

ಉಜ್ಜಯಿನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಧಾರ್ಮಿಕ ನಗರಿ ಉಜ್ಜಯಿನಿಯ ಸತಿ ಗೇಟ್ ಬಳಿ ಇರುವ ಐತಿಹಾಸಿಕ 'ಖಡೇ ಹನುಮಾನ್' ದೇವಾಲಯದ ವಿಗ್ರಹವು ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದು, ಭಕ್ತರಲ್ಲಿ ತೀವ್ರ ಕುತೂಹಲ ಮತ್ತು ಆಸ್ತೆಯ ಕೇಂದ್ರವಾಗಿದೆ. ಅದಕ್ಕೆ ಕಾರಣ, ವಿಗ್ರಹವನ್ನು ರಸ್ತೆ ಅಗಲೀಕರಣಕ್ಕಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ನಡೆಸಿದ ಭಾರಿ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿವೆ. ಹೌದು, ರಸ್ತೆ ವಿಸ್ತರಣೆ ಯೋಜನೆಯ ಭಾಗವಾಗಿ, ಸುಮಾರು 170 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನದ ಮೇಲ್ಛಾವಣಿ ಹಾಗೂ ಗೋಡೆಗಳನ್ನು ಜೆಸಿಬಿ ಮತ್ತು ಬುಲ್ಡೋಜರ್ಗಳ ಮೂಲಕ ಕೆಡವಲಾಗಿದೆ. ಆದರೆ, ದೇವಸ್ಥಾನದ ಮಧ್ಯದಲ್ಲಿದ್ದ ಸುಮಾರು 8 ಅಡಿ ಎತ್ತರದ ಹನುಮಂತನ ವಿಗ್ರಹ ಮಾತ್ರ ಒಂದಿಂಚೂ ಅಲುಗಾಡದೆ ಅಚಲವಾಗಿ ನಿಂತಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಉಜ್ಜಯಿನಿಯಲ್ಲಿ 2028ರ ಏಪ್ರಿಲ್ 9 ರಿಂದ ಮೇ 8 ರವರೆಗೆ (ಒಂದು ತಿಂಗಳ ಕಾಲ) ನಡೆಯಲಿರುವ ಸಿಂಹಸ್ಥ ಮಹಾಕುಂಭ ಮೇಳದ ಸಿದ್ಧತೆಗಾಗಿ ನಗರದ ರಸ್ತೆಗಳನ್ನು ವಿಸ್ತರಿಸಲಾಗುತ್ತಿದ್ದು, ಈ ಯೋಜನೆಯ ಭಾಗವಾಗಿ ಸುಮಾರು 170 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನದ ಮೇಲ್ಛಾವಣಿ ಹಾಗೂ ಗೋಡೆಗಳನ್ನು ಜೆಸಿಬಿ ಮತ್ತು ಬುಲ್ಡೋಜರ್ಗಳ ಮೂಲಕ ಕೆಡವಲಾಗಿದೆ. ಆದರೆ, ದೇವಸ್ಥಾನದ ಮಧ್ಯದಲ್ಲಿದ್ದ ಸುಮಾರು 8 ಅಡಿ ಎತ್ತರದ ಹನುಮಂತನ ವಿಗ್ರಹ ಮಾತ್ರ ಒಂದಿಂಚೂ ಅಲುಗಾಡದೆ ಅಚಲವಾಗಿ ನಿಂತಿದೆ. ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ಜಿಲ್ಲಾಡಳಿತ ಮತ್ತು ನಗರಸಭೆ ಇಂಜಿನಿಯರ್ಗಳ ತಂಡ ಅತ್ಯಾಧುನಿಕ ಭಾರಿ ಹೈಡ್ರಾಲಿಕ್ ಕ್ರೇನ್ಗಳು ಮತ್ತು ಜೆಸಿಬಿ ಯಂತ್ರಗಳನ್ನು ಬಳಸಿ ವಿಗ್ರಹವನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು7ಕ್ಕೂ ಹೆಚ್ಚು ಬಾರಿ ಪ್ರಯತ್ನ ನಡೆಸಿತು. ಆದರೆ ಭಾರಿ ಯಂತ್ರಗಳ ಶಕ್ತಿಗೂ ಈ ವಿಗ್ರಹ ಜಗ್ಗಲಿಲ್ಲ ಎನ್ನಲಾಗಿದೆ.
ಇನ್ನು, ಈ ದೃಶ್ಯಗಳನ್ನು ಕಂಡು ಬೆರಗಾದ ಸ್ಥಳೀಯರು ಮತ್ತು ಭಕ್ತರು ಇದನ್ನು ಭಗವಂತನ ಸಾಕ್ಷಾತ್ ಪವಾಡ ಹಾಗೂ ದೈವಿಕ ಸಂಕೇತ ಎಂದು ಕರೆಯುತ್ತಿದ್ದಾರೆ. "ಹನುಮಂತನಿಗೆ ತನ್ನ ಮೂಲ ಸ್ಥಾನವನ್ನು ಬಿಟ್ಟು ಕದಲಲು ಇಷ್ಟವಿಲ್ಲ" ಎಂದು ಹೇಳುತ್ತಾ ಸಾವಿರರೂ ಭಕ್ತರು ವಿಗ್ರಹದ ಸುತ್ತಲೂ ಜಮಾಯಿಸಿ ಭಜನೆ ಹಾಗೂ ಹನುಮಾನ್ ಚಾಲೀಸಾ ಪಠಣ ಆರಂಭಿಸಿದ್ದಾರೆ.
ವೈಜ್ಞಾನಿಕ ಸ್ಕ್ಯಾನಿಂಗ್ ಮೊರೆ ಹೋದ ತಜ್ಞರು
ಮುಂದುವರೆದು, ಬಲವಂತವಾಗಿ ಯಂತ್ರಗಳನ್ನು ಬಳಸಿದರೆ ವಿಗ್ರಹಕ್ಕೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಸದ್ಯಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅದರಲ್ಲೂ, ಈ ವಿಗ್ರಹವು ಸುಮಾರು 1000 ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿರಬಹುದು ಎಂದು ಅಂದಾಜಿಸಿರುವ ತಜ್ಞರು, ವಿಗ್ರಹದ ತಳಭಾಗದ ಆಳ ಎಷ್ಟು ವಿಸ್ತಾರವಾಗಿದೆ ಮತ್ತು ಅದು ಭೂಮಿಯ ಒಳಗೆ ಹೇಗೆ ಸ್ಥಾಪಿತವಾಗಿದೆ ಎಂಬುದನ್ನು ತಿಳಿಯಲು ಈಗ ಹೈಟೆಕ್ ವೈಜ್ಞಾನಿಕ ಸ್ಕ್ಯಾನಿಂಗ್ ಮೊರೆ ಹೋಗಿದ್ದಾರೆ.