ಹಾನಗಲ್ ಬಿಜೆಪಿ ಸೋಲು, ಸಿಎಂ ಬೊಮ್ಮಾಯಿ ಅವರ ಸೋಲು; JDSಗೆ ಠೇವಣಿ ಕೂಡ ಸಿಗಲ್ಲ ಎಂದು ಮೊದಲೇ ಹೇಳಿದ್ದೆ; ಸಿದ್ದರಾಮಯ್ಯ

ಹಾನಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿನ ಬಿಜೆಪಿ ಸೋಲು, ಸಿಎಂ ಬಸವರಾಜ ಬೊಮ್ಮಾಯಿ ಅವರ ಸೋಲು ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯರ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಹಾನಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿನ ಬಿಜೆಪಿ ಸೋಲು, ಸಿಎಂ ಬಸವರಾಜ ಬೊಮ್ಮಾಯಿ ಅವರ ಸೋಲು ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯರ ಸಿದ್ದರಾಮಯ್ಯ ಹೇಳಿದ್ದಾರೆ.

ಅಕ್ಟೋಬರ್ 30 ರಂದು ನಡೆದಿದ್ದ ಸಿಂದಗಿ ಮತ್ತು ಹಾನಗಲ್ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು,  ಇಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿಯ ರಮೇಶ ಭೂಸನೂರ ಅವರು ಸಿಂದಗಿ ಕ್ಷೇತ್ರದಲ್ಲಿ ಜಯಗಳಿಸಿದರೆ, ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಯ ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಬಿಜೆಪಿಯ ಶಿವರಾಜ್ ಸಜ್ಜನರನ್ನು ಸೋಲಿಸಿದ್ದಾರೆ.

ಸಿಂದಗಿ ಮತ್ತು  ಹಾನಗಲ್ ಉಪ ಚುನಾವಣಾ ಫಲಿತಾಂಶದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಾನಗಲ್ ಬಿಜೆಪಿ ಅಭ್ಯರ್ಥಿಯ ಸೋಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೋಲಾಗಿದೆ. ಏಕೆಂದರೆ ಈ ಕ್ಷೇತ್ರ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲಿ ಬರುತ್ತದೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

'ಹಾನಗಲ್ ನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ, 10 ರಿಂದ 13 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದು ನಿರೀಕ್ಷಿಸಿದ್ದೆವು. ನಮ್ಮ ಅಭ್ಯರ್ಥಿ ಬಗ್ಗೆ ಒಳ್ಳೆ ಅಭಿಪ್ರಾಯವಿತ್ತು, ಜನರಲ್ಲಿ ಮಾನೆ ಬಗ್ಗೆ ಉತ್ತಮ ಅಭಿಪ್ರಾಯವಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಒಂದು ವಾರ ಕ್ಯಾಂಪೇನ್ ಮಾಡಿದ್ರು. ಅವರದ್ದು ಶಿಗ್ಗಾಂವ್, ಅದರ ಪಕ್ಕದಲ್ಲಿ ಹಾನಗಲ್ ಕ್ಷೇತ್ರ. ಅಧಿಕಾರ ದುರುಪಯೋಗ ಪಡಿಸಿಕೊಂಡು ಹಣ ಹಂಚಿದ್ರು, ಆದರೂ ಅವರು ಅಲ್ಲಿ ಸೋತಿದ್ದಾರೆ. ಜನ ಇವತ್ತು ಬದಲಾವಣೆ ಬಯಸಿದ್ದಾರೆ, ಈ ಫಲಿತಾಂಶವನ್ನು ನಾನು ಎಲೆಕ್ಷನ್ ದಿಕ್ಸೂಚಿ ಅಂತ ನಾನು ಹೇಳಲ್ಲ. ಆದರೆ ಜನರ ಎಚ್ಚರಿಕೆಯ ಗಂಟೆ ಅಂತ ಹೇಳ್ತೇನೆ, ರಾಜ್ಯದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಹಾನಗಲ್ ಕ್ಷೇತ್ರದ ಮತದಾರರಿಗೆ ಅಭಿನಂದನೆ, ಸಿಂದಗಿ‌ ಕ್ಷೇತ್ರದ ಮತದಾರರಿಗೂ ಅಭಿನಂದನೆ. ಸಿಂದಗಿಯಲ್ಲಿ ನಮ್ಮ‌ ನಿರೀಕ್ಷೆ ಹುಸಿಯಾಗಿದೆ, ಅಲ್ಲಿ ತೀರ್ವ ಸ್ಪರ್ಧೆಯಾಗುತ್ತೆ ಎಂದುಕೊಂಡಿದ್ದೆವು. ದೊಡ್ಡ ಅಂತರದಲ್ಲಿ‌ ಸೋತಿದ್ದೇವೆ. ಆದರೆ ಕಳೆದ ಬಾರಿ ನಾವು‌ ಮೂರನೇ ಸ್ಥಾನದಲ್ಲಿದ್ದೆವು, ಈಗ ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಸೋಲು ಸೋಲೇ ಒಪ್ಪಿಕೊಳ್ಳಬೇಕು. ನಾನು ಮೊದಲೆರಡು ದಿನ ಪ್ರಚಾರ ಮಾಡಿದ್ದೆ, ಅಶೋಕ್ ಮನಗೂಳಿ ಜೆಡಿಎಸ್ ನಿಂದ ಬಂದವರು. ಅವರಿಗೆ ನಾವು ಟಿಕೆಟ್ ಕೊಟ್ಟಿದ್ದೆವು. ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಗೆ ಹೊಂದಾಣಿಕೆಯಾಗಿಲ್ಲ, ಅವರ ಜೊತೆ ಬಂದ ಜೆಡಿಎಸ್ ಕಾರ್ಯಕರ್ತರ ಜೊತೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.

JDSಗೆ ಠೇವಣಿ ಕೂಡ ಸಿಗಲ್ಲ ಹೇಳಿದ್ದೆ
ಇದೇ ವೇಳೆ ಜೆಡಿಎಸ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿರುವ ಸಿದ್ದರಾಮಯ್ಯ, 'ನಾನು ಮೊದಲೇ ಹೇಳಿದ್ದೆ. ಕೋಮುವಾದಿ ಪಕ್ಷದ ಜೊತೆ ಸೇರಿದ್ದಾರೆಂದು, ಈಗ ಎರಡೂ ಕಡೆ ಡೆಪಾಸಿಟ್ ಕಳೆದುಕೊಂಡಿದ್ದಾರೆ. ನಾನು ಜೆಡಿಎಸ್ ಬಗ್ಗೆ ಮಾತನಾಡಲ್ಲ. ಮುಂದಿನ ಚುನಾವಣೆಯಲ್ಲೂ ಇದೇ ಆಗಲಿದೆ ಎಂದು ಭವಿಷ್ಯ ನುಡಿದರು. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಮಗ ಆ್ಯಕ್ಟಿವ್ ಆಗಿ ಕ್ಯಾಂಪೇನ್ ಮಾಡಿದ್ರು. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಎಫೆಕ್ಟ್ ಆಗಿಲ್ಲ. ಸಿಂದಗಿಯಲ್ಲಿ ಅಭ್ಯರ್ಥಿ ಸ್ಟ್ರಾಂಗ್ ಇದ್ದರು. ಆದರೆ ಕಾರ್ಯಕರ್ತರ ಹೊಂದಾಣಿಕೆ ಇರಲಿಲ್ಲ, ಹಾಗಂತ ಅಲ್ಲಿ ಕಾರ್ಯಕರ್ತರು ಹೇಳ್ತಿದ್ರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com