

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ರಸ್ತೆ ಬದಿ ವ್ಯಾಪಾರಿಗೆ ಝಲ್ಮುರಿ (jhalmuri) ತಿಂದು 10 ರೂಪಾಯಿ ನಗದು ಪಾವತಿಸಿದ ವಿಚಾರ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಹೌದು.. ಇದೇ ಏಪ್ರಿಲ್ 19 ರಂದು ಪಶ್ಚಿಮ ಬಂಗಾಳದ ಝಾರ್ಗ್ರಾಮ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆಬದಿಯ ವ್ಯಾಪಾರಿಗೆ ಝಲ್ಮುರಿ (jhalmuri) ತಿಂದು 10 ರೂಪಾಯಿ ನಗದು ಪಾವತಿಸಿದ್ದರು.
ನಗದು ರಹಿತ ವಹಿವಾಟುಗಳ ಕುರಿತು ಹೆಮ್ಮೆಯಿಂದ ಮಾತನಾಡುವ ಪ್ರಧಾನಿ ಮೋದಿ ಅವರೇ ಸ್ವತಃ ನಗದು ಪಾವತಿಸಿರುವುದು ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಅಂತೆಯೇ ಇದು ಪ್ರಧಾನಿ ನರೇಂದ್ರ ಮೋದಿ ಅವರ 'ಡಿಜಿಟಲ್ ಇಂಡಿಯಾ' ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇಷ್ಟಕ್ಕೂ ಆಗಿದ್ದೇನು?
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ವಿಕ್ರಮ್ ಶಾ ಎಂಬುವವರ ಅಂಗಡಿಯ ಬಳಿ ಅನಿರೀಕ್ಷಿತವಾಗಿ ನಿಂತು 10 ರೂಪಾಯಿಯ ತಿಂಡಿ ಸವಿದರು. ನಂತರ ಅದರ ಹಣವನ್ನು ಕೊಡಲು ಹೋದಾಗ ವ್ಯಾಪಾರಿ ನಿರಾಕರಿಸಿದರು.
ಆದರೂ ಮೋದಿ ಅವರು ಒತ್ತಾಯಪೂರ್ವಕವಾಗಿ 10 ರೂಪಾಯಿ ನೋಟನ್ನು ನೀಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಅಂತೆಯೇ ನಗದು ವಹಿವಾಟಿನ ಕುರಿತೂ ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಪ್ರಧಾನಿ ಮೋದಿ ನಗದು ನೀಡಿದ್ದಕ್ಕೆ ಕಾರಣವೇನು?
ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಬೆಂಬಲಿಗರು ಇದನ್ನು ಸಮರ್ಥಿಸಿಕೊಂಡಿದ್ದು, ವ್ಯಾಪಾರಿಯ ಬಳಿ UPI ಕ್ಯೂಆರ್ ಕೋಡ್ ಇದ್ದರೂ ಸಹ, ಪ್ರಧಾನಿ ನೀಡಿದ 10 ರೂಪಾಯಿ ನೋಟು ಆ ಬಡ ವ್ಯಾಪಾರಿಗೆ ಒಂದು 'ನೆನಪಿನ ಕಾಣಿಕೆ'ಯಾಗಿ (Souvenir) ಉಳಿಯುತ್ತದೆ ಎಂಬುದು ಅವರ ವಾದ. ಡಿಜಿಟಲ್ ಪಾವತಿ ಮಾಡಿದರೆ ಅಂತಹ ನೆನಪು ಉಳಿಯುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟೀಕೆಗಳು
ಮತ್ತೊಂದೆಡೆ, ವಿರೋಧ ಪಕ್ಷದ ನಾಯಕರು ಮತ್ತು ಟೀಕಾಕಾರರು ಇದನ್ನು ವ್ಯಂಗ್ಯ ಮಾಡಿದ್ದಾರೆ. ದೇಶಾದ್ಯಂತ ಡಿಜಿಟಲ್ ಇಂಡಿಯಾ ಮತ್ತು UPI ಅನ್ನು ಉತ್ತೇಜಿಸುವ ಪ್ರಧಾನಿಯವರೇ ನಗದು ಬಳಸಿದ್ದು ವಿಪರ್ಯಾಸ ಎಂದು ಅವರು ಪ್ರಶ್ನಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ ಈ ಬಗ್ಗೆ ಲೇವಡಿ ಮಾಡಿದ್ದಾರೆ.
ಒಟ್ಟಾರೆಯಾಗಿ, ಈ ಘಟನೆಯು ಚುನಾವಣಾ ಪ್ರಚಾರದ ನಡುವೆ "ಮುರಿ ಪೇ ಚರ್ಚಾ" (Muri Pe Charcha) ಎಂಬ ಹೆಸರಿನಲ್ಲಿ ಭಾರೀ ಸದ್ದು ಮಾಡುತ್ತಿದೆ.
Advertisement