ಮಾಜಿ ಕಾರ್ಪೊರೇಟರ್ ಪತಿ ಬರ್ಬರ ಕೊಲೆ

ಬಿಬಿಎಂಪಿಯ ನಾಯಂಡನಹಳ್ಳಿ ವಾರ್ಡ್ ನ ಮಾಜಿ ಸದಸ್ಯೆ ರಾಜೇಶ್ವರಿಯ ಪತಿ ಉಮೇಶ್ ಬೆಳಗೋಡು (48) ಎಂಬುವರನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ...
ಮಾಜಿ ಕಾರ್ಪೊರೇಟರ್ ಪತಿ ಬರ್ಬರ ಕೊಲೆ
ಮಾಜಿ ಕಾರ್ಪೊರೇಟರ್ ಪತಿ ಬರ್ಬರ ಕೊಲೆ

ಬೆಂಗಳೂರು: ಬಿಬಿಎಂಪಿಯ ನಾಯಂಡನಹಳ್ಳಿ ವಾರ್ಡ್ ನ ಮಾಜಿ ಸದಸ್ಯೆ ರಾಜೇಶ್ವರಿಯ ಪತಿ ಉಮೇಶ್ ಬೆಳಗೋಡು (48) ಎಂಬುವರನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ರಾತ್ರಿ 9.45ರ ಸುಮಾರಿಗೆ ಮನೆಗೆ ಮರಳುವಾಗ ರಾಜರಾಜೇಶ್ವರಿ ನಗರದ ಬಾಟಾ ಶೋ ರೂಂ ಮುಂದೆ ಕಾರಿನಲ್ಲಿ ತೆರಳುತ್ತಿದ್ದಾಗ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ ಲಾಂಗು ಮಚ್ಚುಗಳಿಂದ ಕೊಚ್ಚಿ ಹಲ್ಲೆ ನಡೆಸಿದ್ದಾರೆ.

ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದರೂ ಅಟ್ಟಿಸಿಕೊಂಡು ಬಂದು ಕೊಲೆಗೈದಿದ್ದಾರೆ. ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುವನ್ನು ಸಮೀಪದ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಬಿಎಚ್ಇಎಲ್ ನಲ್ಲಿ ಉದ್ಯೋಗಿಯಾಗಿದ್ದ ಅವರು, ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತಿದ್ದರು. ಭೂ ವಿಚಾರವಾಗಿ ಕೆಲವು ವ್ಯಕ್ತಿಗಳೊಂದಿಗೆ ವೈಷಮ್ಯ ಉಂಟಾಗಿತ್ತು. ಆರ್ ಟಿಐ ಕಾರ್ಯಕರ್ತರಾಗಿ ವಿವಿಧ ಇಲಾಖೆ ಹಾಗೂ ಸರ್ಕಾರಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದರು.

ಈ ದಾಖಲೆಗಳನ್ನಿಟ್ಟುಕೊಂಡು ಬೆದರಿಕೆ ಹಾಕುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇವರು ಮಾಜಿ ಸಚಿವ ವಿ.ಸೋಮಣ್ಣ ಬೆಂಬಲಿಗನಾಗಿದ್ದರು. ಪತ್ನಿ ರಾಜೇಶ್ವರಿ 2010ರಲ್ಲಿ ನಾಯಂಡನಹಳ್ಳಿ ವಾರ್ಡ್ ನಿಂದ ಬಿಜೆಪಿಯಿಂದ ಪಾಲಿಕೆಗೆ ಆಯ್ಕೆಯಾಗಿದ್ದರು. ಬಳಿಕ ಉಮೇಶ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜತೆ ಗುರುತಿಸಿಕೊಂಡಿದ್ದರು. ಅಲ್ಲದೆ ಕೆಜೆಪಿಯಿಂದ ಸಕಲೇಶಪುರ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟಿದ್ದರೂ ಸ್ಪರ್ಥಿಸಿರಲಿಲ್ಲ. ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಹಂತಕರಿಗಾಗಿ ಶೋಧ ನಡೆಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com