
ಚಂಡೀಗಢ: ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯ ವಲಸಿಗರ ಗಡೀಪಾರು ಪ್ರಕ್ರಿಯೆಯ ಭರದಿಂದ ಸಾಗಿದ್ದು. ಬುಧವಾರ ಅಮೆರಿಕಾದಿಂದ 104 ಮಂದಿ ಭಾರತೀಯ ವಲಸಿಗರನ್ನು ಭಾರತಕ್ಕೆ ವಾಪಸ್ ಕಳುಹಿಸಿ ಕೊಡಲಾಗಿದೆ.
ಅಮೆರಿಕಾ ಸೇನೆಯು ಅಕ್ರಮ ವಲಸಿಗರ ಕೈಗೆ ಕೋಳ, ಕಾಲಿಗೆ ಬೇಡಿ ಹಾಕಿ ಸಿ-17 ಗ್ಲೋಬ್ ಮಾಸ್ಟರ್ ವಿಮಾನದಲ್ಲಿ ಭಾರತಕ್ಕೆ ಹಸ್ತಾಂತರ ಮಾಡಿದೆ. ಅಮೆರಿಕಾದ ಸೇನಾ ವಿಮಾನ ಇಂದು ಅಮೃತಸರದಲ್ಲಿ ಲ್ಯಾಂಡ್ ಆಗಿದ್ದು, 104 ಅಕ್ರಮ ವಲಸಿಗರನ್ನು ಭಾರತದ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.
ಗಡಿಪಾರಾದ ಈ 104 ವಲಸಿಗರು ಉದ್ಯೋಗ ಅರಸಿ ಅಕ್ರಮವಾಗಿ ಅಮೆರಿಕಾ ದೇಶವನ್ನು ಪ್ರವೇಶಿಸಿದ್ದರು. ಅಮೆರಿಕಾ- ಮೆಕ್ಸಿಕೋ ಗಡಿಯಲ್ಲಿ ಈ 104 ಮಂದಿ ಸಿಕ್ಕಿಬಿದ್ದಿದ್ದು ಗಡಿಪಾರಾಗಿದ್ದಾರೆ.
ಇತ್ತೀಚೆಗೆ ಈ ಅಕ್ರಮ ವಲಸಿಗರನ್ನ ಭಾರತದ ನಾಗರಿಕರನ್ನ ಮತ್ತೆ ಸೇರಿಸಿಕೊಳ್ಳಲು ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರು ಒಪ್ಪಿಗೆ ಸೂಚಿಸಿದ್ದರು.
ಭಾರತ ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಗುಜರಾತ್, ಪಂಜಾಬ್, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯದ ನಾಗರಿಕರನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಗುಜರಾತ್ 33, ಹರಿಯಾಣ 33, ಪಂಜಾಬ್ 30, ಮಹಾರಾಷ್ಟ್ರ 3, ಉತ್ತರಪ್ರದೇಶ 3 ಹಾಗೂ ಚಂಡೀಗಢದ ಚಂಡೀಗಢದ ಇಬ್ಬರಿಗೆ ಅಮೆರಿಕಾದಿಂದ ಗೇಟ್ ಪಾಸ್ ನೀಡಲಾಗಿದೆ.
ಅಕ್ರಮ ವಲಸಿಗರಲ್ಲಿ 79 ಮಂದಿ ಪುರುಷರು, 25 ಮಹಿಳೆಯರು, 13 ಮಕ್ಕಳು ಭಾರತಕ್ಕೆ ಗಡಿಪಾರು ಆಗಿದ್ದಾರೆ. ಅಮೆರಿಕಾ ವಿಮಾನದ ಮೂಲಕ ಅಮೃತಸರಕ್ಕೆ 104 ಮಂದಿ ವಲಸಿಗರು ಶಿಫ್ಟ್ ಆಗಿದ್ದು, ಅಮೃತಸರದಿಂದ ಅವರವರ ರಾಜ್ಯಗಳಿಗೆ ವಲಸಿಗರನ್ನು ರವಾನೆ ಮಾಡಲಾಗುತ್ತಿದೆ.
ಪಂಜಾಬ್ನಿಂದ ಗಡೀಪಾರು ಮಾಡಲ್ಪಟ್ಟವರನ್ನು ಅಮೃತಸರ ವಿಮಾನ ನಿಲ್ದಾಣದಿಂದ ಪೊಲೀಸ್ ವಾಹನಗಳಲ್ಲಿ ಅವರವರ ಊರುಗಳಿಗೆ ಕರೆದೊಯ್ಯಲಾಗಿದೆ.
104 ಮಂದಿ ಪೈಕಿ ಗುರುದಾಸಪುರ ಜಿಲ್ಲೆಯ ಹರ್ದೋರ್ವಾಲ್ ಗ್ರಾಮದ ಜಸ್ಪಾಲ್ ಸಿಂಗ್ ಕೂಡ ಒಬ್ಬರಾಗಿದ್ದು, ಜನವರಿ 24 ರಂದು ಅಮೆರಿಕಾ ಸೇನೆಯಿಂದ ಬಂಧನಕ್ಕೊಳಗಾಗಿದ್ದರು. ಸಿಂಗ್ ಅವರು ಬುಧವಾರ ರಾತ್ರಿ ತಮ್ಮ ಊರು ತಲುಪಿದ್ದಾರೆ.
ಗಡಿಪಾರು ವೇಳೆ ತಾವು ಅನುಭವಿಸಿದ ನೋವನ್ನು ಜಸ್ಪಾಲ್ ಸಿಂಗ್ ಹಂಚಿಕೊಂಡಿದ್ದು, ಎಲ್ಲಾ ವಲಸಿಗರಿಗೆ ಕೈಕೋಳ ಮತ್ತು ಕಾಲಿಗೆ ಸರಪಳಿ ಬಿಗಿದು ಕರೆತರಲಾಗಿದೆ ಎಂದು ಹೇಳಿದ್ದಾರೆ.
ಎಲ್ಲರ ಕೈಗೂ ಬೇಡಿ ಹಾಕಲಾಗಿತ್ತಲ್ಲದೇ, ಕಾಲಿಗೆ ಸರಪಳಿಯನ್ನು ಬಿಗಿಯಲಾಗಿತ್ತು. ವಿಮಾನವು ಅಮೃತಸರ್ಗೆ ಇಳಿದ ನಂತರವೇ ಕೈಕೋಳ ಮತ್ತು ಸರಪಳಿಯನ್ನು ತೆಗೆಯಲಾಯಿತು ಎಂದು ತಿಳಿಸಿದ್ದಾರೆ. ಟ್ರಾವೆಲ್ ಏಜೆನ್ಸಿಯ ಮೋಸದಿಂದಾಗಿ ಅಮೆರಿಕದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೆ ಎಂದೂ ಆರೋಪಿಸಿದ್ದಾರೆ.
ಕಾನೂನೂ ರೀತಿಯಲ್ಲೇ ಅಮೆರಿಕಾಗೆ ಕಳುಹಿಸಲಾಗುವುದು ಎಂದು ನಂಬಿಸಿ, ಆ ನಂತರ ಯಾವುದೇ ದಾಖಲೆಗಳಿಲ್ಲದೇ ಬ್ರೆಜಿಲ್ ಗಡಿಯಿಂದ ನನ್ನನ್ನು ಅಮೆರಿಕದೊಳಗೆ ಕಳುಹಿಸಲಾಗಿತ್ತು. ಆದರೆ, ಅಮೆರಿಕದ ಗಡಿ ಗಸ್ತು ಪಡೆ ನನ್ನನ್ನು ಬಂಧಿಸಿತು ಎಂದು ತಿಳಿಸಿದ್ದಾರೆ.
ಸರಿಯಾದ ವೀಸಾ ಮೂಲಕ ಅಮೆರಿಕಕ್ಕೆ ಕಳುಹಿಸವುದಾಗಿ ಟ್ರಾವೆಲ್ ಏಜೆನ್ಸಿ ನನ್ನಿಂದ 30 ಲಕ್ಷ ರೂ. ಪಡೆದಿತ್ತು. ಕಳೆದ ವರ್ಷ ವಿಮಾನದ ಮೂಲಕ ಮೊದಲು ನನ್ನನ್ನು ಬ್ರೆಜಿಲ್ಗೆ ಕಳುಹಿಸಲಾಯಿತು. ಅಲ್ಲಿ 6 ತಿಂಗಳುಗಳ ಕಾಲ ಉಳಿದುಕೊಂಡು ನಂತರ ಅಕ್ರಮವಾಗಿ ಅಮೆರಿಕ ಪ್ರವೇಶಿಸುವಂತೆ ನನ್ನನ್ನು ಒತ್ತಾಯಿಸಲಾಯಿತು. ಈ ಪ್ರಕ್ರಿಯೆಯಲ್ಲಿ ನಾನು ಅಮೆರಿಕಾದ ಗಡಿ ಗಸ್ತು ಪಡೆಗೆ ಸಿಕ್ಕಿಬಿದ್ದೆ. ಅಲ್ಲಿ 11 ದಿನಗಳ ಕಾಲ ನನ್ನನ್ನು ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು. ನನ್ನನ್ನು ಭಾರತಕ್ಕೆ ಗಡಿಪಾರು ಮಾಡುತ್ತಿದ್ದಾರೆಂಬ ಮಾಹಿದಿ ನನಗೆ ತಿಳಿದಿರಲಿಲ್ಲ. ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆಂದು ಭಾವಿಸಿದ್ದೆವು. ಪೊಲೀಸ್ ಅಧಿಕಾರಿಯೊಬ್ಬರು ಭಾರತಕ್ಕೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದರು. ನಮ್ಮನ್ನು ಸರಪಳಿಯಲ್ಲಿ ಬಂಧಿಸಿ ಭಾರತಕ್ಕೆ ಕರೆದೊಯ್ಯಲಾಗುತ್ತಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಅವುಗಳನ್ನು ತೆಗೆಯಲಾಗಿತ್ತು ಎಂದು ಹೇಳಿದ್ದಾರೆ.
ಅದೇ ರೀತಿ ಗಡಿಪಾರು ಶಿಕ್ಷೆಗೆ ಗುರಿಯಾದ ಮತ್ತೋರ್ವ ವಲಸಿಗ ಪಂಜಾಬ್ನ ಹೋಶಿಯಾರ್ಪುರದ ತಹ್ಲಿ ಗ್ರಾಮದವರಾದ ಹರ್ವಿಂದರ್ ಸಿಂಗ್ ಕೂಡ ತಮ್ಮ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಅಮೆರಿಕಕ್ಕೆ ತೆರಳಿದ್ದ ನಮ್ಮನ್ನು ಕತಾರ್, ಬ್ರೆಜಿಲ್, ಪೆರು, ಕೊಲಂಬಿಯಾ, ಪನಾಮ, ನಿಕರಾಗುವಾ, ಮೆಕ್ಸಿಕೋ ಮೂಲಕ ಅಮೆರಿಕಕ್ಕೆ ಕರೆದೊಯ್ಯಲಾಗಿತ್ತು.
ನಾವು ಬೆಟ್ಟಗಳನ್ನು ದಾಟಿದೆವು, ನದಿ ಮೂಲಕ ಪ್ರಯಾಣ ಮಾಡಿದೆವು. ಇತರ ಅಕ್ರಮ ವಲಸಿಗರನ್ನು ಕರೆದೊಯ್ಯುತ್ತಿದ್ದ ದೋಣಿಗಳು ನಮ್ಮ ಕಣ್ಣ ಮುಂದೆಯೇ ಮುಳುಗಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಏಜೆಟ್ ಮೊಲು ಯುರೋಪ್ಗೆ ಮತ್ತು ನಂತರ ಮೆಕ್ಸಿಕೊಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು. ಅಮೆರಿಕಾ ಪ್ರವಾಸಕ್ಕಾಗಿ 42 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೆ ಎಂದು ಹೇಳಿದ್ದಾರೆ.
ಮತ್ತೊರ್ವ ಭಾರತೀಯ ಮಾತನಾಡಿ, 30,000-35,000 ರೂ. ಮೌಲ್ಯದ ನಮ್ಮ ಬಟ್ಟೆಗಳನ್ನು ದಾರಿಯಲ್ಲಿ ಕದ್ದೊಯ್ಯಲಾಯಿತು. ಮೊದಲು ಇಟಲಿಗೆ ಮತ್ತು ನಂತರ ಲ್ಯಾಟಿನ್ ಅಮೆರಿಕಕ್ಕೆ ಕರೆದೊಯ್ಯಲಾಯಿತು. 15 ಗಂಟೆಗಳ ದೋಣಿ ವಿಹಾರ ಮಾಡಿ 40-45 ಕಿ.ಮೀ. ನಡೆಯುವಂತೆ ಮಾಡಿದರು. ಈ ವೇಳೆ 17-18 ಬೆಟ್ಟಗಳನ್ನು ದಾಟಿದ್ದೆವು. ಅಲ್ಲಿ ಜಾರಿ ಬಿದ್ದರೆ ಬದುಕುಳಿಯುವ ಸಾಧ್ಯತೆಗಳೇ ಇರಲಿಲ್ಲ. ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡದೆ, ಸಾಯಲು ಬಿಡುತ್ತಿದ್ದರು. ಮೃತದೇಹಗಳನ್ನೂ ನೋಡಿದ್ದೇವೆಂದು ತಿಳಿಸಿದ್ದಾರೆ.
Advertisement