

ನವದೆಹಲಿ: ಕೇವಲ ಎರಡು ತಿಂಗಳ ಹಿಂದೆಯಷ್ಟೆ ರಚನೆಯಾಗಿ, ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿರುದ್ದ ದೊಡ್ಡ ಮಟ್ಟದ ಆಂದೋಲನ ನಡೆಸಿ, ಧರ್ಮೇಂದ್ರ ಪ್ರಧಾನ್ ರಾಜನಾಮೆಗೆ ಕಾರಣವಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ಇದೀಗ ಇಬ್ಬಾಗವಾಗಿದ್ದು, CJP ನಾಯಕ ಮನೀಶ್ ಬ್ರಹ್ಮಭಟ್ ನೇತೃತ್ವದಲ್ಲಿ ಸಿಜೆಪಿ-ಡೆಮಾಕ್ರೆಟಿಕ್ (CJP-D) ಎಂಬ ನೂತನ ಬಣ ಅಸ್ತಿತ್ವಕ್ಕೆ ಬಂದಿದೆ. ಇನ್ನು, ಮೂಲ ಸಿಜೆಪಿ ಸಂಘಟನೆಯು ಕೇವಲ ಟೀಮ್ ಕೇಜ್ರಿವಾಲ್ (ಆಮ್ ಆದ್ಮಿ ಪಾರ್ಟಿ) ರೀತಿಯಲ್ಲಿ ಬದಲಾಗುತ್ತಿದೆ ಎಂದು ಆರೋಪಿಸಿ ಈ ಹೊಸ ಬಣವನ್ನು ರಚಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ
ಮೂಲ CJP ಸಂಘಟನೆಯು ತನ್ನ ಆರಂಭಿಕ ಸಿದ್ಧಾಂತಗಳನ್ನು ಬದಿಗೊತ್ತಿ, ಆಮ್ ಆದ್ಮಿ ಪಾರ್ಟಿಯ ಹಿತಾಸಕ್ತಿಗೆ ತಕ್ಕಂತೆ "ಟೀಮ್ ಕೇಜ್ರಿವಾಲ್" ಆಗಿ ಬದಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರವ ಪಕ್ಷದ ಪ್ರಮುಖ ಕಾರ್ಯಕರ್ತ ಮನೀಶ್ ಬ್ರಹ್ಮಭಟ್, ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಆಂದೋಲನದ ಯಶಸ್ಸಿನ ನಂತರ, ಮೂಲ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮಗೆ ಆಪ್ತರಾದವರನ್ನು ಮಾತ್ರ ಒಳಗೊಂಡ 12-15 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದಾರೆ ಎಂದು ದೂರಿದ್ದಾರೆ.
ಇದರೊಂದಿಗೆ, ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಆರಂಭವಾದ ಈ ಆಂದೋಲನವನ್ನು ಕೆಲವೇ ವ್ಯಕ್ತಿಗಳು ತಮ್ಮ ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ ಮಾರಿಕೊಂಡಿದ್ದಾರೆ ಮತ್ತು ರಾಜಕೀಯಕರಣಗೊಳಿಸಿದ್ದಾರೆ ಎಂದ ಕಿಡಿಕಾರಿದ ಬ್ರಹ್ಮಭಟ್, ಹೋರಾಟದಲ್ಲಿ ಸಕ್ರಿಯರಾಗಿದ್ದ ಸಾಮಾನ್ಯ ಸ್ವಯಂಸೇವಕರನ್ನು ಸಮಿತಿಯಿಂದ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಬಂಡಾಯ ಬಣದ ಅಸಮಾಧಾನ ವ್ಯಕ್ತಪಡಿಸಿದೆ.
ಹಾಗಾದ್ರೆ, ನೂತನ ಸಿಜೆಪಿ-ಡೆಮಾಕ್ರೆಟಿಕ್ ನಿಲುವುಗಳೇನು?
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ CJP-D ಬಣವು ಸಂಪೂರ್ಣ ಪ್ರಜಾಪ್ರಭುತ್ವ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಹೊಂದಿರಲಿದ್ದು, ಎಲ್ಲಾ ಪ್ರಮುಖ ನಿರ್ಧಾರಗಳನ್ನು ಕಾರ್ಯಕರ್ತರ ಅಭಿಪ್ರಾಯ ಪಡೆದೇ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ಜೊತೆಗೆ, ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರ ಅಧಿಕಾರದಲ್ಲಿದ್ದರೂ, ಭ್ರಷ್ಟಾಚಾರದ ವಿರುದ್ಧ ರಾಜಿ ಇಲ್ಲದೆ ಹೋರಾಟ ಮುಂದುವರಿಸುವುದಾಗಿ ಹೊಸ ವೇದಿಕೆ ಸ್ಪಷ್ಟಪಡಿಸಿದೆ. ಇದರೊಂದಿಗೆ, ಯುವಜನತೆ ಮತ್ತು ಸ್ವಯಂಸೇವಕರು ಸಾಮಾಜಿಕ ಜಾಲತಾಣಗಳು, ವಾಟ್ಸಪ್ ಹಾಗೂ ಮಿಸ್ಡ್ ಕಾಲ್ ನೀಡುವ ಮೂಲಕ ಈ ಹೊಸ ಬಣಕ್ಕೆ ಸೇರ್ಪಡೆಯಾಗಬಹುದು ಎಂದು ಮನೀಶ್ ಬ್ರಹ್ಮಭಟ್ ಮುಕ್ತ ಆಹ್ವಾನ ನೀಡಿದ್ದಾರೆ.
ಮತ್ತೊಂದೆಡೆ, ಇಬ್ಬಾಗದ ಬಗ್ಗೆ ಪ್ರತಿಕ್ರಿಯಿಸಿರುವ ಮೂಲ CJP ಮುಖ್ಯಸ್ಥರಾದ ಅಭಿಜೀತ್ ದಿಪ್ಕೆ, "ಮಹಾರಾಷ್ಟ್ರ ಸಿಎಂ ನಮ್ಮನ್ನು ಕಾಂಗ್ರೆಸ್ನ ಬಿ ತಂಡ ಎನ್ನುತ್ತಾರೆ, ಇನ್ನು ಕೆಲವರು ಆಮ್ ಆದ್ಮಿ ಪಾರ್ಟಿಯ ಬಿ ತಂಡ ಎನ್ನುತ್ತಾರೆ. ನಾವಂತೂ ವಿದ್ಯಾರ್ಥಿಗಳ ಹಿತ ಕಾಯುವ ಎ ತಂಡ" ಎಂದು ಹೇಳುವ ಮೂಲಕ ತಮ್ಮ ಸಂಘಟನೆಯು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಒಗ್ಗಿಕೊಂಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.