"ಯೋಗ, ಯೋಗ್ಯತೆ ಬಗ್ಗೆ ಮಾತಾಡಲು ಕನಿಷ್ಟ ಅರ್ಹತೆಯಾದರೂ ಇದೆಯಾ?.. ಧಮ್ ಬಿರಿಯಾನಿಯೊಂದಕ್ಕೇ ಧಮ್ ಇಳಿದಂತಿದೆ''

ಅಧಿಕಾರದಾಸೆಗೆ ನಿಮ್ಮ ಪಕ್ಷದ ನಾಯಕರನ್ನು ಹೀಯಾಳಿಸುವುದು ಬಿಡಿ, ಕನಿಷ್ಟ ಪ್ರಶ್ನೆಯನ್ನಾದರೂ ಮಾಡಿ ಕುರ್ಚಿ ಉಳಿಸಿಕೊಳ್ಳಿ ಆಗ ನಿಮ್ಮ "ಛಲ"ವಾದಿಯನ್ನು ನಾನೇ ಬೆಂಬಲಿಸುತ್ತೇನೆ.
BK Hari prasad tweet war on Chalavadi Narayanaswamy
ಬಿಕೆ ಹರಿಪ್ರಸಾದ್ ಮತ್ತು ಛಲವಾದಿ ನಾರಾಯಣಸ್ವಾಮಿ
Updated on

ಬೆಂಗಳೂರು: ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಮತ್ತು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಡುವಿನ ಟ್ವೀಟ್ ವಾರ್ ಮತ್ತೊಂದು ಹಂತಕ್ಕೇರಿದ್ದು, ಛಲವಾದಿ ನಾರಾಯಣಸ್ವಾಮಿ ಟ್ವೀಟ್ ಗೆ ಬಿಕೆ ಹರಿಪ್ರಸಾದ್ ಖಡಕ್ ತಿರುಗೇಟು ನೀಡಿದ್ದಾರೆ.

ದಲಿತ ಸಮುದಾಯದಿಂದ ಬಂದು, ರಾಜಕೀಯ ಅಧಿಕಾರಕ್ಕಾಗಿ ಬಾಬಾ ಸಾಹೇಬರ ಸಿದ್ದಾಂತವನ್ನೇ ತೊರೆದು, ಗೋಸುಂಬೆಯ ಥರ ಬಣ್ಣ ಬದಲಾಯಿಸಿದಂತೆ ಅಧಿಕಾರಕ್ಕಾಗಿ ಸಂವಿಧಾನ ವಿರೋಧಿಗಳ ಸಖ್ಯ ಬೆಳಸಿ, ಮನಸ್ಮೃತಿಯ ಪ್ರತಿಪಾದಕರಾಗಿ ಬದಲಾದ ನಿಮ್ಮ‌ ಮನಸ್ಥಿತಿಯ ಬಗ್ಗೆ ಮರುಕವಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಉತ್ತರ ನೀಡಿದ್ದ ಛಲವಾದಿ ನಾರಾಯಣ ಸ್ವಾಮಿ 'ಬೇರೆಯವರ "ಖಾಕಿ ಚಡ್ಡಿ" ಯನ್ನು ಬಿಚ್ಚಲು ಪ್ರಯತ್ನಿಸಿ, ನಿಮ್ಮ ಕೈಯಾರೆ ನಿಮ್ಮ ಲಂಗೂಟಿಯನ್ನು ಕಳಚಿಕೊಂಡಿದ್ದು ಇನ್ನೂ ಜನರು ಮರೆತಿಲ್ಲ. ಬೇರೆಯವರ ಚಡ್ಡಿಯ ಮೇಲೆ ನಿಗಾ ವಹಿಸುವುದಕ್ಕಿಂತ ಮುಂಚೆ, ನಿಮ್ಮ ಪಂಚೆ ಮತ್ತು ಚಡ್ಡಿ ಉದುರಿ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ.

ಇದೀಗ ನಾರಾಯಣ ಸ್ವಾಮಿ ಟ್ವೀಟ್ ಗೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಬಿಕೆ ಹರಿಪ್ರಸಾದ್, ಸುದೀರ್ಘ ಟ್ವೀಟ್ ಮಾಡುವ ಮೂಲಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ 'ಯೋಗ, ಯೋಗ್ಯತೆ ಬಗ್ಗೆ ಮಾತಾಡಲು ಕನಿಷ್ಟ ಅರ್ಹತೆಯಾದರೂ ಇದೆಯಾ'? ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.

BK Hari prasad tweet war on Chalavadi Narayanaswamy
ನಿಮ್ಮ ಪಂಚೆ, ಚಡ್ಡಿ ಉದುರಿ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಳ್ಳಿ! ಛಲವಾದಿ v/s ಬಿ ಕೆ ಹರಿಪ್ರಸಾದ್ ಟ್ವೀಟ್ ವಾರ್

ಬಿಕೆ ಹರಿಪ್ರಸಾದ್ ಟ್ವೀಟ್ ನಲ್ಲೇನಿದೆ?

'ಯೋಗ,ಯೋಗ್ಯತೆ ಬಗ್ಗೆ ಮಾತಾಡಲು ಕನಿಷ್ಟ ಅರ್ಹತೆಯಾದರೂ ಇದೆಯಾ ಎಂದು ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕಿತ್ತು. ಛಲವಾದಿ ನಾರಾಯಣಸ್ವಾಮಿ ಅವರೇ. ನಿಮ್ಮ ಹೋರಾಟ, ಹಾರಾಟ, ಚೀರಾಟ, ಪರೋಟಾಗಳ ಆಳ-ಅಗಲ ಎಲ್ಲವನ್ನೂ ಬಲ್ಲೆ. ಅದರ ಬಗ್ಗೆ ಮಾತಾಡುವಂತೆ ಪ್ರಚೋದಿಸಿ ಮತ್ತಷ್ಟು ಬೆತ್ತಲಾಗಬೇಡಿ. ಧಮ್ ಬಿರಿಯಾನಿಯೊಂದಕ್ಕೇ ನಿಮ್ಮ ಧಮ್ ಇಳಿದಂತಿದೆ. ಮೋದಿಯವರ ಅನಾಚಾರಗಳನ್ನು ಸಮರ್ಥಿಸಲು ಹೋಗಿ ಮೈ ಎಲ್ಲಾ ಪರಚಿಕೊಂಡು ಗಾಯ ಮಾಡಿಕೊಂಡರೆ ಯಾರು ಹೊಣೆ? ಅದಕ್ಕೆ ಯೋಗ,ಯೋಗ್ಯತೆ ಎಂದು ಜ್ಯೋತಿಷಿಗಳಂತೆ ಮಾತಾಡಲು ಶುರು ಮಾಡಿದಂತಿದೆ.

ಮೋದಿಯ ಅನಾಚರಗಳ ಬಗ್ಗೆ ಹಿಂದೆಯೂ ಮಾತಾಡಿದ್ದೇನೆ, ಈಗಲು ಮಾತಾಡುತ್ತಿದ್ದೇನೆ, ಮುಂದೆಯೂ ಮಾತಾಡುತ್ತೇನೆ. ಮೋದಿಯವರನ್ನು ಸಮರ್ಥನೆ ಮಾಡುವ ಭರದಲ್ಲಿ ನಿಮ್ಮ ಬುಡಕ್ಕೆ ತಂದುಕೊಂಡು ನನ್ನ ಕೈಗೆ ದೊಣ್ಣೆ ಕೊಟ್ಟು ಬಡಿಸಿಕೊಳ್ಳಬೇಡಿ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಗಾಂಧಿ ಫ್ಯಾಮಿಲಿಯ ನಿಷ್ಟೆ ನನಗೆ ಸಿಕ್ಕಿರುವ ಯೋಗವಾದರೇ, ತಳ ಸಮುದಾಯಗಳು, ಶೋಷಿತ ಸಮುದಾಯಗಳನ್ನು ತುಳಿಯುವ ಸಂಘ ಪರಿವಾರದವರ ಮುಖವಾಡವನ್ನು ಬಿಚ್ಚಿಡುವುದು ಕೂಡ ನನಗೆ ಸಿಕ್ಕಿರುವ ಯೋಗವೇ ಎಂದು ಭಾವಿಸಿದ್ದೇನೆ.

ಸಾಮಾಜಿಕ ನ್ಯಾಯಕ್ಕಾಗಿ ಸ್ವಪಕ್ಷವೇ ಇರಲಿ, ಅಧಿಕಾರದಲ್ಲಿ ಕೂತಿರುವವರು ಯಾರೇ ಇರಲಿ ಪ್ರಶ್ನಿಸುವುದು ನನ್ನ ಯೋಗವೇ. ಆದರೆ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿ ಅಧಿಕಾರಕ್ಕಾಗಿ ಯಾರೋ ಬಳಸಿ ಬಿಸಾಡಿದ್ದ ಚೆಡ್ಡಿಯನ್ನು ತಲೆಯ ಮೇಲೆ ಹೊತ್ತು ತಿರುಗುವುದೇ ನಿಮಿಗೆ ಸಿಕ್ಕ ಯೋಗ್ಯತೆ ಎಂದು ಭಾವಿಸಿದ್ದರೆ ನಿಮ್ಮ ಕರ್ಮ.

ಅಧಿಕಾರದಾಸೆಗೆ ನಿಮ್ಮ ಪಕ್ಷದ ನಾಯಕರನ್ನು ಹೀಯಾಳಿಸುವುದು ಬಿಡಿ, ಕನಿಷ್ಟ ಪ್ರಶ್ನೆಯನ್ನಾದರೂ ಮಾಡಿ ಖುರ್ಚಿ ಉಳಿಸಿಕೊಳ್ಳಿ ಆಗ ನಿಮ್ಮ "ಛಲ"ವಾದಿಯನ್ನು ನಾನೇ ಬೆಂಬಲಿಸುತ್ತೇನೆ. ಕೇಂದ್ರ ಸರ್ಕಾರ ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಯನ್ನೇ ನಿಮ್ಮಿಂದ ಪ್ರಶ್ನಿಸಲು ಆಗುತ್ತಿಲ್ಲ ಇನ್ನೂ ಹೀಯಾಳಿಸಿ, ನಿಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ? ಪ್ರಶ್ನೆ ಮಾಡದೆ ಇರುವುದನ್ನೇ ನೀವು ಯೋಗ್ಯತೆ ಎಂದುಕೊಂಡರೆ ಅಂತಹ ಯೋಗ್ಯತೆಗೆ ನೀವು ಮಾತ್ರ ಭಾಜನರಾಗಲು ಸಾಧ್ಯ. ವಿದ್ಯಾರ್ಥಿ ದೆಸೆಯಿಂದಲೂ ಹೋರಾಟವನ್ನೇ ನಮ್ಮ ಬದುಕನ್ನಾಗಿಸಿಕೊಂಡು, ಐವತ್ತು ವರ್ಷಗಳ ಕಾಲ ಎಂದೂ ಅಧಿಕಾರಕ್ಕಾಗಿ ಪಕ್ಷ ಸಿದ್ದಾಂತವನ್ನು ಬದಲಾಯಿಸದೆ ಇರುವುದೇ ನನ್ನ ನಿಷ್ಟೆ. ಅದೇ ನನ್ನ ಯೋಗ, ಅದೇ ನನ್ನ ಯೋಗ್ಯತೆ. ಅಂತಹ ಯೋಗ-ಯೋಗ್ಯತೆಗೆ ಅರ್ಹತೆಯೂ ಬೇಕಲ್ವಾ? ಎಂದು ಬಿಕೆ ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com