

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ “ಕಾಕ್ರೋಚ್ ಜನತಾ ಪಾರ್ಟಿ” (CJP) ಪ್ರತಿಭಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧದ ಅಸಮಾಧಾನವನ್ನು ವ್ಯಕ್ತಪಡಿಸಲು ನಡೆದ ಈ ಪ್ರತಿಭಟನೆಗೆ ಶನಿವಾರ ಹೊಸ ತಿರುವು ಸಿಕ್ಕಿದ್ದು, ಮಿಮಿಕ್ರಿ ಕಲಾವಿದ ಮತ್ತು ಸಾಮಾಜಿಕ ವ್ಯಂಗ್ಯಕಾರ ರತನ್ ರಂಜನ್ ಆಗಮನ ಎಲ್ಲರ ಗಮನ ಸೆಳೆಯಿತು.
‘ಹಿಟ್’ ಸ್ಪ್ರೇ ಹಿಡಿದು ವ್ಯಂಗ್ಯ
ರತನ್ ರಂಜನ್ ಅವರು ಪ್ರತಿಭಟನಾ ಸ್ಥಳಕ್ಕೆ ಕೈಯಲ್ಲಿ ವಿಶಿಷ್ಟ ಪೋಸ್ಟರ್ ಹಿಡಿದು ಬಂದಿದ್ದರು. ಪೋಸ್ಟರ್ನಲ್ಲಿ ಕಾಕ್ರೋಚ್ ಚಿತ್ರವಿದ್ದು, ಕೈಯಲ್ಲಿ ಪ್ರಸಿದ್ಧ ಕೀಟನಾಶಕ ‘ಹಿಟ್’ ಸ್ಪ್ರೇ ಹಿಡಿದು ಬಂದಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಇಲ್ಲಿ 20 ಮಿಲಿಯನ್ ಕಾಕ್ರೋಚ್ಗಳನ್ನು ಹುಡುಕುತ್ತಾ ಬಂದಿದ್ದೇನೆ” ಎಂದು ವ್ಯಂಗ್ಯವಾಗಿ ಹೇಳಿದ ಅವರು, CJP ಹೇಳಿಕೊಳ್ಳುತ್ತಿರುವ ಬೆಂಬಲಿಗರ ಸಂಖ್ಯೆಯನ್ನು ಟೀಕಿಸಿದರು. ಅವರ ಮಾತುಗಳಿಗೆ ಕೆಲವರು ಚಪ್ಪಾಳೆ ತಟ್ಟಿದರೆ, ಮತ್ತೊಂದು ಕೆಲವರಿಂದ ವಿರೋಧವೂ ವ್ಯಕ್ತವಾಯಿತು.
“ಭಾರತವನ್ನು ನೇಪಾಳ, ಬಾಂಗ್ಲಾದೇಶ ಮಾಡೋಕೆ ಬಿಡಲ್ಲ”
ಇದೇ ವೇಳೆ ಕೆಲ ಪ್ರತಿಭಟನಾಕಾರರ ವಿಚಾರಧಾರೆಗಳನ್ನು ಟೀಕಿಸಿದ ಅವರು, “ಭಾರತವನ್ನು ನೇಪಾಳ ಅಥವಾ ಬಾಂಗ್ಲಾದೇಶದಂತಾಗಲು ಬಿಡುವುದಿಲ್ಲ” ಎಂದು ಹೇಳಿದರು.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ದೇಶಭಕ್ತಿಯ ಹೇಳಿಕೆ ಎಂದು ಬೆಂಬಲಿಸಿದರೆ, ಇನ್ನು ಕೆಲವರು ಅನಗತ್ಯ ರಾಜಕೀಯ ಹೋಲಿಕೆ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಕುರಿತು ಪ್ರಶ್ನೆ
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಪ್ರಶ್ನೆ ಎತ್ತಿದ ರಂಜನ್, “ಇಷ್ಟೊಂದು ದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಆದರೆ ರಾಹುಲ್ ಗಾಂಧಿ ಎಲ್ಲಿದ್ದಾರೆ?” ಎಂದು ಕೇಳಿದರು.
“ಜೆನ್ Z ಚಳವಳಿ” ಎಂದು ಕರೆಸಿಕೊಳ್ಳುತ್ತಿರುವ ಪ್ರತಿಭಟನೆಯಲ್ಲಿ ಹೆಚ್ಚಿನವರು ಹಿರಿಯರು ಕಾಣಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಹಳೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಉಲ್ಲೇಖಿಸಿ, “ಹಿಂದಿನ ಸರ್ಕಾರಗಳೂ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಳೆಯದಾಗಲಿ ಹೊಸದಾಗಲಿ, ತಪ್ಪು ಮಾಡಿದ ಎಲ್ಲ ನಾಯಕರನ್ನೂ ಹೊಣೆಗಾರರನ್ನಾಗಿಸಬೇಕು” ಎಂದು ಹೇಳಿದರು.
ರತನ್ ರಂಜನ್ ‘ಹಿಟ್’ ಸ್ಪ್ರೇ ಹಿಡಿದು ಪ್ರತಿಭಟನೆಗೆ ಬಂದ ದೃಶ್ಯಗಳು ಇದೀಗ ಎಕ್ಸ್, ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ನಲ್ಲಿ ವೈರಲ್ ಆಗಿವೆ.
ಕೆಲವರು ಇದನ್ನು ಹಾಸ್ಯಾತ್ಮಕ ಪ್ರತಿಭಟನೆ ಎಂದು ಪರಿಗಣಿಸಿದರೆ, ಇನ್ನು ಕೆಲವರು ವಿದ್ಯಾರ್ಥಿಗಳ ಗಂಭೀರ ಸಮಸ್ಯೆಯನ್ನು ವ್ಯಂಗ್ಯವಾಗಿ ನೋಡುತ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ “ಕಾಕ್ರೋಚ್ ಜನತಾ ಪಾರ್ಟಿ” ಹೆಸರಿನ ವ್ಯಂಗ್ಯಾತ್ಮಕ ಡಿಜಿಟಲ್ ಚಳವಳಿ ಗಮನ ಸೆಳೆಯುತ್ತಿದೆ.
ವಿದ್ಯಾರ್ಥಿಗಳ ಸಮಸ್ಯೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳು, ನಿರುದ್ಯೋಗ ಮತ್ತು ಶಿಕ್ಷಣ ವ್ಯವಸ್ಥೆಯ ಮೇಲೆ ವ್ಯಂಗ್ಯಮಯ ಶೈಲಿಯಲ್ಲಿ ಧ್ವನಿ ಎತ್ತುತ್ತಿರುವ ಈ ಗುಂಪು ಇದೀಗ ನೇರ ಪ್ರತಿಭಟನೆಗೂ ಮುಂದಾಗಿದೆ.
CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಅಮೆರಿಕಾದಿಂದ ದೆಹಲಿಗೆ ಆಗಮಿಸಿ ಪ್ರತಿಭಟನೆಗೆ ನೇತೃತ್ವ ವಹಿಸಿದರು. ದೆಹಲಿ ಪೊಲೀಸರು ಅನುಮತಿ ನೀಡಿದ ಬಳಿಕ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಆರಂಭವಾಯಿತು. ಕೆಲವು ಪ್ರತಿಭಟನಾಕಾರರು ಕಾಕ್ರೋಚ್ ಮಾಸ್ಕ್ ಧರಿಸಿದ್ದರೆ, ಇನ್ನು ಕೆಲವರು ಹೂಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಆಕ್ರೋಶ
ಪ್ರತಿಭಟನೆಯ ಮುಖ್ಯ ಉದ್ದೇಶ NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುವುದಾಗಿದೆ. ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಹಾಗೂ ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, “ಪರೀಕ್ಷಾ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಹೋಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement