Pahalgam attack ಮಾಸ್ಟರ್ ಮೈಂಡ್ Sheikh Sajjad Gul ಗೆ ಕರ್ನಾಟಕ-ಕೇರಳದ ನಂಟು!
ಬೆಂಗಳೂರು: ಕಳೆದ ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರನ್ನು ಬಲಿ ತೆಗೆದುಕೊಂಡಿದ್ದ ಉಗ್ರ ದಾಳಿ ಮಾಸ್ಟರ್ ಮೈಂಡ್ ಶೇಖ್ ಸಜ್ಜದ್ ಗುಲ್ ಗೆ ಕರ್ನಾಟಕ ಮತ್ತು ಕೇರಳದ ನಂಟಿತ್ತು ಎಂದು ತನಿಖೆಯಲ್ಲಿ ದೃಢಪಟ್ಟಿದೆ.
ದಾಳಿ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮಾಸ್ಟರ್ ಮೈಂಡ್ ಶೇಖ್ ಸಜ್ಜದ್ ಗುಲ್ ಕಾಶ್ಮೀರದಲ್ಲಿ ಲಷ್ಕರ್-ಎ-ತೈಬಾ (ಎಲ್ಇಟಿ) ಪ್ರಾಕ್ಸಿ, ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ನಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ. ಸಜ್ಜದ್ ಅಹ್ಮದ್ ಶೇಖ್ ಎಂದೂ ಕರೆಯಲ್ಪಡುವ ಗುಲ್, ಎಲ್ಇಟಿ ರಕ್ಷಣೆಯಲ್ಲಿ ಪ್ರಸ್ತುತ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿಕೊಂಡಿದ್ದಾನೆ ಎಂದು ವರದಿಯಾಗಿದೆ.
2020 ರಿಂದ 2024 ರವರೆಗೆ ಮಧ್ಯ ಮತ್ತು ದಕ್ಷಿಣ ಕಾಶ್ಮೀರದಲ್ಲಿ ನಡೆದ ಟಾರ್ಗೆಟ್ ಕಿಲ್ಲಿಂಗ್ಸ್, 2023 ರಲ್ಲಿ ಮಧ್ಯ ಕಾಶ್ಮೀರದಲ್ಲಿ ಗ್ರೆನೇಡ್ ದಾಳಿಗಳು ಮತ್ತು ಬಿಜ್ಬೆಹ್ರಾ, ಗಗಂಗೀರ್ನಲ್ಲಿ ಜೆ & ಕೆ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿಗಳು ಮತ್ತು ಗಂದರ್ಬಾಲ್ನ ಝಡ್-ಮೋರ್ಹ್ ಸುರಂಗ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಈತ ಸಂಬಂಧ ಹೊಂದಿದ್ದಾನೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಏಪ್ರಿಲ್ 2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಯೋತ್ಪಾದಕ ಎಂದು ಹೆಸರಿಸಿದ ಗುಲ್, ತಲೆ ಮೇಲೆ ರೂ 10 ಲಕ್ಷ ಬಹುಮಾನ ಘೋಷಿಸಲಾಗಿದೆ. ಪಹಲ್ಗಾಮ್ ದಾಳಿಯ ತನಿಖೆ ನಡೆಸುವ ತನಿಖಾಧಿಕಾರಿಗಳು ಅವನೊಂದಿಗೆ ಸಂವಹನ ಸಂಪರ್ಕವನ್ನು ಪತ್ತೆಹಚ್ಚಿದ್ದಾರೆ. ಪಹಲ್ಗಾಮ್ ದಾಳಿಯನ್ನು ಆಯೋಜಿಸುವಲ್ಲಿ ಅವನ ಪಾತ್ರವು ದೃಢಪಟ್ಟಿದೆ. ಹತ್ಯಾಕಾಂಡದ ಹೊಣೆ ಹೊತ್ತ ಟಿಆರ್ಎಫ್, ಅವರ ಆದೇಶದ ಮೇರೆಗೆ ಈತ ಕಾರ್ಯನಿರ್ವಹಿಸಿದ್ದ ಎಂದು ನಂಬಲಾಗಿದೆ.
ಅಧಿಕಾರಿಗಳ ಪ್ರಕಾರ, ಭಯೋತ್ಪಾದಕರು ಪ್ರವಾಸಿಗರನ್ನು ಅವರ ಧರ್ಮದ ಬಗ್ಗೆ ವಿಚಾರಿಸಿದ ನಂತರ, ಅವರಲ್ಲಿ 25 ಜನರನ್ನು ಪಾಯಿಂಟ್-ಬ್ಲಾಂಕ್ ರೇಂಜ್ನಲ್ಲಿ ಗುಂಡು ಹಾರಿಸಿ ಕೊಂದು ಹಾಕಿದ್ದರು. ಈ ವೇಳೆ ಸಂತ್ರಸ್ರನ್ನು ರಕ್ಷಿಸಲು ಪ್ರಯತ್ನಿಸಿದ ಸ್ಥಳೀಯ ಮಾರ್ಗದರ್ಶಿಯನ್ನೂ ಸಹ ಉಗ್ರರು ಕೊಂದು ಹಾಕಿದ್ದರು.
ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಗೂ ನಂಟು
ಇನ್ನು ಮಾಸ್ಟರ್ ಮೈಂಡ್ ಗುಲ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಗೂ ನಂಟು ಹೊಂದಿದ್ದ. ಈತ ಐಎಸ್ಐನ ಪ್ರಮುಖ ಏಜೆಂಟ್ ಆಗಿದ್ದು, ಪಂಜಾಬಿ ನೇತೃತ್ವದ ಎಲ್ಇಟಿಗೆ ಕಾಶ್ಮೀರ ಭಾಗದಲ್ಲಿ ಮುಂದಾಳತ್ವ ವಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ-ಕೇರಳ ನಂಟು
ಇನ್ನು ಈ ಗುಲ್ ಕರ್ನಾಟಕ ಮತ್ತು ಕೇರಳದ ಜೊತೆಗೂ ನಂಟು ಹೊಂದಿದ್ದ. ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಶಿಕ್ಷಣ ಪಡೆದಿದ್ದ ಈತ, ಬೆಂಗಳೂರಿನಲ್ಲಿ ಎಂಬಿಎ ಪದವಿ ವ್ಯಾಸಂಗ ಮಾಡಿದ್ದ ಎನ್ನಲಾಗಿದೆ. ನಂತರ ಕೇರಳದಲ್ಲಿ ಲ್ಯಾಬ್ ಟೆಕ್ನೀಷಿಯನ್ ಕೋರ್ಸ್ ಪಡೆದ. ಕಾಶ್ಮೀರಕ್ಕೆ ಹಿಂದಿರುಗಿದ ನಂತರ, ಈತ ರೋಗನಿರ್ಣಯ ಪ್ರಯೋಗಾಲಯ (ಮೆಡಿಕಲ್ ಲ್ಯಾಬ್)ವನ್ನು ಸ್ಥಾಪಿಸಿದ್ದ, ಅದನ್ನು ಈತ ಭಯೋತ್ಪಾದಕ ಗುಂಪಿಗೆ ಲಾಜಿಸ್ಟಿಕಲ್ ಬೆಂಬಲವನ್ನು ಒದಗಿಸಲು ಬಳಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಯೋತ್ಪಾದನೆಯೊಂದಿಗೆ ಗುಲ್ನ ಸಂಬಂಧಗಳು ಎರಡು ದಶಕಗಳಷ್ಟು ಹಳೆಯವು. 2002ರಲ್ಲಿ, ದೆಹಲಿ ಪೊಲೀಸರ ವಿಶೇಷ ಘಟಕವು ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ 5 ಕೆಜಿ ಆರ್ಡಿಎಕ್ಸ್ನೊಂದಿಗೆ ಈತನನ್ನು ಬಂಧಿಸಿತ್ತು. ರಾಜಧಾನಿಯಲ್ಲಿ ನಡೆದಿದ್ದ ಯೋಜಿತ ಬಾಂಬ್ ದಾಳಿ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಕೈಗೆ ಸಿಕ್ಕಿಬಿದ್ದಿದ್ದ. ಬಳಿಕ 2003ರಲ್ಲಿ ಈತ ಅಪರಾಧಿ ಎಂದು ಸಾಬೀತಾಗಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಬಳಿಕ 2017 ರಲ್ಲಿ ಬಿಡುಗಡೆಯಾದ ನಂತರ, ಗುಲ್ ಪಾಕಿಸ್ತಾನಕ್ಕೆ ತೆರಳಿದ್ದ. ಅಲ್ಲಿ 2019 ರಲ್ಲಿ ಐಎಸ್ಐ ಅವರನ್ನು ಟಿಆರ್ಎಫ್ ನೇತೃತ್ವ ವಹಿಸಲು ನೇಮಿಸಿತು. ಈ ಕ್ರಮವು ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಭಯೋತ್ಪಾದಕ ಗುಂಪಿನ ಭ್ರಮೆಯನ್ನು ಸೃಷ್ಟಿಸುವ ಪಾಕಿಸ್ತಾನದ ಕಾರ್ಯತಂತ್ರದ ಭಾಗವಾಗಿತ್ತು, ವಿಶೇಷವಾಗಿ 2019 ರ ಪುಲ್ವಾಮಾ ದಾಳಿಯ ನಂತರ, ಎಲ್ಇಟಿ ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ಬೆಂಬಲವನ್ನು ಜಾಗತಿಕವಾಗಿ ಖಂಡಿಸಲಾಯಿತು.
ಗುಲ್ ಕುಟುಂಬವು ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಇತಿಹಾಸವನ್ನು ಹೊಂದಿದೆ. ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಲ್ಲಿ ಮಾಜಿ ವೈದ್ಯರಾಗಿದ್ದ ಅವರ ಸಹೋದರ 1990 ರ ದಶಕದಲ್ಲಿ ಉಗ್ರಗಾಮಿಯಾಗಿದ್ದ. ಸೌದಿ ಅರೇಬಿಯಾ ಮತ್ತು ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿದ ನಂತರ, ಆತ ಈಗ ಗಲ್ಫ್ನಲ್ಲಿರುವ ಪರಾರಿಯಾದವರೊಂದಿಗೆ ಭಯೋತ್ಪಾದನೆಗೆ ಹಣಕಾಸು ಒದಗಿಸುವಲ್ಲಿ ಭಾಗಿಯಾಗಿದ್ದಾನೆಂದು ವರದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ