
ನವದೆಹಲಿ: ಒಡಿಶಾದಲ್ಲಿ 15 ವರ್ಷದ ಬಾಲಕಿಯ ಮೇಲಿನ ದಾಳಿಯನ್ನು "ಅವಮಾನ" ಮತ್ತು "ದುರದೃಷ್ಟಕರ" ಘಟನೆ ಎಂದಿರುವ ಸುಪ್ರೀಂಕೋರ್ಟ್, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಬಲೀಕರಣ ಮತ್ತು ಸುರಕ್ಷಿತ ಆಶ್ರಯವನ್ನು ಒದಗಿಸುವ ಅಗತ್ಯವನ್ನು ಒತ್ತಿಹೇಳಿದೆ.
ದುರ್ಬಲ ಮತ್ತು ದನಿ ಇಲ್ಲದ ಗ್ರಾಮೀಣ ಪ್ರದೇಶದಲ್ಲಿನ ಬಾಲಕಿಯರು, ಗೃಹಿಣಿಯರು, ಶಾಲಾ ಬಾಲಕಿಯರ ಸಬಲೀಕರಣಕ್ಕಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ನಮಗೆ ಪ್ರತಿಯೊಬ್ಬರಿಂದ ಸಲಹೆಗಳು ಬೇಕಾಗುತ್ತವೆ. ನಮ್ಮ ನಿರ್ದೇಶನಗಳು ಪ್ರಭಾವ ಬೀರಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.
ಕೆಲವು ಅಲ್ಪಾವಧಿಯ ಮತ್ತು ದೀರ್ಘಾವಧಿಯ ನಿರ್ದೇಶನಗಳನ್ನು ತಕ್ಷಣ ಮತ್ತು ಭವಿಷ್ಯಕ್ಕಾಗಿ ನೀಡಬೇಕಾಗಿದೆ. ಇದರಿಂದ ತಾಲೂಕು ಮಟ್ಟದಲ್ಲಿ ವಾಸಿಸುವ ಮಹಿಳೆಯರಿಗೆ ಅರಿವು ಮೂಡಿಸಬೇಕಾಗಿದೆ. ಅರೆ ಕಾನೂನು ಸ್ವಯಂಸೇವಕರು, ವಿಶೇಷವಾಗಿ ಮಹಿಳೆಯರಿಗೆ ತರಬೇತಿ ನೀಡಿ ತಾಲೂಕು ಮಟ್ಟದಲ್ಲಿ ನೇಮಕ ಮಾಡಿಕೊಳ್ಳಬೇಕು, ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರ ಸಹಾಯವನ್ನೂ ತೆಗೆದುಕೊಳ್ಳಬಹುದು ಎಂದು ಪೀಠ ಹೇಳಿತು.
ಅರ್ಜಿದಾರರಾದ ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹಾಲಕ್ಷ್ಮಿ ಪಾವನಿ, ಎರಡು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ಸುಟ್ಟು ಹಾಕಲಾಗಿದ್ದು, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ. ಇದು ಎಷ್ಟು ದಿನ ಮುಂದುವರಿಯುತ್ತದೆ? ನ್ಯಾಯಾಲಯವು ಮಹಿಳೆಯರ ಸುರಕ್ಷತೆಗಾಗಿ ಕೆಲವು ನಿರ್ದೇಶನಗಳನ್ನು ನೀಡಬೇಕಾಗಿದೆ ಎಂದು ಮನವಿ ಮಾಡಿಕೊಂಡರು.
ನಮಗೆ ನಾಚಿಕೆಯಾಗುತ್ತಿದೆ ಮತ್ತು ಈ ಘಟನೆಗಳು ಇನ್ನೂ ನಡೆಯುತ್ತಿರುವುದು ದುರದೃಷ್ಟಕರವಾಗಿದೆ. ಇದು ವಿರೋಧಿ ದಾವೆಯಲ್ಲ, ನಮಗೆ ಕೇಂದ್ರ ಮತ್ತು ಎಲ್ಲಾ ಪಕ್ಷಗಳಿಂದ ಸಲಹೆಗಳು ಬೇಕಾಗುತ್ತದೆ ಎಂದು ಎಂದು ಹೇಳಿದ ನ್ಯಾಯ ಪೀಠ, ಮುಂದಿನ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.
ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಲೈಂಗಿಕ ಅಪರಾಧಿಗಳನ್ನು ಗುರುತಿಸಲು ಮತ್ತು ಸಮಯೋಚಿತ ಕ್ರಮಗಳಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಫೇಸ್ ಸ್ಕ್ಯಾನ್ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಹೇಳಿದರು.
Advertisement