ಕಡಿಮೆ ಖರ್ಚಿನಲ್ಲಿ ಅಣಬೆ ಬೇಸಾಯ: ಗುಡ್ಡಗಾಡು ಜನರಿಗೆ ಕೃಷಿ ಹೇಳಿಕೊಟ್ಟು ಇತರರಿಗೆ ಮಾದರಿಯಾದ ಉತ್ತರಾಖಂಡ ಯುವತಿ!

ಗುಡ್ಡಗಾಡು ಪ್ರದೇಶದಲ್ಲಿದ್ದು ಏನು ಮಾಡೋಣ, ಪಟ್ಟಣಕ್ಕೆ ಹೋಗೋಣ, ನಾಲ್ಕು ಕಾಸು ಸಂಪಾದನೆ ಮಾಡೋಣ ಎಂದು ಹೇಳುವ ಯುವಕರೇ ಹೆಚ್ಚು. ಆದರೆ, ಇಂತಹ ಮನೋಭಾವನೆಯನ್ನು ದೂರಾಗಿಸಲು ಉತ್ತರಾಖಂಡದ ಈ ಯುವತಿ ಶ್ರಮಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾಳೆ.
ದಿವ್ಯಾ ರಾವತ್
ದಿವ್ಯಾ ರಾವತ್

ಡೆಹ್ರಾಡೂನ್: ಗುಡ್ಡಗಾಡು ಪ್ರದೇಶದಲ್ಲಿದ್ದು ಏನು ಮಾಡೋಣ, ಪಟ್ಟಣಕ್ಕೆ ಹೋಗೋಣ, ನಾಲ್ಕು ಕಾಸು ಸಂಪಾದನೆ ಮಾಡೋಣ ಎಂದು ಹೇಳುವ ಯುವಕರೇ ಹೆಚ್ಚು. ಆದರೆ, ಇಂತಹ ಮನೋಭಾವನೆಯನ್ನು ದೂರಾಗಿಸಲು ಉತ್ತರಾಖಂಡದ ಈ ಯುವತಿ ಶ್ರಮಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾಳೆ.

ತಂದೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ದೇಶದ ಗಡಿಯಲ್ಲಿ ಆಗಾಗ್ಗೆ ನಿಯೋಜನೆಗೊಂಡರೂ ಇವರ ಪುತ್ರಿ ದಿವ್ಯಾ ರಾವತ್ ಮಾತ್ರ ತಾಯ್ನಾಡಾದ ಉತ್ತರಾಖಂಡದ ಬಹಳಷ್ಟು ಪ್ರೀತಿ ಇಟ್ಟುಕೊಂಡಿದ್ದಾಳೆ. 15 ವರ್ಷದವಳಾಗಿದ್ದಾಗಲೇ ಈ ಯುವತಿ ಸಮಾಜ ಸೇವೆಯ ಮನೋಭಾವವನ್ನು ಹೊಂದಿದ್ದಳು.

ಸೋಶಿಯಲ್ ವರ್ಕ್ ನಲ್ಲಿ ಪದವಿ ಪೂರ್ಣಗೊಳಿಸಿದ ದಿವ್ಯ, ಸಮಾಜ ಸೇವೆ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಲು ಆರಂಭಿಸಿದ್ದಳು. ಗುಡ್ಡಗಾಡುಗಳಲ್ಲಿ ನೆಲೆಸಿ, ಹೊತ್ತು ಊಟಕ್ಕೂ ಸಂಕಷ್ಟ ಪಡುತ್ತಿದ್ದ ಜನರಿಗೆ ನೆರವಾಗಿದ್ದಾಳೆ. ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ ಯುವತಿ, ಪ್ರತಿಯೊಬ್ಬರಿಗೂ ಸಹಾಯ ಮಾಡುವ ಪ್ರತಿಜ್ಞೆ ಮಾಡಿದ್ದಳು.

ಅದರಂತೆ ಇಲ್ಲಿನ ಜನತೆಗೆ ಕಡಿಮೆ ಖರ್ಚಿನಲ್ಲಿ ಅಣಬೆ ಬೇಸಾಯ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟಳು. ಇದೀಗ ಈ ಬೇಸಾಯವೇ ಇಲ್ಲಿನ ಜನರಿಗೆ ಜೀವನೋಪಾಯವಾಗಿದೆ.

ಗುಡ್ಡಗಾಡು ಪ್ರದೇಶದಲ್ಲಿರುವ ಜನರಿಗೆ ಏನಾದೂ ಮಾಡಬೇಕೆಂದು ಬಯಸಿದ್ದೆ. ಸಾಮಾನ್ಯವಾಗಿ ಇಲ್ಲಿನ ಯುವಕರು ದುಡಿಮೆಗಾಗಿ ವಲಸೆ ಹೋಗುತ್ತಾರೆ. ಇದನ್ನು ತಡೆಯಲು ನಾನು ಪ್ರಯತ್ನಿಸಿದೆ. ಪರಿಸ್ಥಿತಿಯನ್ನು ಬಹಳ ಹತ್ತರದಿಂದ ಗಮನಿಸಿದೆ. ಅವರ ಸಮಸ್ಯೆಗಳನ್ನು ಆಲಿಸಿದ ಬಳಿಕ ಬೇಸರವಾಯಿತು. ಪದವಿ ಮುಗಿಸಿದ 2013ರಲ್ಲಿ ದೆಹಲಿಯಿಂದ ಡೆಹ್ರಾಡೂನ್'ಗೆ ಮರಳಿದೆ. ಬಳಿಕ ರಾಜ್ಯ ತೋಟಗಾರಿಕಾ ಇಲಾಖೆಯಿಂದ ಅಣಬೆ ಕೃಷಿಯ ತರಬೇತಿಯನ್ನು ಪಡೆದುಕೊಂಡೆ. ಉತ್ತಮ ತಳಿಗಳ ಅಣಬೆ ಬೆಳೆಗಳ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಥೈಲ್ಯಾಂಡ್, ಮಲೇಷ್ಯಾ, ವಿಯೆಟಮ್, ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ಗೆ ಭೇಟಿ ನೀಡಿದೆ.

ಬಳಿಕ ಚಮೋಲಿಯಲ್ಲಿರುವ ನನ್ನ ಹಳ್ಳಿಯಲ್ಲಿ ನೆಲೆಯೂರಲು ನಿರ್ಧರಿಸಿದೆ. ಅಲ್ಲಿ ಅಣಬೆ ಕೃಷಿಯನ್ನು ಪ್ರಾರಂಭಿಸಿದೆ. ಇದರಲ್ಲಿ ಉತ್ತಮ ಸಾಧನೆ ಮಾಡಿದೆ. ಬಳಿಕ ಗುಡ್ಡಗಾಡುಗಳಲ್ಲಿರುವ ಯುವಕರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದೆ ಎಂದು ದಿವ್ಯಾ ಹೇಳಿದ್ದಾರೆ.

ಅಣಬೆ ಕೃಷಿ ಎಷ್ಟು ಪ್ರಯೋಜನಕಾರಿ ಎಂಬುದನ್ನು ಗ್ರಾಮಸ್ಥರಿಗೆ ವಿವರಿಸಿದ್ದೆ. ಆರಂಭದಲ್ಲಿ ಅವರು ಅಷ್ಟಾಗಿ ಪ್ರಬಾವಿತರಾಗಲಿಲ್ಲ. ನನ್ನನ್ನು ನಿಂದಿಸಿದರು. ಬಳಿಕ ಖಾಸಗಿ ಲಿಮಿಟೆಡ್ ಕಂಪನಿಯನ್ನು ಸ್ಥಾಪಿಸಲು ನಿರ್ಧರಿಸಿದೆ. ಇದು ನನಗೆ ಹಣ ಸಂಪಾದಿಸಲು ಸಹಾಯ ಮಾಡಿತು. ಇದು ಇತರರಿಗೂ ಉದಾಹರಣೆಯಾಯಿತು. ಬಳಿಕ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು. ಇಂದು ನಾನು 15,000 ಕುಟುಂಬಗಳಿಗೆ ಸ್ಪೂರ್ತಿಯಾಗಿದ್ದೇನೆ. ಇದನ್ನು ಹೇಳಲು ನನಗೆ ಹೆಮ್ಮೆಯಿದೆ. ಅಣಬೆ ಕೃಷಿಯನ್ನು ಕೈಗೆತ್ತಿಕೊಂಡವರು, ಉತ್ತಮ ಜೀವನ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.

ಪೌರಿ ಪ್ರದೇಶದ ಚೌಬಟ್ಟಖಾಲ್ ನಿವಾಸಿ ವೇದಪಾಲ್ ಸಿಂಗ್ (33) ಎಂಬುವವರು ಮಾತನಾಡಿ, ದಿವ್ಯಾ ಅವರ ಯಶಸ್ಸಿನ ಕಥೆಯಿಂದ ಸ್ಫೂರ್ತಿ ಪಡೆಯಲಾಯಿತು. ನಂತರ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ ಸ್ವಲ್ಪ ಸಮಯದ ನಂತರ 2016 ರಲ್ಲಿ ಅಣಬೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಕಷ್ಟಗಳು ಎದುರಾಗವು. ಆದರೆ, ಗುರಿ ಮುಟ್ಟುವಲ್ಲಿ ಯಶಸ್ವಿಯಾದೆ. ನಾನೀಗ ಸ್ವಾವಲಂಬಿಯಾಗಿದ್ದೇನೆ, ಅಣಬೆ ಕೃಷಿಯಿಂದ ತಿಂಗಳಿಗೆ 60-70,000 ರೂ ಗಳಿಸುತ್ತಿದ್ದೇನೆಂದು ಹೇಳಿದ್ದಾರೆ.

ರಿಷಿಕೇಶದ ಗೃಹಿಣಿ ಮೋನಿಕಾ ಮಿತ್ತಲ್ (36) ಎಂಬುವವರು ಮಾತನಾಡಿ, ದಿವ್ಯಾ ಅವರಿಂದ ಸ್ಫೂರ್ತಿ ಪಡೆದುಕೊಂಡೆ. ಅಣಬೆ ಕೃಷಿ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ. ಕೋವಿಡ್ ಲಾಕ್ಡೌನ್ ನಿಂದಾಗಿ ನನ್ನ ಪತಿಯ ಉದ್ಯಮಕ್ಕೆ ಹೊಡೆತ ಬಿದ್ದಿತ್ತು. ಈ ವೇಳೆ ನನ್ನ ಕುಟುಂಬ ಸಂಕಷ್ಟಕ್ಕೊಳಗಾಗಿತ್ತು. ಇಂದು ನಾನು ನನ್ನದೇ ಆದ ಯಶಸ್ವಿ ವ್ಯಾಪಾರವನ್ನು ಹೊಂದಿದ್ದೇನೆ. ನನಗೆ ಬಹಳ ಸಂತೋಷವಿದೆ ಎಂದು ಹೇಳಿದ್ದಾರೆ.

ಮಿಜೋರಾಂನ ಸೆರ್ಚಿಪ್ ಪಟ್ಟಣದ ನಿವಾಸಿ ಹೆನ್ರಿ ಸೈಂಗುರ (30) ಅವರು ಮಾತನಾಡಿ, ಈ ಪ್ರದೇಶದಲ್ಲಿ ಬಹಳಷ್ಟು ರೈತರು ಅಣಬೆ ಕೃಷಿ ಮೂಲಕ ಸ್ವಾವಲಂಬಿಯಾಗಿದ್ದಾರೆ. ಮಿಜೋರಾಂ ಸರ್ಕಾರದ ಸಹಾಯದಿಂದ, ಇಂದು ನನ್ನೊಂದಿಗೆ ಸುಮಾರು 100 ರೈತರು ಕೆಲಸ ಮಾಡುತ್ತಿದ್ದಾರೆ. ಫ್ಲೋಟಿಂಗ್ ಕ್ಲೈಮೇಟ್ ರೆಸಿಲೆಂಟ್ ಅಪ್‌ಲ್ಯಾಂಡ್ ಫಾರ್ಮಿಂಗ್ ಸಿಸ್ಟಮ್ (ಫೋಕಸ್) ನಮಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.

ಇದೀಗ ದಿವ್ಯಾ ರಾವತ್ ಅವರು ಉತ್ತರಾಖಂಡ ಸರ್ಕಾರದ ಅಧಿಕೃತ ಬ್ರಾಂಡ್ ಅಂಬಾಸಿಡರ್ (ಮಶ್ರೂಮ್) ಆಗಿದ್ದು, ಅಣಬೆಗಳನ್ನು ಬೆಳೆಸುವಲ್ಲಿ ಮತ್ತು ಮಾರಾಟ ಮಾಡುವಲ್ಲಿ ಲಾಭದಾಯಕ ಉದ್ಯಮವನ್ನು ಸ್ಥಾಪಿಸಿದ್ದಾರೆ.

ಆರ್ಥಿಕವಾಗಿ ಸ್ವಾವಲಂಬಿಯಾಗಲು ದೇಶದ ಇತರೆ ಭಾಗಗಳ ಜನರಿಗೆ ಅಣಬೆ ಕೃಷಿಯ ತರಬೇತಿ ನೀಡುತ್ತಾರೆ, ಇದು ಹಳ್ಳಿಗಳಿಂದ ಪಟ್ಟಣಕ್ಕೆ ಹೋಗುವ ಜನರ ವಲಸೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಸಹಾಯ ಮಾಡುತ್ತಿದೆ.

ಇತರರಿಗೆ ಮಾದರಿಯಾಗಿರುವ ದಿವ್ಯಾ ಅವರಿಗೆ ಅಂದಿನ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಪ್ರತಿಷ್ಠಿತ ‘ನಾರಿ ಶಕ್ತಿ ನೀಡಿ ಗೌರವಿಸಿದ್ದರು. ಇದಲ್ಲದೆ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿಯೂ ದಿವ್ಯಾ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

2017 ರಲ್ಲಿ ಉತ್ತರಾಖಂಡ ಸರ್ಕಾರದ ತೋಟಗಾರಿಕಾ ಇಲಾಖೆಯು ವಿದ್ಯಾ ಅವರಿಗೆ 'ಉದ್ಯಾನ ಪಂಡಿತ್ ಪುರಸ್ಕಾರ'ವನ್ನು ನೀಡಿ, ಗೌರವಿಸಿತ್ತು. ಇಂದು ದಿವ್ಯಾ ಅವರು ಜಿ ಬಿ ಪಂತ್ ಕೃಷಿ ವಿಶ್ವವಿದ್ಯಾಲಯದ ಮಂಡಳಿಯಲ್ಲಿದ್ದಾರೆ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಸಲಹೆಗಾರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com