

ದೆಹಲಿ: ಅಕ್ರಮ ನುಸುಳುಕೋರರಿಗೆ ದೇಶವನ್ನು ಮುಕ್ತವಾಗಿಸಲು ಭಾರತವೇನು ಧರ್ಮಶಾಲೆ (ಧರ್ಮಛತ್ರ) ಅಲ್ಲ. ಒಳನುಸುಳುಕೋರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಗುಪ್ತಚರ ಬ್ಯೂರೋದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ದೇಶದ ಆಂತರಿಕ ಭದ್ರತೆ ಬಲವಾಗಿರಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭವಿಷ್ಯದಲ್ಲಿ ಒಳನುಸುಳುವಿಕೆ, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಹೊಸ ಭದ್ರತಾ ಸವಾಲುಗಳನ್ನು ಮುಂಚಿತವಾಗಿ ಗುರುತಿಸಬೇಕು ಮತ್ತು ಕಾರ್ಯತಂತ್ರಗಳನ್ನು ಸಿದ್ಧಪಡಿಸಬೇಕು ಎಂದು ಅವರು ಸಲಹೆ ನೀಡಿದರು.
ಅಕ್ರಮ ಒಳನುಸುಳುವಿಕೆಯು ರಾಷ್ಟ್ರೀಯ ಭದ್ರತೆ, ಆರ್ಥಿಕತೆ ಮತ್ತು ದೇಶದ ಜನಸಂಖ್ಯಾ ಸಮತೋಲನಕ್ಕೆ ಗಂಭೀರ ಬೆದರಿಕೆಗಳನ್ನೊಡ್ಡಿದೆ. ಈ ದೇಶದ ಹಕ್ಕುಗಳು ಇಲ್ಲಿನ ನಾಗರಿಕರಿಗೆ ಮಾತ್ರವೇ ಮೀಸಲಾಗಿವೆ ಎಂದ ಅವರು, ಅಕ್ರಮ ಒಳನುಸುಳುವಿಕೆ ವಿರುದ್ಧ ಸರ್ಕಾರ ಕಠಿಣ ನಿಲುವು ತೆಳೆದಿರುವುದಾಗಿದೆ ಎಂದು ಹೇಳಿದ್ದಾರೆ.
ಕಳೆದ ಎಂಟು ತಿಂಗಳುಗಳಲ್ಲಿ ನೆರೆಯ ದೇಶಗಳೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ಎಲ್ಲ ರಾಜ್ಯಗಳಿಗೆ ಭೇಟಿ ನೀಡಲಾಗಿದೆ. ಗಡಿ ಭದ್ರತೆಗೆ ಸಂಬಂಧಿಸಿದ ನಾಲ್ಕು ಹಂತದ ಕಾರ್ಯತಂತ್ರದ ದಾಖಲೆಯನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳಲಾಗಿದೆ. ಅತ್ಯಲ್ಪ ಅವಧಿಯಲ್ಲಿ ದೇಶವನ್ನು ಒಳನುಸುಳುಕೋರರಿಂದ ಮುಕ್ತಗೊಳಿಸುವುದು ನಮ್ಮ ಗುರಿಯಾಗಿದೆ.
ಒಳನುಸುಳುವಿಕೆಯು ಕೇವಲ ಗಡಿ ನಿರ್ವಹಣೆಗೆ ಸಂಬಂಧಿಸಿದ ವಿಷಯವಲ್ಲ. ಬದಲಾಗಿ ಅದು ದೇಶದ ಭದ್ರತೆ, ಆರ್ಥಿಕತೆ ಮತ್ತು ಜನಸಂಖ್ಯಾ ರಚನೆಯ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ. ಅಕ್ರಮ ಒಳನುಸುಳುವಿಕೆ ಹಾಗೂ ಉದ್ಭವಿಸುತ್ತಿರುವ ಇತರ ಆಂತರಿಕ ಭದ್ರತಾ ಸವಾಲುಗಳನ್ನು ಗುರುತಿಸಿ ಎದುರಿಸಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಬಲವಾದ ಸಮನ್ವಯದ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವರು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. ಈ ಗುರಿಯನ್ನು ಸಾಧಿಸಲು ಬಲವಾದ ಆಂತರಿಕ ಭದ್ರತೆಯು ಅತ್ಯಗತ್ಯವಾದ ಮೊದಲ ಷರತ್ತಾಗಿದೆ. ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ನಿಲ್ಲಬೇಕಾದರೆ, ಅದರ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದರು.
ಕ್ರಿಮಿನಲ್ ನ್ಯಾಯ ಸುಧಾರಣೆಗಳ ಕುರಿತು, ಮುಂದಿನ ವರ್ಷದೊಳಗೆ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಶಾ ಹೇಳಿದರು. ಮೂರು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಪರಿಹರಿಸಬಹುದು ಮತ್ತು ಶಿಕ್ಷೆಯ ಪ್ರಮಾಣವನ್ನು ಶೇಕಡಾ 25 ರಷ್ಟು ಹೆಚ್ಚಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಸುಧಾರಣೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.
ಹಿಂದಿನ ಸರ್ಕಾರಗಳು ಮಾದಕ ವಸ್ತುಗಳ ಹಾವಳಿ, ನಕ್ಸಲಿಸಂ ಮತ್ತು ಈಶಾನ್ಯ ಭಾರತದ ಸಮಸ್ಯೆಗಳು ಗಂಭೀರ ಸ್ವರೂಪವನ್ನು ಪಡೆಯುವ ಮುನ್ನವೇ ಅವುಗಳನ್ನು ಗುರುತಿಸಿ ಪರಿಹರಿಸದ್ದಿದ್ದರೆ, ದೇಶವು ದಶಕಗಳ ಕಾಲ ಅವುಗಳಿಂದ ತೊಂದರೆಗೆ ಒಳಗಾಗುತ್ತಿರಲಿಲ್ಲ. ಆಂತರಿಕ ಭದ್ರತೆಯ ದೃಷ್ಟಿಯಿಂದ ಈ ಮೂರೂ ಕ್ಷೇತ್ರಗಳಲ್ಲಿನ ಪ್ರಮುಖ ಸವಾಲುಗಳನ್ನು ನಾವು ನಿವಾರಿಸಿದ್ದೇವೆ. ಇದರ ಸಂಪೂರ್ಣ ಶ್ರೇಯಸ್ಸು ಎಲ್ಲ ರಾಜ್ಯಗಳ ಪೊಲೀಸ್ ಪಡೆಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ಸಲ್ಲುತ್ತದೆ ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ಮುಂದಿನ 15 - 20 ವರ್ಷಗಳ ಪ್ರವೃತ್ತಿಗಳನ್ನು ಅಧ್ಯಯನ ಮಾಡುವ ಮೂಲಕ ಭವಿಷ್ಯದತ್ತ ಗಮನಹರಿಸುವಂತೆ, ಸವಾಲುಗಳು ಗಂಭೀರ ಸ್ವರೂಪ ಪಡೆಯುವ ಮೊದಲೇ ಅವುಗಳನ್ನು ಗುರುತಿಸಿ ತಡೆಯಲು ಅಗತ್ಯ ತಂತ್ರಗಳನ್ನು ರೂಪಿಸುವಂತೆ ಎನ್ಎಸ್ಎಸ್ಸಿಗೆ ಕರೆ ನೀಡಿದ್ದಾರೆ.
ಜಾಗತಿಕ ಅಸ್ಥಿರತೆ, ಇಂಧನ ಹಾಗೂ ಸಂಪನ್ಮೂಲಗಳ ಅಸುರಕ್ಷತೆ, ಪೂರೈಕೆ ಸರಪಳಿಯಲ್ಲಿನ ವ್ಯತ್ಯಯಗಳು, ಹೆಚ್ಚುತ್ತಿರುವ ಉಗ್ರಗಾಮಿ ಪ್ರವೃತ್ತಿ ಹಾಗೂ ಸೈಬರ್ ಮತ್ತು ತಪ್ಪು ಮಾಹಿತಿ ಹರಡುವಿಕೆಯ ಮೂಲಕ ನಡೆಯುವ ಯುದ್ಧಗಳು ಒಡ್ಡುವ ಬೆದರಿಕೆಗಳಾಗಿದ್ದು, ಭವಿಷ್ಯದ ಭದ್ರತಾ ನೀತಿಗಳನ್ನು ರೂಪಿಸುವಾಗ ಈ ಅಂಶಗಳನ್ನು ಪರಿಗಣಿಸಬೇಕು ಎಂದರು.