

ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ನಡುವೆ ಉಲ್ಬಣಗೊಂಡಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತಾದ ಪ್ರತಿಭಟನಾ ಸಭೆಯೊಂದರಲ್ಲಿ ನಟಿ ತ್ರಿಶಾ ಅವರನ್ನು ಅವಮಾನಿಸಿದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿನ ನೀರಿನ ಬಿಕ್ಕಟ್ಟಿನ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕಾಳಜಿ ವಹಿಸುತ್ತಿಲ್ಲ ಎಂದು ಉದಯನಿಧಿ ಟೀಕಿಸುತ್ತಿದ್ದಾಗ, ನೆರೆದಿದ್ದ ಜನರು ತ್ರಿಷಾ, ತ್ರಿಷಾ" ಎಂದು ಕೂಗಲು ಪ್ರಾರಂಭಿಸಿದ್ದಾರೆ. ಆಗ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ಉದಯ ನಿಧಿ ಸ್ಟಾಲಿನ್, ತ್ರಿಶಾ ಕುರಿತು ದ್ವಂದ್ವಾರ್ಥದ ಹೇಳಿಕೆಯೊಂದನ್ನು ನೀಡಿದ್ದಾರೆ. ಇದೊಂದು ಅಶ್ಲೀಲ ಮತ್ತು ಅವಮಾನಕಾರಿ ಹೇಳಿಕೆಯಾಗಿದೆ ಎಂದು ಟಿವಿಕೆ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯಿಸಿರುವ ಖುಷ್ಬೂ, ಉದಯನಿಧಿ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಅವರ ಭಾಷಣವನ್ನು ಕೇಳಿದೆ. ಅದು ಅತ್ಯಂತ ಅಸಭ್ಯ, ಕೀಳುಮಟ್ಟದ ಮತ್ತು ತೀವ್ರ ಅವಮಾನಕಾರಿಯಾಗಿದೆ. ಅವರು ಯಾವ ರಾಜಕೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೋ, ಅದನ್ನೇ ಇದು ಪ್ರತಿಬಿಂಬಿಸುತ್ತದೆ. ಇಂತಹ ಮನಸ್ಥಿತಿಯವರು ರಾಜಕೀಯ ಪಕ್ಷವನ್ನು ಮುನ್ನಡೆಸಲು ಮತ್ತು ಮುಂದೆ ರಾಜ್ಯವನ್ನು ಆಳಲು ಬಯಸಿದರೆ, ದೇವರೇ ನಮ್ಮನ್ನು ಕಾಪಾಡಬೇಕು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಿಳೆಯರನ್ನು ನಿಂದಿಸುವುದು, ಕೀಳಾಗಿ ಕಾಣುವುದು ಮತ್ತು ಅವಮಾನಿಸುವುದನ್ನೇ ಒಂದು ರೀತಿಯ 'ರಾಜಕೀಯ ಪ್ರದರ್ಶನ'ವನ್ನಾಗಿ ಪರಿಗಣಿಸಿ, ತಮ್ಮ ನಿಷ್ಠಾವಂತ ಬೆಂಬಲಿಗರ ಚಪ್ಪಾಳೆ, ಶಿಳ್ಳೆ ಮತ್ತು ನಗುವಿನಲ್ಲಿ ಆನಂದಿಸುವವರಿಂದ ನಾವು ಬೇರೇನನ್ನಾದರೂ ನಿರೀಕ್ಷಿಸಲು ಸಾಧ್ಯವೇ? ಮತ್ತು ಇದಕ್ಕಿಂತ ಚೆನ್ನಾಗಿ ಇದನ್ನು ಇನ್ನಾರು ಬಲ್ಲರು?" ಎಂದು ಖುಷ್ಬೂ ಪ್ರಶ್ನಿಸಿದ್ದಾರೆ. ತಮ್ಮ ಹೇಳಿಕೆಗಾಗಿ ತ್ರಿಶಾ ಬೇಷರತ್ ಕ್ಷಮೆ ಯಾಚಿಸುವಂತೆ ಉದಯನಿಧಿ ಅವರನ್ನು ಆಗ್ರಹಿಸಿದ್ದಾರೆ.