

ಚೆನ್ನೈ: ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಟ ವಿಜಯ್ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮಾಜಿ ಸಿಎಂ ಸ್ಟಾಲಿನ್ ಗೆ ಶಾಕ್ ನೀಡಿದ್ದು, ಡಿಎಂಕೆ ಅವಧಿಯಲ್ಲಿನ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿದ್ದಂತೆ, ಈ ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಜೋಸೆಫ್ ವಿಜಯ್, 'ಹಿಂದಿನ ಡಿಎಂಕೆ ಸರ್ಕಾರವು ರಾಜ್ಯದ ಮೇಲೆ ₹ 10 ಲಕ್ಷ ಕೋಟಿ ಸಾಲವನ್ನು ಉಳಿಸಿದೆ. ನನ್ನ ಮೇಲೆ ಎಷ್ಟು ಹೊರೆಯನ್ನು ಹೊರಿಸಿದ್ದಾರೆ ಎಂಬುದನ್ನು ನಿಮಗೆಲ್ಲ ತಿಳಿಸಲು ಬಯಸುತ್ತೇನೆ. 2021-2026 ಅವಧಿಗೆ ರಾಜ್ಯದ ಹಣಕಾಸು ವ್ಯವಹಾರದ ಕುರಿತು ಶ್ವೇತಪತ್ರ ಬಿಡುಗಡೆ ಮಾಡುತ್ತೇನೆ' ಎಂದು ಹೇಳಿದರು.
ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತದ ಭರವಸೆ ನೀಡಿದ ಸಿಎಂ ವಿಜಯ್, 'ಗುಣಮಟ್ಟದ ಶಿಕ್ಷಣ, ಉತ್ತಮ ಆಹಾರ, ಆರೋಗ್ಯ ಸುಧಾರಣೆ ಮತ್ತು ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದಾಗಿ' ಹೇಳಿದರು.
ಇದಲ್ಲದೆ ಮಹಿಳೆಯರ ಸುರಕ್ಷತೆ ಸಲುವಾಗಿ ವಿಶೇಷ ಪಡೆಗಳನ್ನು ರಚಿಸುವುದು ಮತ್ತು ರಾಜ್ಯದಾದ್ಯಂತ ಮಾದಕವಸ್ತು ನಿರ್ಮೂಲನೆಗಾಗಿ ಪ್ರತಿ ಜಿಲ್ಲೆಯಲ್ಲೂ ಮಾದಕವಸ್ತು ವಿರೋಧಿ ಘಟಕಗಳನ್ನು ಸ್ಥಾಪಿಸುವುದಾಗಿ ಘೋಷಿಸಿದರು.
ಉಚಿತ ವಿದ್ಯುತ್
ಸಿಎಂ ಜೋಸೆಫ್ ವಿಜಯ್ ತಮ್ಮ ಚುನಾವಣಾ ಪ್ರಣಾಳಿಕೆಯ ಪ್ರಮುಖ ಆಶ್ವಾಸನೆಯನ್ನು ಈಡೇರಿಸಿದ್ದು, ಗೃಹ ಬಳಕೆಯ 200 ಯೂನಿಟ್ ಉಚಿತ ವಿದ್ಯುತ್ ಕಡತಕ್ಕೆ ಸಹಿ ಮಾಡಿದರು. ಅಲ್ಲದೆ ಜನಪರವಾದ ಹಲವು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಭಾನುವಾರ ಭರವಸೆ ನೀಡಿದರು.
Advertisement