ಹೈದರಾಬಾದ್: ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಭರವಸೆಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ಆರೋಪಿಸಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಆರ್ಎಸ್ ಎರಡೂ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿವೆ ಎಂದು ಗುರುವಾರ ದೂರಿದ್ದಾರೆ.
ಸಂಗಾರೆಡ್ಡಿ ಪಟ್ಟಣದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನಿರುದ್ಯೋಗ ಭತ್ಯೆ ಮತ್ತು 200 ಯೂನಿಟ್ ಉಚಿತ ವಿದ್ಯುತ್ನಂತಹ ಭರವಸೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಜನರು ಕಾಯುತ್ತಿದ್ದಾರೆ ಎಂದರು.
'ಕಾಂಗ್ರೆಸ್ ಮತ್ತು ಕೆಸಿಆರ್ (ಬಿಆರ್ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್) ಖಾತರಿಗಳ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಅಥವಾ ಕೆಸಿಆರ್ ಆಗಲಿ (ತೆಲಂಗಾಣದಲ್ಲಿ) ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮತ್ತು ಕುಟುಂಬ ಆಡಳಿತ ಗ್ಯಾರಂಟಿ' ಎಂದು ಅವರು ಹೇಳಿದರು.
ಬಡವರಿಗೆ ಡಬಲ್ ಬೆಡ್ ರೂಂ ಮನೆ ನೀಡುವುದು, ದಲಿತ ಬಂಧು ಯೋಜನೆ ಅನುಷ್ಠಾನ ಸೇರಿದಂತೆ ಚುನಾವಣಾ ಭರವಸೆಗಳ ಬಗ್ಗೆ ನಡ್ಡಾ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದರು.
ತೆಲಂಗಾಣದಲ್ಲಿ ಭ್ರಷ್ಟಾಚಾರ ಮತ್ತು ಕುಟುಂಬ ಆಡಳಿತದ ಆರೋಪದ ಬಗ್ಗೆಯೂ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
Advertisement