ಸಂಕಷ್ಟ ಹೆಚ್ಚಿಸಿದ ಕ್ವಿಂಟಾನ್ ಶತಕ
ದಕ್ಷಿಣ ಆಫ್ರಿಕ ಎ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ಗೆ ಕಂಗೆಟ್ಟಿರುವ ಭಾರತ ಎ ತಂಡ, ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.
ಪಂದ್ಯದ ಮೊದಲ ದಿನದಂದು ತನ್ನಮೊದಲ ಇನಿಂಗ್ಸ್ ವೇಳೆ ಭಾರತದ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದ್ದ ದಕ್ಷಿಣ ಆಫ್ರಿಕಾ ಎ, ಬುಧವಾರ ತನ್ನ ಆಟವನ್ನು ಮುಂದುವರೆಸಿ 542 ರನ್ ಗಳ ಬೃಹತ್ ಮೊತ್ತಕ್ಕೆ ಅಲ ಔಟ್ ಆಯಿತು. ಆ ನಂತರ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ದಿನಾಂತ್ಯಕ್ಕೆ 122 ರನ್ ಮೊತ್ತ ಪೇರಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿದೆ.
ಆರಂಭಿಕ ಕುಸಿತ: ಹರಿಣಗಳ ಬೃಹತ್ ಇನಿಂಗ್ಸ್ ಗೆ ಪ್ರತಿಯಾಗಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಪೀಟ್ ಭೂತವಾಗಿ ಕಾಡಿದರು. ಇನಿಂಗ್ಸ್ ಮೊತ್ತ ಕೇವಲ 43 ರನ್ ಆಗಿದ್ದಾಗ ಜಿವನ್ಜೋತ್ ಸಿಂಗ್ ಸಿವೆಟ್ ಉರುಳಿಸಿದ ಪೀಟ್ ಆನಂತರ ಮತ್ತೊಬ್ಬ ಆರಂಭಿಕ ಅಭಿನವ್ ಮುಕುಂದ್ ಅವರ ವಿಕೆಟ್ ನ್ನೂ ಕಬಳಿಸಿ ಭಾರತಕ್ಕೆ ಆಘಾತ ನೀಡಿದರು.
ಇನ್ನು ದಿಟ್ಟತನದಿಂದ ಬ್ಯಾಟ್ ಬೀಸುತ್ತಿದ್ದ ಶ್ರೇಯಸ್ ಅಯ್ಯರ್ ಅವರನ್ನು ಪಾರ್ನೆಲ್ ಪೆವಿಲಿಯನ್ ಗೆ ಅಟ್ಟಿದರು. ಕೇವಲ ಒಂದು ರನ್ ಅಂತರದಲ್ಲಿ ಶ್ರೇಯಸ್ ಅರ್ಧಶತಕ ತಪ್ಪಿಸಿಕೊಂಡರು. ದಿನಾಂತ್ಯದ ಹೊತ್ತಿಗೆ ಅಜೇಯರಾಗುಳಿದಿದ್ದ ನಾಯಕ ಅಂಬಟಿ ರಾಯುಡು ಹಾಗೂ ಕರುಣ್ ನಾಯರ್ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕ್ವಿಂಟಾನ್ ಡಿ ಕಾಕ್, ಭಾರತಕ್ಕೆ ಮತ್ತೊಬ್ಬ ತಲೆನೋವಿನ ಬ್ಯಾಟ್ಸ್ ಮನ್ ಆಗಿ ಕಾಡಿದರು. ಕ್ರಿಸ್ ನಲ್ಲಿ ಜತೆಯಾಗಿದ್ದ ಪೀಟ್ ಅವರಿಂದ ಸೂಕ್ತ ಬೆಂಬಲ ದೊರೆಯದಿದ್ದರೂ, ಅವರ ನಂತರ ಬಂದ ಡಿಜೆ ವಿಲಾಸ್ ಜತೆಗೂಡಿ 7 ನೇ ವಿಕೆಟ್ ಗೆ 107 ರನ್ ಗಳ ಜತೆಯಾಟ ನೀಡಿದರು.