
ಮಂಗಳಮುಖಿ ಎನ್ನುವ ಕಾರಣಕ್ಕೆ ಚಾಲಕರು ಅಟೋ ರಿಕ್ಷಾ ಹತ್ತಿಸಿಕೊಳ್ಳಲು ನಿರಾಕರಿಸಿದ ಕಾರಣ ಅವಮಾನಗೊಂಡ ಮಂಗಳಮುಖಿಯೊಬ್ಬರು, ಈಗ ನಾಲ್ಕು ಆಟೋ ರಿಕ್ಷಾಗಳನ್ನು ಖರೀದಿಸಿ ಅವುಗಳನ್ನು ಬಾಡಿಗೆಗೆ ನೀಡಿದ್ದು, ಈ ಮೂಲಕ ತಮ್ಮನ್ನು ಅವಮಾನಿಸಿದವರ ಎದುರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಂಡು ಗೆದ್ದು ಬೀಗಿದ್ದಾರೆ.
ಯಾರವರು ಎನ್ನುತ್ತೀರಾ... ಇವರೇ ಅನಿ ಮಂಗಳೂರು. ಮೂಲತಃ ರಾಯಚೂರಿನವರು. ಮಂಗಳೂರಿನಲ್ಲಿ ವಿದ್ಯಾಭ್ಯಾಸಕ್ಕೆ ಬಂದ ಇವರು ಇದೀಗ ಮಂಗಳೂರಿನಲ್ಲಿಯೇ ನೆಲೆ ನಿಂತಿದ್ದಾರೆ.
ಬಿಎ ಬಳಿಕ ಬಿಎಡ್ ಎರಡು ಸೆಮಿಸ್ಟರ್ ಬರೆದ ಇವರು, ಮಂಗಳಮುಖಿಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಕಷ್ಟ ಎಂದು ಅರಿತು ಶಿಕ್ಷಣ ಮೊಟಕುಗೊಳಿಸಿದ್ದರು. ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ.
ಹುಟ್ಟಿನಲ್ಲಿ ನಾನು ಗಂಡು ಮಗುವಾಗಿದ್ದೆ. ಆದರೆ, ಬೆಳವಣಿಗೆ ವೇಳೆ ನನ್ನಲ್ಲಿ ಸ್ತ್ರೀ ಪ್ರವೃತ್ತಿ ಮೂಡಿದ್ದವು. ಹುಡುಗನಂತೆ ಬಟ್ಟೆ ಧರಿಸಿದರೂ, ನನ್ನಲ್ಲಿ ಹುಡುಗನ ರೀತಿಯ ಭಾವನೆಗಳಿರಲಿಲ್ಲ. ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯಲ್ಲಿ ಶೇ.79 ಅಂಕಗಳನ್ನು ಗಳಿಸಿದ್ದೆ. ಮಂಗಳೂರಿನ ಸರ್ಕಾರಿ ಶಿಕ್ಷಕರ ಶಿಕ್ಷಣ ಕಾಲೇಜಿನಲ್ಲಿ ಉಚಿತ ಬಿ.ಎಡ್ ಸೀಟನ್ನು ಗಳಿಸಿದ್ದೆ. ಇದು ಗ್ರಾಮದ ಶ್ಲಾಘನೆಗೆ ಕಾರಣವಾಗಿತ್ತು.
ಆದರೆ, ಬಿ.ಎಡ್ ಕೋರ್ಸ್ನ ಅರ್ಧದಲ್ಲಿ ವೈಯಕ್ತಿಕ ವಿಕಸನವು ಹೆಚ್ಚು ಗೋಚರಿಸಿತು. ಲಿಂಗ ಪರಿವರ್ತನೆಗೊಂಡೆ. ಬಳಿಕ ಅಧ್ಯಯನ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಪ್ರತಿ ದಿನ ನನ್ನನ್ನು ಒಬ್ಬರಲ್ಲಾ ಒಬ್ಬರು ಅಪಹಾಸ್ಯ ಮಾಡಲಾರಂಬಭಿಸಿದರು. ಪ್ರಶ್ನೆ ಮಾಡಿದರು. ನೋಟಗಳು ಭಿನ್ನವಾಯಿತು. ಪಿಸುಮಾತುಗಳು ಹೆಚ್ಚಾಯಿತು. ಇದರಿಂದ ಹತಾಶಳಾಗಿದ್ದೆ. ಬಳಿಕ ಕೆಲಸಕ್ಕಾಗಿ ಹಲವಾರು ಕಚೇರಿ, ರೆಸ್ಟೋರೆಂಟ್ ಗಳಿಗೆ ತೆರಳಿದ್ದೆ. ಎಲ್ಲೆಡೆ ತಿರಸ್ಕಾರಗಳೇ ಕೇಳಿ ಬಂದಿತು. ಬದುಕು ಕಷ್ಟಕರವಾಯಿತು, ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಯಿತು.
ಈ ಸಂದರ್ಭದಲ್ಲಿ ಆಟೋದವರೂ ಕೂಡ ನನ್ನನ್ನು ಕೀಳು ಮಟ್ಟದಲ್ಲಿ ನೋಡುವಂತಾಗಿತ್ತು. ಚಾಲಕರು ನನ್ನನ್ನು ಮೇಲಕ್ಕೆ, ಕೆಳಕ್ಕೆ ನೋಡುತ್ತಿದ್ದರು. ಓಡಿಸುತ್ತಿದ್ದರು. ಮನೆಗೆ ತೆರಳಲು ಬಾಡಿಗೆ ರಿಕ್ಷಾಗಳನ್ನು ಅವಲಂಬಿಸಿದ್ದೆ. ಆದರೆ ಪ್ರತಿಬಾರಿಯೂ ಮನೆಗೆ ತೆರಳಲು ಆಟೋ ರಿಕ್ಷಾಗಳನ್ನು ನಿಲ್ಲಿಸಲು ಪ್ರಯತ್ನಿಸಿದರೆ ನಿಲ್ಲಿಸದೆ ಹೋಗುತ್ತಿದ್ದರು.
ಒಂದು ದಿನ ಸಂಜೆಯಿಂದ ರಾತ್ರಿಯಾದರೂ ಯಾವ ರಿಕ್ಷಾದವರೂ ಹತ್ತಿಸಿಕೊಳ್ಳಲು ಒಪ್ಪಿರಲಿಲ್ಲ. ಇದರಿಂದ ಮನೆಗೆ ನಡೆದುಕೊಂಡೇ ಹೋಗಬೇಕಾಯಿತು. ಆ ದಿನ ಅಳುತ್ತಲೇ ಮನೆಗೆ ಹೋಗಿದ್ದೆ. ಆ ರಾತ್ರಿ ನನ್ನ ತಾಯಿ ನನಗೆ ಹೇಳಿದ ವಿಷಯ ನನ್ನ ಜೀವನವನ್ನು ಬದಲಾಯಿಸಿತು. ಇತರರಿಗೆ ಕಾಯುವುದನ್ನು ನಿಲ್ಲಿಸಿ, ನಿನಗೆ ನೀನೇ ರಕ್ಷಕನಾಗು ಎಂದಿದ್ದರು.
ನನ್ನ ತಾಯಿ ಆಡಿದ ಆ ಮಾತು ನನ್ನ ಹೃದಯ ತಟ್ಟಿತ್ತು. ಬಳಿಕ ಆಟೋ ಚಾಲನೆಯನ್ನು ಕಲಿತುಕೊಂಡೆ. ಚಾಲಕನಾಗಿ ಅಷ್ಟೇ ಅಲ್ಲದೆ, ಸ್ವಂತಕ್ಕೆ ಆಟೋ ಖರೀದಿಸಲು ನಿರ್ಧರಿಸಿದ್ದೆ. ನನ್ನ ಕನಸಿಗೆ ಬ್ಯಾಂಕ್ ಗಳಿಂದ ಸಾಲ ಸಿಗುವುದಿಲ್ಲ ಎಂದು ನನಗೆ ತಿಳಿದಿತ್ತು. ಹೀಗಾಗಿ 2023 ಮತ್ತು 2024 ರ ನಡುವೆ ಬಳಸಿದ ವಾಹನಗಳನ್ನು ಮಾರಾಟ ಮಾಡಲು ಯೋಜಿಸುತ್ತಿದ್ದ ಆಟೋ ಚಾಲಕರನ್ನು ಸಂಪರ್ಕಿಸಿದ್ದೆ. ಸಾಲ ನೀಡದೆ, ಬಾಕಿ ಹಣ ನೀಡಿದ ಬಳಿಕ ಆಟೋಗಳನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇಎಂಐನಂತೆ ಹಣ ಪಾವತಿ ಮಾಡಿದ್ದೆ. ಈ ಮೂಲಕ ನಾಲ್ಕು ಆಟೋಗಳನ್ನು ಖರೀಸಿದೆ. ಇನ್ನೂ 1.5 ಲಕ್ಷ ರೂ ಬಾಕಿಯಿದ್ದು, ಪಾವತಿಸುತ್ತಿದ್ದೇನೆಂದು ಅನಿ ಹೇಳಿದ್ದಾರೆ.
ದಿನಕ್ಕೆ 200 ರೂಗಳಿಗೆ ಆಟೋಗಳನ್ನು ಬಾಡಿಗೆಗೆ ನೀಡುತ್ತಿದ್ದೇನೆ. ಇದು ನನ್ನ ಜೀವನದ ದೊಡ್ಡ ತಿರುವಾಗಿದೆ. ನನ್ನ ಆಟೋಗಳಲ್ಲಿ ಗರ್ಭಿಣಿ ಸ್ತ್ರೀಯರು ಹಾಗೂ ವಯಸ್ಸಾದ ಟ್ರಾನ್ಸ್ಜೆಂಡರ್ ಯಾವುದೇ ಶುಲ್ಕ ವಿಧಿಸುವುದಿಲ್ಲ. ಅವರಿಗೆ ಉಚಿತ ಸೇವೆ ನೀಡಲಾಗುತ್ತದೆ. ಪ್ರತಿಯೊಂದು ಆಟೋದಲ್ಲಿಯೂ ಈ ಕುರಿತ ಸ್ಟಿಕ್ಕರ್ ಗಳನ್ನು ಹಾಕಲಾಗಿದೆ.
ನಮ್ಮ ಆಟೋಗಳು ಹೆಚ್ಚಾಗಿ ದೇರಳಕಟ್ಟೆ ಮತ್ತು ಹತ್ತಿರದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತವೆ, ಅಲ್ಲಿ ಅನೇಕ ಟ್ರಾನ್ಸ್ಜೆಂಡರ್ ಸಮುದಾಯಗಳು ವಾಸವಿದ್ದು, ಅವರಿಗೆ ಸಹಾಯಕವಾಗಿದೆ. ನಾನು ಎದುರಿಸಿದ ಪರಿಸ್ಥಿತಿ ಯಾರಿಗೂ ಪ್ರಮುಖವಾಗಿ ವಯಸ್ಸಾದವರಿಗೆ ಬರಬಾರದು. ಯಾರೂ ಬದುಕಲು ಬೇಡಿಕೊಳ್ಳಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ಅನಿ ಮಂಗಳೂರು ಅವರು ಇದು ಕೇವಲ ಆಟೋಚಾಲಕರಷ್ಟೇ ಅಲ್ಲ, ಉದ್ಯಮಿ, ಪ್ರಮಾಣೀಕೃತ ವೈಯಕ್ತಿಕ ಜಿಮ್ ತರಬೇತುದಾರ, ಕಲಾವಿದೆಯಾಗಿಯೂ ಪಾತ್ರ ನಿರ್ವಹಿಸುತ್ತಿದ್ದಾರೆ.
ವಸಸ್ಸಾಗ ಮಂಗಳಮುಖಿಯಲಿಗೆ ಮನೆ, ಆರೈಕೆ, ಗೌರವಯುತ ಜೀವನಕ್ಕೆ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಸರ್ಕಾರ ಭೂಮಿ ನೀಡಿ ನೆರವಾಗಬೇಕೆಂದು ನನ್ನ ಬಯಕೆಯಾಗಿದೆ. ನಮ್ಮಲ್ಲಿ ಹೆಚ್ಚಿನವರು ಭಿಕ್ಷೆ ಬೇಡುವುದು ಅಥವಾ ವೇಶ್ಯಾವಾಟಿಕೆಯಲ್ಲಿ ತೊಡಗುತ್ತಿದ್ದಾರೆ. ಆಯ್ಕೆಯಿಂದಲ್ಲ, ಯಾವುದೇ ಪರ್ಯಾಯ ಮಾರ್ಗಗಳಿಲ್ಲದ ಕಾರಣ ಇವುಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇವುಗಳ ಬದಲಾವಣೆ ಅವಶ್ಯಕವಾಗಿದೆ. ನಾವು ವಿಚಿತ್ರವಲ್ಲ ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ನಾವು ಅಸ್ತಿತ್ವದಲ್ಲಿದ್ದೇವೆ. ಆದರೆ, ಜನರು ಅದನ್ನು ಮರೆತುಬಿಡುತ್ತಾರೆ. ಇದೀಗ ನೆನಪಿಸಿಕೊಳ್ಳುವ ಸಮಯ ಶುರುವಾಗಿದೆ ಎಂದು ಹೇಳಿದ್ದಾರೆ.
Advertisement