

ಚೆನ್ನೈ: "ಕಾವೇರಿ ನದಿ ತಮಿಳುನಾಡಿನ ಜೀವನಾಡಿ. ಇದರ ಸುತ್ತ ಕೀಳು ಮಟ್ಟದ ರಾಜಕೀಯ ಮಾಡಲು ನಮಗೆ ಇಷ್ಟವಿಲ್ಲ," ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಹೇಳಿದ್ದಾರೆ.
ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಯೋಜನೆ ಹಾಗೂ ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ವಿಜಯ್ ಅವರು ಮಾತನಾಡಿದರು.
ತಮಿಳುನಾಡಿನ ರೈತರ ಹಿತರಕ್ಷಣೆಗಾಗಿ ತಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಮೇಕೆದಾಟು ವಿಷಯದ ಕುರಿತು ಸರ್ವಪಕ್ಷ ಸಭೆ ಕರೆಯಬೇಕೆಂಬ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಒತ್ತಾಯವನ್ನು ನೇರವಾಗಿ ತಿರಸ್ಕರಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದೊಂದಿಗೆ ನೇರ ಮಾತುಕತೆ ನಡೆಸಲು ಮುಂದಾಗಲಾಗಿತ್ತು. ಸಮಸ್ಯೆಗೆ ಸಕಾರಾತ್ಮಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಪ್ರಯತ್ನ ಮಾಡಿದ್ದು, ಕಾವೇರಿ ವಿಚಾರದಲ್ಲಿ ತುಚ್ಛ ರಾಜಕಾರಣ ಮಾಡಲು ತಾವು ಬಯಸುವುದಿಲ್ಲ ಎಂದು ಹೇಳಿದರು.
1969ರಿಂದಲೂ ಕಾವೇರಿ ವಿವಾದದಲ್ಲಿ ತಮಿಳುನಾಡು ಅನುಸರಿಸಿಕೊಂಡು ಬಂದ ಹಾದಿಯನ್ನು ವಿವರಿಸಿದ ಅವರು, ಮಾತುಕತೆಯಿಂದ ಹಿಡಿದು ನ್ಯಾಯಾಲಯದ ಕಾನೂನು ಹೋರಾಟದವರೆಗಿನ ಬೆಳವಣಿಗೆಗಳನ್ನು ಸದನದ ಗಮನಕ್ಕೆ ತಂದರು.
ಕಾವೇರಿ ವಿವಾದವನ್ನು ಕಾನೂನು ಹೋರಾಟದ ಮೂಲಕವೇ ಎದುರಿಸುವ ನಿಲುವಿನಲ್ಲಿ ತಮ್ಮ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಪುನರುಚ್ಚರಿಸಿದ ವಿಜಯ್, ಅದರ ಜತೆಗೆ ಮಾತುಕತೆ ಮೂಲಕವೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಭೇಟಿ ನೀಡಿ ಕರ್ನಾಟಕ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಪ್ರಸ್ತಾಪ ಮಾಡಿದ್ದುದಾಗಿಯೂ ಅವರು ತಿಳಿಸಿದರು.
ತಮಿಳುನಾಡಿನ ಜನರ ಹಿತಾಸಕ್ತಿಗಾಗಿ ಕಾವೇರಿ ವಿಚಾರದಲ್ಲಿ ಮಾತುಕತೆ ನಡೆಸುವಾಗ ಯಾವುದೇ ಅವಮಾನ ಎದುರಾದರೂ ಅದನ್ನು ಸಹಿಸಲು ನಾನು ಸಿದ್ಧನಿದ್ದೇನೆ. ಪರಸ್ಪರ ವೈರಾಗ್ಯ ಹೊಂದಿರುವ ರಾಷ್ಟ್ರಗಳೂ ತಮ್ಮ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಲು ಮುಂದಾಗುತ್ತವೆ. ಹಾಗಿರುವಾಗ ನೆರೆಯ ರಾಜ್ಯವಾದ ಕರ್ನಾಟಕದೊಂದಿಗೆ ಸಂವಾದ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದು ತಪ್ಪಲ್ಲ ಎಂಬ ನಂಬಿಕೆ ನನ್ನದು" ಎಂದು ಹೇಳಿದರು.