London | ಮಮತಾ ಬ್ಯಾನರ್ಜಿ ಭಾಷಣಕ್ಕೆ ಅಡ್ಡಿ: ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ, 'ನಾನು ಬಂಗಾಳದ ಹುಲಿ' ಎಂದು ಘರ್ಜಿಸಿದ ದೀದಿ; Video

ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೆಲ್ಲಾಗ್ ಕಾಲೇಜಿನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು, ʻಬಂಗಾಳದಲ್ಲಿ ಮಹಿಳಾ ಸಬಲೀಕರಣ ಮತ್ತು ಅದರ ಯಶಸ್ಸುʼ ವಿಚಾರದ ಬಗ್ಗೆ ಭಾಷಣ ಮಾಡುತ್ತಿದ್ದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Updated on

ನವದೆಹಲಿ: ಲಂಡನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾಷಣ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಅಡ್ಡಿಪಡಿಸಿದ ಘಟನೆ ಗುರುವಾರ ನಡೆದಿದೆ.

ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೆಲ್ಲಾಗ್ ಕಾಲೇಜಿನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು, ʻಬಂಗಾಳದಲ್ಲಿ ಮಹಿಳಾ ಸಬಲೀಕರಣ ಮತ್ತು ಅದರ ಯಶಸ್ಸುʼ ವಿಚಾರದ ಬಗ್ಗೆ ಭಾಷಣ ಮಾಡುತ್ತಿದ್ದರು.

ಈ ಮಧ್ಯೆ ಪೋಸ್ಟರ್‌ ಹಿಡಿದು ಎದ್ದು ನಿಂತಕೆಲ ವಿದ್ಯಾರ್ಥಿಗಳು 2023ರ ಸ್ಥಳೀಯ ಚುನಾವಣೆ ವೇಳೆ ಟಿಎಂಸಿ ನಡೆಸಿರುವ ಹಿಂಸಾಚಾರದಲ್ಲಿ 60 ಜನರು ಸಾವನ್ನಪ್ಪಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ. ಆರ್‌.ಜಿ.ಕರ್‌ ಕಾಲೇಜಿನ ಅತ್ಯಾಚಾರ. ಬಂಗಾಳದಲ್ಲಿ ಹೆಣ್ಮು ಮಕ್ಕಳಿಗೆ ರಕ್ಷಣೆ ಇಲ್ಲ. ಬಂಗಾಳಕ್ಕೆ ಹಿಂತಿರುಗಿ ಎಂಬ ಘೋಷಣೆಗಳನ್ನು ಕೂಗಿದರು. ಈ ಮೂಲಕ ಭಾಷಣಕ್ಕೆ ಅಡ್ಡಿಪಡಿಸಿದರು.

ಈ ವೇಳೆ ಘೋಷಣೆ, ಪ್ರತಿಭಟನೆಗೆ ಕ್ಯಾರೆ ಎನ್ನದ ಮಮತಾ ಅವರು, ಶಾಂತಚಿತ್ತದಿಂದ ತಮ್ಮ ಭಾಷಣವನ್ನು ಮುಂದುವರೆಸಿದರು.

ಇಲ್ಲಿ ರಾಜಕೀಯ ಮಾಡಬೇಡಿ. ಇದು ರಾಜಕೀಯ ವೇದಿಕೆಯಲ್ಲ. ನನ್ನ ರಾಜ್ಯಕ್ಕೆ ಬಂದು ನನ್ನೊಂದಿಗೆ ರಾಜಕೀಯ ಮಾಡಿ ಎಂದು ಹೇಳಿದರು.

ಇದನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಬೇಡಿ. ಬಂಗಾಳಕ್ಕೆ ಹೋಗಿ ನಿಮ್ಮ ಪಕ್ಷ ಬಲಪಡಿಸಿಕೊಂಡು ಹೋರಾಟ ಮುಂದುವರೆಸಿ, ಆಗ ನೀವು ನಮ್ಮೊಂದಿಗೆ ಹೋರಾಡಬಹುದು. ನನ್ನನ್ನು ಅವಮಾನಿಸುವ ಮೂಲಕ ನಿಮ್ಮ ಸಂಸ್ಥೆಗೆ ಅವಮಾನ ಮಾಡಬೇಡಿ. ನಾನು ದೇಶದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ನಿಮ್ಮ ದೇಶವನ್ನು ಅವಮಾನಿಸಬೇಡಿ. ಆರ್‌ಜಿ ಕರ್‌ ಕಾಲೇಜಿನ ಕೇಸ್‌ ಕೇಂದ್ರ ಸರ್ಕಾರದ ಕೈಲಿದೆ. ನಮ್ಮ ಕೈಲಿ ಏನು ಇಲ್ಲ ಎಂದು ಪ್ರತಿಭಟನಾಕಾರರಿಗೆ ಹೇಳಿದರು.

ನಂತರ ಪ್ರತಿಭಟನಾಕಾರರನ್ನು ಹೊರಗಡೆ ಕಳುಹಿಸಿದ ಆಯೋಜಕರು ಅನಿರೀಕ್ಷಿತ ಘಟನೆಗೆ ಮುಖ್ಯಮಂತ್ರಿಯವರಿಗೆ ವಿಷಾದ ವ್ಯಕ್ತಪಡಿಸಿದರು.

ನಂತರ ಮಾತಾನಾಡಿದ ಮಮತಾ ಬ್ಯಾನರ್ಜಿ ನನ್ನನ್ನು ಮತ್ತೆ ಮತ್ತೆ ಇಲ್ಲಿಗೆ ಬರಲು ಪ್ರೋತ್ಸಾಹಿಸಿದ್ದೀರಿ. ನೆನಪಿಡಿ, ದೀದಿಗೆ ಯಾರ ಬಗ್ಗೆಯೂ ಭಯವಿಲ್ಲ. ದೀದಿ ರಾಯಲ್ ಬೆಂಗಾಲ್ ಟೈಗರ್‌ನಂತೆ ನಡೆಯುತ್ತಾಳೆ. ಸಾಧ್ಯವಾದರೆ ನನ್ನನ್ನು ಹಿಡಿಯಲು ಪ್ರಯತ್ನಿಸಿ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಆಡಳಿತದಲ್ಲಿ ತಾರತಮ್ಯ ಇರುವುದಿಲ್ಲ, ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕೆ ಆದ್ಯತೆ ನೀಡಲಾಗುತ್ತದೆ. ನಾನು ಸಾಯುವ ಮೊದಲು ಏಕತೆಯನ್ನು ನೋಡಲು ಬಯಸುತ್ತೇನೆ. ಏಕತೆ ನಮ್ಮ ಶಕ್ತಿ, ಮತ್ತು ವಿಭಜನೆ ನಮ್ಮ ಪತನಕ್ಕೆ ಕಾರಣವಾಗುತ್ತದೆ. ಹೀಗೆಂದು ಸ್ವಾಮಿ ವಿವೇಕಾನಂದರು ಹೇಳಿದ್ದರು.

ಏಕತೆಯನ್ನು ಕಾಪಾಡಿಕೊಳ್ಳುವುದು ಕಷ್ಟದ ಕೆಲಸ, ಆದರೆ ಜನರನ್ನು ವಿಭಜಿಸಲು ಕೇವಲ ಒಂದು ಕ್ಷಣ ಸಾಕು. ನಾನು ಕುರ್ಚಿಯಲ್ಲಿದ್ದಾಗ, ಸಮಾಜವನ್ನು ವಿಭಜಿಸಲು ಸಾಧ್ಯವಿಲ್ಲ. ನಾನು ದುರ್ಬಲ ವರ್ಗಗಳು ಮತ್ತು ಬಡವರನ್ನು ನೋಡಿಕೊಳ್ಳಬೇಕು. ನಾವು ಅವರಿಗಾಗಿ ಶ್ರಮಿಸಬೇಕು. ಅದೇ ಸಮಯದಲ್ಲಿ, ನಾವು ಎಲ್ಲಾ ಧರ್ಮಗಳು, ಜಾತಿಗಳು ಮತ್ತು ಪಂಥಗಳಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಲಂಡನ್ ಪ್ರವಾಸದಲ್ಲಿ ಮಮತಾ ಬ್ಯಾನರ್ಜಿ ಕೈಗಾರಿಕೆ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ ಹಲವು ಸಭೆಗಳಲ್ಲಿ ಭಾಗವಹಿಸಿದರು. ಆದರೆ, ಕೆಲ್ಲಾಗ್ ಕಾಲೇಜಿನಲ್ಲಿ ಅವರ ಭಾಷಣವೇ ಪ್ರಮುಖ ಆಕರ್ಷಣೆಯಾಗಿತ್ತು.

ಆದರೆ, ಅಲ್ಲೇ ಪ್ರತಿಭಟನೆ ನಡೆದಿದ್ದು. ಮುಖ್ಯಮಂತ್ರಿ ಬ್ಯಾನರ್ಜಿ ವಿದೇಶದಲ್ಲಿ ಹೋರಾಟದ ಪರಿಸ್ಥಿತಿ ನಿಭಾಯಿಸಿದ ರೀತಿ ಹಲವರ ಹುಬ್ಬೇರುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com