ಅನರ್ಹರ ಗೆಲುವು, ಮತದಾರರ ಸೋಲು, ನನ್ನ ತಂದೆ ಏನು ಅನ್ಯಾಯ ಮಾಡಿದ್ದರು: ನಿಖಿಲ್ ಕುಮಾರಸ್ವಾಮಿ

ಉಪ ಚುನಾವಣೆಯಲ್ಲಿ ಅನರ್ಹರು ಗೆದ್ದಿರ ಬಹುದು, ಆದರೆ ಇದು ಅವರಿಗೆ ಮತ ನೀಡಿದ ಮತದಾರರ ಸೋಲು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ

ಚಿಕ್ಕಬಳ್ಳಾಪುರ: ಉಪ ಚುನಾವಣೆಯಲ್ಲಿ ಅನರ್ಹರು ಗೆದ್ದಿರ ಬಹುದು, ಆದರೆ ಇದು ಅವರಿಗೆ ಮತ ನೀಡಿದ ಮತದಾರರ ಸೋಲು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮದವೊಂದರಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಫಲಿತಾಂಶವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ರೈತರ ಸಾಲಮನ್ನಾ ಮಾಡಿದ ಕುಮಾರಸ್ವಾಮಿಯನ್ನು ಜನ ಕೈ ಹಿಡಿಯಲಿಲ್ಲ. ನಮ್ಮ ತಂದೆ ರಾಜ್ಯದ ಜನತೆಗೆ ಏನು ಅನ್ಯಾಯ ಮಾಡಿದ್ದಾರೆ. ಇದು ಅನರ್ಹರ ಗೆಲುವಾಗಿರಬಹುದು. ಆದರೆ ಅವರಿಗೆ ಮತ ನೀಡಿದ ಮತದಾರರ ಸೋಲು ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

'ಫಲಿತಾಂಶ ನೋಡಿ ಮನಸ್ಸಿಗೆ ತುಂಬಾ ದುಃಖ ಆಗುತ್ತೆ. ನಮ್ಮ ತಂದೆ ಕುಮಾರಣ್ಣ 38 ಸ್ಥಾನ ಪಡೆದು ಸಿಎಂ ಆಗಿದ್ದರು. ಬಹುಮತ ಇಲ್ಲದಿದ್ರೂ ಹೇಳಿದ ಹಾಗೆ ಅವರು ರೈತರ ಸಾಲಮನ್ನಾ ಮಾಡಿದ್ದರು. ರೈತರ ಸಾಲಮನ್ನಾ ಮಾಡುವ ಕಾಯಕ ಮಾಡಿ ಉಪಚುನಾವಣೆಗೆ ಬಂದೆವು. ಆದರೆ ರಾಜ್ಯದ ಜನರು ಕುಮಾರಣ್ಣನ ಕೈ ಹಿಡಿಯಲಿಲ್ಲ ಎಂದರು. ಉಪಚುನಾವಣೆಯ ಫಲಿತಾಂಶ ಕಂಡು ಕುಮಾರಣ್ಣ ತುಂಬಾ ನೋವುಪಟ್ಟುಕೊಂಡರು. ಕೆ.ಆರ್ ಪೇಟೆ ಜನ ಸಹ ನಮ್ಮನ್ನು ಕೈ ಬಿಟ್ಟರು ಯಾಕೆ ಎಂದು ಗೊತ್ತಿಲ್ಲ? ರಾಜ್ಯದ ಜನತೆಗೆ ನಮ್ಮ ತಂದೆ ಏನು ಅನ್ಯಾಯ ಮಾಡಿದ್ದಾರೆ. ನನ್ನ ತಂದೆ ಎರಡನೇ ಬಾರಿಗೆ ಹೃದಯಶಸ್ತ್ರ ಚಿಕಿತ್ಸಗೆ ಓಳಗಾಗಿದ್ದಾರೆ. 14 ದಿನಗಳ ಕಾಲ ಚುನಾವಣಾ ಪ್ರಚಾರದ ವೇಳೆ ಅವರು ಒಂದು ಕ್ಷಣ ಮಲಗಿಲ್ಲ. 15 ಕ್ಷೇತ್ರದ ಜನ ಅನರ್ಹರಿಗೆ ಪಾಠ ಕಲಿಸುತ್ತಾರೆ ಎಂದು ನನ್ನ ಬಳಿ ಹೇಳುತ್ತಿದ್ದರು. ಇದು ಅನರ್ಹರ ಗೆಲುವು ಇರಬಹುದು, ಆದರೆ ಇದು ಮತದಾರರ ಸೋಲು ಎಂದು ನಿಖಿಲ್ ಫಲಿತಾಂಶ ನೋಡಿ ಅಸಮಾಧಾನ ವ್ಯಕ್ತಪಡಿಸಿದರು.

ಸಾವಿರಾರು ಕೋಟಿ ಖರ್ಚು ಮಾಡಿ ಬಿಜೆಪಿಯವರು ಚುನಾವಣೆ ಎದುರಿಸಿದ್ದಾರೆ. ಆದರೆ ನಾವು ಪ್ರಾದೇಶಿಕ ಪಕ್ಷ, ರೈತರ ಪಕ್ಷ, ಬಡವರ ಪಕ್ಷ, ಅಷ್ಟು ದುಡ್ಡು ಖರ್ಚು ಮಾಡುವುದಕ್ಕೆ ನಮ್ಮತ್ರ ಶಕ್ತಿ ಇಲ್ಲ. ನಮ್ಮನ್ನು ನಂಬಿರುವ ಜೆಡಿಎಸ್ ಕಾರ್ಯಕರ್ತರಿಗಾಗಿ ಏನಾದ್ರೂ ಆಗಲಿ ಅವರಿಗೋಸ್ಕರ ನಾನು ನನ್ನ ರಾಜಕಾರಣ ಮುಂದುವರಿಸುತ್ತೇನೆ ಎಂದರು.

ಮಂಡ್ಯ ಚುನಾವಣೆಗೆ ನಾನು ನಿಲ್ಲಬೇಕು ಎನ್ನುವ ವಿಷಯ ನನಗೆ ಗೊತ್ತಿರಲಿಲ್ಲ. ಆ ಜಿಲ್ಲೆಯ 8 ಮಂದಿ ಶಾಸಕರು ಎಂಎಲ್‍ಸಿಗಳ ಒತ್ತಾಯ ಭಾವನೆಗಳಿಂದ ನಾನು ಸ್ಪರ್ಧೆ ಮಾಡಿದ್ದೆ. ಆದರೆ ಚುನಾವಣೆಯಲ್ಲಿ ಸೋತೆ ಎಂಬ ದುಃಖ ಭಾವನೆ ನನಗಿಲ್ಲ. ಆ ಚುನಾವಣೆಯಿಂದ ನನಗೆ ಸಾಕಷ್ಟು ಅನುಭವ ಆಗಿದೆ. ಎಷ್ಟೇ ಚುನಾವಣೆಗಳನ್ನ ನಡೆಸಿದ್ರೂ ಅಂತಹ ಅನುಭವ ಸಿಗಲಾರದು. ನಾವು ಗೆದ್ದಿದ್ದರೆ ನಮ್ಮಲ್ಲಿನ ಲೋಪದೋಷಗಳು ಅರ್ಥ ಆಗ್ತಿರಲಿಲ್ವೇನೋ? ಸೋತ ಕಾರಣ ಬಹಳಷ್ಟು ವಿಚಾರಗಳನ್ನು ಯೋಚನೆ ಮಾಡುತ್ತೇನೆ. ಆದರೆ ನನಗೆ ಮತ ಹಾಕಿದ ಮಂಡ್ಯದ ಐದು ಮುಕ್ಕಾಲು ಲಕ್ಷ ಜನರ ಋಣ ನನ್ನ ಮೇಲಿದೆ. ಮಂಡ್ಯನ ಬಿಟ್ಟು ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ನಿಖಿಲ್ ತಿಳಿಸಿದರು.

ಇಂದು ಕುಮಾರಣ್ಣನ ಆರೋಗ್ಯ ಸ್ಥಿತಿ ಹೇಳಲು ಇಷ್ಟಪಡಲ್ಲ. ಏಕೆಂದರೆ ಕನಿಕರ ಪಡೆದು ಮತ ಹಾಕಿಸಿಕೊಳ್ಳುವ ನೀಚರೂ ನಾವಲ್ಲ. ಕುಮಾರಸ್ವಾಮಿಯವರು ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಹಾಗಾಗಿ ಕಾರ್ಯಕ್ರಮ ಬೇಗ ಮುಗಿಸಲು ಅಗುತ್ತಾ ಎಂದು ಆಗಲೇ ಕೇಳಿದೆ. ಏಕೆಂದರೆ ನಮ್ಮ ತಂದೆ ಒಬ್ಬರೇ ಮನೆಯಲ್ಲಿದ್ದಾರೆ. ಮಗನಾಗಿ ನನ್ನ ತಂದೆ ಮೇಲೆ ನನಗೆ ಕಾಳಜಿ ಇದೆ. ಆದರೆ ನನ್ನ ಆರೋಗ್ಯದ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com