

ಪುಣೆ: ಮಹಾರಾಷ್ಟ್ರದಲ್ಲಿ 2.5 ಲಕ್ಷ ರೂ ಸಾಲದ ಒತ್ತಡಕ್ಕೆ ಸಿಲುಕಿದ್ದ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
28 ವರ್ಷದ ಮೃತ ಯುವಕ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಎರಡು ಪುಟಗಳ ಡೆತ್ನೋಟ್ನಲ್ಲಿ 19 ಮಂದಿಯ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಮೃತನನ್ನು ಪ್ರಥಮೇಶ್ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಪ್ರಥಮೇಶ್ ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಪುಣೆಯ ಕೇಂದ್ರ ಭಾಗದಲ್ಲಿರುವ ನವಿ ಪೇಠ್ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಯುವಕನ ಕೊಠಡಿಯಲ್ಲಿ ಪತ್ತೆಯಾದ ಎರಡು ಪುಟಗಳ ಆತ್ಮಹತ್ಯೆ ಟಿಪ್ಪಣಿಯಲ್ಲಿ 19 ಮಂದಿಯ ಹೆಸರುಗಳ ಜತೆಗೆ ತಾವು ಯಾರಿಂದ ಎಷ್ಟು ಹಣ ಸಾಲ ಪಡೆದಿದ್ದರು ಹಾಗೂ ಎಷ್ಟು ಹಣವನ್ನು ಮರುಪಾವತಿಸಿದ್ದರು ಎಂಬ ವಿವರಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಹೃಷಿಕೇಶ್ ರಾವಳೆ ಮಾತನಾಡಿ, ಯುವಕ ಹಣವನ್ನು ಏಕೆ ಸಾಲವಾಗಿ ಪಡೆದಿದ್ದ ಎಂಬುದನ್ನು ತಿಳಿದುಕೊಳ್ಳಲು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
‘ದೇಶಮುಖ್ ಆರ್ಥಿಕ ಒತ್ತಡದಲ್ಲಿದ್ದರು ಎಂದು ತಿಳಿದುಬಂದಿದೆ. ಹಲವು ಮಂದಿಗೆ ಅವರು ಸುಮಾರು 2.50 ಲಕ್ಷ ರೂ ಹಣ ನೀಡಬೇಕಿತ್ತು. ಅವರ ಕುಟುಂಬವೂ ಆರ್ಥಿಕ ಸಂಕಷ್ಟದಲ್ಲಿತ್ತು. ಅವರು ಬರೆದಿಟ್ಟಿರುವ ಟಿಪ್ಪಣಿಯಲ್ಲಿ ಪಡೆದಿದ್ದ ಹಾಗೂ ಮರುಪಾವತಿಸಿದ್ದ ಸಾಲದ ವಿವರಗಳನ್ನೂ ದಾಖಲಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಹಾಯವಾಣಿ
ನೀವು ಅಥವಾ ನಿಮಗೆ ಪರಿಚಯವಿರುವ ಯಾರಾದರೂ ಆತ್ಮಹತ್ಯೆಯ ಆಲೋಚನೆಗಳು ಅಥವಾ ತೀವ್ರ ಮಾನಸಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ, ತಕ್ಷಣ ವಿಶ್ವಾಸಾರ್ಹ ವ್ಯಕ್ತಿ ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.
Vandrevala Foundation Mental Health Helpline: 9999666555
TISS iCall: 022-25521111 (ಸೋಮವಾರದಿಂದ ಶನಿವಾರದವರೆಗೆ, ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ)
ತುರ್ತು ಅಪಾಯವಿದ್ದರೆ ಸಮೀಪದ ಆಸ್ಪತ್ರೆಗೆ ಅಥವಾ ಸ್ಥಳೀಯ ತುರ್ತು ಸೇವೆಯನ್ನು ಸಂಪರ್ಕಿಸಿ.