ಈಶಾನ್ಯ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಲು ಯತ್ನ: ಭಾರತ ವಿರೋಧಿ ವಿಷಯಗಳ ಹಂಚಲು ಆ್ಯಪ್ ಮೂಲಕ ಆಮಿಷ, ಚೀನಾ ಕುತಂತ್ರ ಬಯಲು!

ಆ್ಯಪ್ ಗಳ ಮೂಲಕ ಮಣಿಪುರ, ಅಸ್ಸಾಂ ಮತ್ತು ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಜನಾಂಗೀಯ ಭಿನ್ನತೆ, ಪ್ರಾದೇಶಿಕ ಉದ್ವಿಗ್ನತೆ ಸೃಷ್ಟಿಸಲು ಚೀನಾ ಯತ್ನಿಸುತ್ತಿದ್ದು, ಈಶಾನ್ಯ ರಾಜ್ಯಗಳ ಜನರಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಹುಟ್ಟುಹಾಕಲು ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುತ್ತಿದೆ.
ರೆಡ್‌ನೋಟ್ ಆ್ಯಪ್
ರೆಡ್‌ನೋಟ್ ಆ್ಯಪ್
Updated on

ನವದೆಹಲಿ: ಭಾರತದ ಈಶಾನ್ಯ ರಾಜ್ಯ ನಿವಾಸಿಗಳ ಆಕರ್ಷಿಸಲು ಯತ್ನಿಸುತ್ತಿರುವ ಚೀನಾ, ಆ್ಯಪ್ ಮೂಲಕ ಭಾರತ ವಿರೋಧಿ ವಿಷಯಗಳನ್ನು ಹಂಚಿಕೊಳ್ಳುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಚೀನಾದ ರೆಡ್‌ನೋಟ್ ಆ್ಯಪ್'ನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಅರುಣಾಚಲ ಪ್ರದೇಶ, ಮಣಿಪುರ ಮತ್ತು ಅಸ್ಸಾಂ ಸೇರಿದಂತೆ ಅನೇಕ ಈಶಾನ್ಯ ರಾಜ್ಯಗಳ ನಿವಾಸಿಗಳನ್ನು ಗುರಿಯಾಗಿಸಿಕೊಂಡಿರುವ ಚೀನಾ, ಆನ್‌ಲೈನ್ ಅಪ್ಲಿಕೇಶನ್ ಮೂಲಕ ಹಣ ಮತ್ತು ಇತರ ಪ್ರಯೋಜನಗಳ ಆಮಿಷವೊಡ್ಡಿ ಭಾರತದ ವಿರೋಧಿ ವಿಷಯಗಳನ್ನು ಹಂಚಿಕೊಳ್ಳುವಂತೆ ಮಾಡುತ್ತಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ.

ರೆಡ್‌ನೋಟ್ ಸಾಮಾನ್ಯ ಅಪ್ಲಿಕೇಶನ್‌ನಂತೆ ಕಂಡು ಬಂದರೂ, ಸುಳ್ಳು ಸುದ್ದಿ, ತಪ್ಪಾದ ಭಾರತದ ನಕ್ಷೆ, ನಕಲಿ ವಿಡಿಯೋ ಹಾಗೂ ಪಾಕಿಸ್ತಾನ ಪರ ವಿಷಯಗಳನ್ನು ಹಂಚಿಕೊಳ್ಳುತ್ತಿದೆ ಎಂದು ತಿಳಿಸಿದೆ.

ಈಶಾನ್ಯ ರಾಜ್ಯಗಳ ಯುವಕರಲ್ಲಿ ಭಾರತದ ಬಗ್ಗೆ ಅಪನಂಬಿಕೆ ಸೃಷ್ಟಿಸುವ ಉದ್ದೇಶದಿಂದಲೇ ರೆಡ್‌ನೋಟ್ ಆ್ಯಪ್ ಸೃಷ್ಟಿಸಲಾಗಿದ್ದು, ಆ್ಯಪ್ ಮೂಲಕ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ದೆಹಲಿ ದೂರದಲ್ಲಿದ್ದು, ಚೀನಾ ಹತ್ತಿರದಲ್ಲಿದೆ ಎಂಬ ಸಂದೇಶಗಳನ್ನು ಪೋಸ್ಟ್ ಮಾಡಲಾಗುತ್ತಿದೆ ಎಂದು ಹೇಳಿದೆ.

ಈ ಆ್ಯಪ್ ಅನ್ನು ಈಶಾನ್ಯ ರಾಜ್ಯಗಳ ಜನರ ಮೇಲೆ ಪ್ರಭಾವ ಬೀರುವ ಸಲವಾಗಿಯೇ ಬಿಡುಗಡೆ ಮಾಡಿದ್ದಾರೆಂದು ತಜ್ಞರು ಹೇಳಿದ್ದಾರೆ.

ರೆಡ್‌ನೋಟ್ ಆ್ಯಪ್
ಚೀನಾ ಆ್ಯಪ್ ಗಳಿಗೆ ಮತ್ತೆ ಬರೆ ಹಾಕಿದ ಕೇಂದ್ರ: 54 ಆಪ್ ಗಳ ಮೇಲೆ ನಿಷೇಧ

ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಮಾತನಾಡಿ, ದೇಶದ ಭದ್ರತೆಯ ವಿಷಯದಲ್ಲಿ ಭಾರತದ ಈಶಾನ್ಯದ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಚೀನಾವು ಅಸ್ಥಿರತೆಯನ್ನು ಸೃಷ್ಟಿಸಲು ಆಫ್ರಿಕಾ, ತೈವಾನ್ ಮತ್ತು ಹಾಂಗ್ ಕಾಂಗ್‌ನಲ್ಲಿ ಬಳಸಿದ ತಂತ್ರವನ್ನೇ ಇಲ್ಲೂ ಬಳಸಲುತ್ತಿದೆ ಎಂದು ಹೇಳಿದ್ದಾರೆ.

ಚೀನಾದ ದುರುದ್ದೇಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಭಾರತ ಈ ಹಿಂದೆ ಟಿಕ್‌ಟಾಕ್, ಶೇರ್‌ಇಟ್, ಯುಸಿಬ್ರೌಸರ್, ಬೈದು ಮ್ಯಾಪ್, ಹಲೋ, ಎಂಐ ಕಮ್ಯೂನಿಟಿ, ಕ್ಲಬ್ ಫ್ಯಾಕ್ಟರಿ, ವಿಚಾಟ್, ವೆಬೋ, ಕ್ಲೀನ್ ಮಾಸ್ಟರ್, ಕ್ಯಾಮ್‌ಸ್ಕ್ಯಾನರ್ ಸಹಿತ ಒಟ್ಟು 59 ಆ್ಯಪ್‌ಗಳ ಮೇಲೆ ನಿಷೇಧ ಹೇರಿತ್ತು. ಇದೀಗ ರೆಡ್‌ನೋಟ್ ಮೇಲೂ ನಿಷೇಧ ಹೇರಲು ಚಿಂತನೆ ನಡೆಸುತ್ತಿದೆ.

ಕಳೆದ ಹಲವಾರು ವರ್ಷಗಳಿಂದ ಚೀನಾ ಅರುಣಾಚಲ ಪ್ರದೇಶದ ಮೇಲೆ ಭಾರತದ ಸಾರ್ವಭೌಮತ್ವವನ್ನು ಪ್ರಶ್ನೆ ಮಾಡುತ್ತಲೇ ಬಂದಿದೆ. ಅಲ್ಲದೆ, ಈ ರಾಜ್ಯವನ್ನು ತನ್ನ ನಕ್ಷೆಗಳಲ್ಲಿ ತನ್ನ ನಿಯಂತ್ರಣದಲ್ಲಿರುವ "ದಕ್ಷಿಣ ಟಿಬೆಟ್" ನ ಭಾಗ ಎಂದೂ ಬಿಂಬಿಸಿದೆ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಇದೀಗ ಆ್ಯಪ್ ಗಳ ಮೂಲಕ ಮಣಿಪುರ, ಅಸ್ಸಾಂ ಮತ್ತು ನಾಗಾಲ್ಯಾಂಡ್‌ನಂತಹ ರಾಜ್ಯಗಳಲ್ಲಿನ ಜನಾಂಗೀಯ ಭಿನ್ನತೆಗಳು ಮತ್ತು ಪ್ರಾದೇಶಿಕ ಉದ್ವಿಗ್ನತೆ ಸೃಷ್ಟಿಸಲು ಯತ್ನಿಸುತ್ತಿದೆ. ಈಶಾನ್ಯ ರಾಜ್ಯಗಳ ಜನರಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಹುಟ್ಟುಹಾಕಲು ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುತ್ತಿದೆ.

ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ಕೂಡ ಭಾರತೀಯ ನೀತಿಗಳನ್ನು ಗುರಿಯಾಗಿಸಿಕೊಂಡು ಸಂಪಾದಕೀಯಗಳನ್ನು ಪ್ರಕಟಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com