬ್ಲಾಕ್‌ಗಳು ಆಟೋ ರಿಕ್ಷಾ ಮೇಲೆ ಬಿದ್ದಿದ್ದು, ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವಿಗೀಡಾಗಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ.

ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಆಟೋ ರಿಕ್ಷಾ ಚಾಲಕರ ಗುಂಪೊಂದು ಹೊಸ ವರ್ಷಾಚರಣೆಗೆ ಹಣ ಸಂಗ್ರಹಿಸಲು ತೆರಳುತ್ತಿದ್ದಾಗ ಈ ಭೀಕರ ದುರ್ಘಟನೆ ಸಂಭವಿಸಿದೆ.

ವಾರಂಗಲ್-ಖಮ್ಮಂ ಹೆದ್ದಾರಿಯ ಕುರವಿ ಪೊಲೀಸ್ ಠಾಣೆ ಬಳಿ ದುರಂತ ಸಂಭವಿಸಿದೆ. ಮೃತರನ್ನು 30 ವರ್ಷದ ವೈ. ಶ್ರೀಕಾಂತ್, ಬಿ. ಸುಮನ್ ಮತ್ತು ಡಿ. ನವೀನ್ ಎಂದು ಗುರುತಿಸಲಾಗಿದ್ದು, ಐವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಮಂಗೋಲಿಗುಡೆಂ ಗ್ರಾಮದವರಾಗಿದ್ದು, ಎಲ್ಲರೂ ಆಟೋ ರಿಕ್ಷಾ ಚಾಲಕರು ಎನ್ನಲಾಗಿದೆ. ಅವರು ಶನಿವಾರ ಸಂಜೆಯವರೆಗೆ ತಮ್ಮ ತಮ್ಮ ಆಟೋಗಳನ್ನು ಚಲಾಯಿಸುತ್ತಿದ್ದರು. ನಂತರ ಹೊಸ ವರ್ಷದ ಮುನ್ನಾದಿನದಂದು ಗಿರಣಿಗಾರರಿಂದ ಹಣ ಸಂಗ್ರಹಿಸಲು ಕುರವಿ ಗ್ರಾಮಕ್ಕೆ ಒಂದೇ ಆಟೋದಲ್ಲಿ ತೆರಳುತ್ತಿದ್ದರು.

ಅವರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಸೋಮ್ಲಾತಂಡ ತಲುಪಿದಾಗ ಬೃಹತ್ ಗ್ರಾನೈಟ್ ಕಲ್ಲುಗಳನ್ನು ತುಂಬಿದ್ದ ಎದುರಿನಿಂದ ಬರುತ್ತಿದ್ದ ಲಾರಿಯೊಂದಿಗೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಆಟೋ ರಸ್ತೆ ಪಕ್ಕಕ್ಕೆ ಉರುಳಿದ್ದು, ಆಟೋ ಮೇಲೆ ಟ್ರಕ್‌ನಲ್ಲಿದ್ದ ಗ್ರಾನೈಟ್ ಬ್ಲಾಕ್‌ಗಳು ಸಹ ಬಿದ್ದಿವೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರೇನ್‌ಗಳ ಸಹಾಯದಿಂದ ಗ್ರಾನೈಟ್‌ ಬ್ಲಾಕ್‌ಗಳನ್ನು ತೆಗೆದಿದ್ದಾರೆ. ಶ್ರೀಕಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಬೂಬಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸುಮನ್ ಸಾವಿಗೀಡಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನವೀನ್ ಎಂಬುವವರನ್ನು ವಾರಂಗಲ್ ಎಂಜಿಎಂ ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com