POK ಜನರು ಸ್ವಇಚ್ಛೆಯಿಂದ ಭಾರತಕ್ಕೆ ಮರಳುವ ದಿನ ದೂರವಿಲ್ಲ: ರಾಜನಾಥ್ ಸಿಂಗ್; Video

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಭಾರತದ ಭಾಗವಾಗಿದ್ದು, ಅವರು ಭಾರತದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ.
Rajnath Singh
ರಕ್ಷಣಾ ಸಚಿವ ರಾಜನಾಥ್ ಸಿಂಗ್
Updated on

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಭಾರತದ ಭಾಗವಾಗಿದ್ದು, ಅವರು ಸ್ವಇಚ್ಛೆಯಿಂದ ಭಾರತಕ್ಕೆ ಮರಳುವ ದಿನ ದೂರವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಸಿಐಐ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್ ಅವರು, ಪಾಕಿಸ್ತಾನದ ಬಗ್ಗೆ ಭಾರತದ ನೀತಿ ವಿಧಾನವನ್ನು ವಿವರಿಸಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಭಾರತದ ಭಾಗವಾಗಿದ್ದು, ಅವರು ಭಾರತದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ. ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕವಾಗಿದ್ದರೂ ಪಿಒಕೆ ಜನರು ಒಂದು ದಿನ ಸ್ವಾಭಿಮಾನ ಮತ್ತು ಸ್ವಇಚ್ಛೆಯೊಂದಿಗೆ ಭಾರತಕ್ಕೆ ಮರಳುತ್ತಾರೆಂಬ ವಿಶ್ವಾಸವಿದೆ. ಅಲ್ಲಿನ ಹೆಚ್ಚಿನ ಜನರು ಭಾರತದೊಂದಿಗೆ ಸಂಪರ್ಕ ಹೊಂದಿದ್ದಾರೆ, ದಾರಿ ತಪ್ಪಿದ ಕೆಲವೇ ಜನರು ಅಲ್ಲಿದ್ದಾರೆ ಎಂದು ಹೇಳಿದರು.

ಭಾರತ ಅವರನ್ನು ನಮ್ಮ ಕುಟುಂಬದ ಭಾಗವೆಂದು ಪರಿಗಣಿಸುತ್ತದೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ನಮ್ಮವರು, ನಮ್ಮ ಕುಟುಂಬದ ಭಾಗ ಎಂದು ನಾನು ನಂಬುತ್ತೇನೆ. ನಮ್ಮಿಂದ ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಬೇರ್ಪಟ್ಟ ನಮ್ಮ ಸಹೋದರರು ಸಹ ಒಂದು ದಿನ ಅವರ ಆತ್ಮದ ಧ್ವನಿಯನ್ನು ಕೇಳುತ್ತಾ ಭಾರತಕ್ಕೆ ಮರಳುತ್ತಾರೆಂಬ ವಿಶ್ವಾಸ ನನಗಿದೆ.

ಭಾರತ ಯಾವಾಗಲೂ ಹೃದಯಗಳನ್ನು ಸಂಪರ್ಕಿಸುವ ಬಗ್ಗೆ ಮಾತನಾಡುತ್ತದೆ, ಪ್ರೀತಿ, ಏಕತೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವ ಮೂಲಕ, ನಮ್ಮದೇ ಆದ ಭಾಗವಾದ ಪಿಒಕೆ ಒಂದು ಭಾರತಕ್ಕೆ ಹಿಂತಿರುಗಿ ನಾನು ಭಾರತದ ಭಾಗ ಎಂದು ಹೇಳುವ ದಿನ ದೂರವಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ ಅವರು, ಭಯೋತ್ಪಾದನೆ ನೀಡುವ ಬೆಂಬಲಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಅದರ ಅನುಭವ ಇಸ್ಲಾಮಾಬಾದ್'ಗೆ ಆಗಿದೆ ಎಂದರು.

ಭಾರತದ ರಕ್ಷಣಾ ರಫ್ತು 10 ವರ್ಷಗಳ ಹಿಂದೆ 1,000 ಕೋಟಿ ರೂ.ಗಳಿಗಿಂತ ಕಡಿಮೆಯಿತ್ತು. ಆದರೆ, ಈಗ ಅದು 23,500 ಕೋಟಿ ರೂ.ಗಳ ದಾಖಲೆಯ ಸಂಖ್ಯೆಯನ್ನು ತಲುಪಿದೆ. ಇಂದು, ಭಾರತದ ಭದ್ರತೆ ಮತ್ತು ಸಮೃದ್ಧಿಗೆ ರಕ್ಷಣೆಯಲ್ಲಿ ಮೇಕ್-ಇನ್-ಇಂಡಿಯಾ ಅತ್ಯಗತ್ಯ ಎಂಬುದು ಸಾಬೀತಾಗಿದೆ ಎಂದು ಹೇಳಿದರು.

ಇದೇ ವೇಳೆ ಆಪರೇಷನ್ ಸಿಂಧೂರ್ ಬಗ್ಗೆ ಉಲ್ಲೇಖಿಸಿದ ಅವರು, ಈ ಕಾರ್ಯಾಚರಣೆಯಲ್ಲಿ ಭಾರತ ಮೊದಲು ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು ಮತ್ತು ನಂತರ ಶತ್ರುಗಳ ಸೇನಾ ನೆಲೆಗಳು ಮತ್ತು ವಾಯುನೆಲೆಗಳನ್ನು ನಾಶಪಡಿಸಿತು. ನಾವು ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು, ಆದರೆ, ಅಧಿಕಾರದ ಜೊತೆಗೆ ಸಂಯಮವೂ ಅಗತ್ಯವಿದೆ. ಭಾರತವು ಈ ಸಂಯಮ ಮತ್ತು ಶಕ್ತಿಯ ಸಮನ್ವಯದ ಅದ್ಭುತ ಉದಾಹರಣೆಯನ್ನು ಜಗತ್ತಿಗೆ ತಿಳಿಸಿದೆ ಎಂದು ತಿಳಿಸಿದರು.

ರಕ್ಷಣಾ ವಲಯದಲ್ಲಿ ಸ್ವಾವಲಂಬನೆಗೆ ಒತ್ತು ನೀಡುವ ಮೂಲಕ AMCA ಯ 5 ಮೂಲಮಾದರಿಗಳನ್ನು ತಯಾರಿಸಲಾಗುವುದು ಎಂದು ಇದೇ ವೇಳೆ ರಾಜನಾಥ್ ಸಿಂಗ್ ಹೇಳಿದರು.

ಇತ್ತೀಚೆಗೆ ಸುಧಾರಿತ ಮಧ್ಯಮ ಯುದ್ಧ ವಿಮಾನ (AMCA) ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದು 5ನೇ ತಲೆಮಾರಿನ ಯುದ್ಧ ವಿಮಾನವಾಗಿದ್ದು, ಇದನ್ನು ಭಾರತದಲ್ಲೇ ತಯಾರಿಸಲಾಗುವುದು. ಈ ಯೋಜನೆಯಡಿಯಲ್ಲಿ 5 ಮೂಲಮಾದರಿಗಳನ್ನು ತಯಾರಿಸಲಾಗುವುದು, ನಂತರ ಸಾಮೂಹಿಕ ಉತ್ಪಾದನೆ ಪ್ರಾರಂಭವಾಗುತ್ತದೆ ಎಂದು ಹೇಳಿದರು.

ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಇದು ಒಂದು ದೊಡ್ಡ ಹೆಜ್ಜೆಯಾಗಿದ್ದು, ಖಾಸಗಿ ವಲಯವು ಮೊದಲ ಬಾರಿಗೆ ಪ್ರಮುಖ ರಕ್ಷಣಾ ಯೋಜನೆಯಲ್ಲಿ ತೊಡಗಿಸಿಕೊಂಡಿದೆ. ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ಏರೋಸ್ಪೇಸ್ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ದಿಟ್ಟ ಮತ್ತು ನಿರ್ಣಾಯಕ ನಿರ್ಧಾರ ಇದಾಗಿದೆ ಎಂದು ಬಣ್ಣಿಸಿದರು.

Rajnath Singh
ಭಯೋತ್ಪಾದನೆಗೆ ಪ್ರೋತ್ಸಾಹ: ಪಾಕಿಸ್ತಾನಕ್ಕೆ ನೀಡಿರುವ ಹಣಕಾಸು ನೆರವು ಮರುಪರಿಶೀಲಿಸಿ; IMFಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒತ್ತಾಯ

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ಮೇಕ್ ಇನ್ ಇಂಡಿಯಾದ ಯಶಸ್ಸನ್ನು ಸಾಬೀತುಪಡಿಸಿದೆ. ಭಾರತದ ಭದ್ರತೆ ಮತ್ತು ಸಮೃದ್ಧಿಗೆ ಮೇಕ್ ಇನ್ ಇಂಡಿಯಾ ಅಗತ್ಯ ಎಂಬುದು ಇದರಿಂದ ಸ್ಪಷ್ಟವಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ, ಭಾರತದ ಸ್ಥಳೀಯ ವ್ಯವಸ್ಥೆಯು ಯಾವುದೇ ಶತ್ರು ರಕ್ಷಾ ಕವಚವನ್ನು ಭೇದಿಸುವ ಶಕ್ತಿಯನ್ನು ಪ್ರದರ್ಶಿಸಿತು, ಇದು ಇಡೀ ಜಗತ್ತನ್ನು ಅಚ್ಚರಿಗೊಳಿಸಿತು. ಭಾರತದ ಶಕ್ತಿಯನ್ನು ಜಗತ್ತು ನೋಡಿದೆ ಎಂದರು.

ಇದೇ ವೇಳೆ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಉಲ್ಲೇಖಿಸಿದ ಅವರು, ಭಾರತ ಈಗ ಯುದ್ಧ ವಿಮಾನಗಳು ಅಥವಾ ಕ್ಷಿಪಣಿ ವ್ಯವಸ್ಥೆಗಳನ್ನು ತಯಾರಿಸುವುದಲ್ಲದೆ, ಹೊಸ ಯುಗದ ಯುದ್ಧ ತಂತ್ರಜ್ಞಾನಗಳಿಗೂ ಸಿದ್ಧವಾಗುತ್ತಿದೆ ಎಂದು ಹೇಳಿದರು.

ಭಾರತವು ಈಗ ಕೃತಕ ಬುದ್ಧಿಮತ್ತೆ, ಸೈಬರ್ ರಕ್ಷಣೆ, ಮಾನವರಹಿತ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ಆಧಾರಿತ ಭದ್ರತೆಯಂತಹ ಕ್ಷೇತ್ರಗಳಲ್ಲಿ ಜಾಗತಿಕ ವೇದಿಕೆಯಲ್ಲಿ ತನ್ನ ಬಲವಾದ ಹಿಡಿತವನ್ನು ಸಾಧಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತು ವೇಗವಾಗಿ ಬೆಳೆದಿದೆ ಎಂದು ಹೇಳಿದರು.

Rajnath Singh
ಭಾರತ-ಪಾಕ್ ಕದನ ವಿರಾಮ: ಪದೇಪದೆ ಅಮೆರಿಕ ಹೇಳಿಕೆ ಕುರಿತು ಮೋದಿ ಮೌನ ಮುರಿಯಲಿ; ಕಾಂಗ್ರೆಸ್ ಆಗ್ರಹ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com