ಕಾವೇರಿ ಅಶಾಂತಿ: ಸಹಜ ಸ್ಥಿತಿಯತ್ತ ಮರಳಿದ ಬೆಂಗಳೂರು

ಕಾವೇರಿ ವಿವಾದದಿಂದ ರಾಜ್ಯದಾದ್ಯಂತ ಹೊತ್ತಿಕೊಂಡಿದ್ದ ಬೆಂಕಿ ಇದೀಗ ತಣ್ಣಗಾಗುತ್ತಿದ್ದು, ಸಹಜ ಸ್ಥಿತಿಯತ್ತ ರಾಜಧಾನಿ ಬೆಂಗಳೂರು ಮರಳಿದೆ...
ಬೆಂಗಳೂರು (ಸಂಗ್ರಹ ಚಿತ್ರ)
ಬೆಂಗಳೂರು (ಸಂಗ್ರಹ ಚಿತ್ರ)
Updated on

ಬೆಂಗಳೂರು: ಕಾವೇರಿ ವಿವಾದಿಂದ ರಾಜ್ಯದಾದ್ಯಂತ ಹೊತ್ತಿಕೊಂಡಿದ್ದ ಬೆಂಕಿ ಇದೀಗ ತಣ್ಣಗಾಗುತ್ತಿದ್ದು, ಸಹಜ ಸ್ಥಿತಿಯತ್ತ ರಾಜಧಾನಿ ಬೆಂಗಳೂರು ಮರಳಿದೆ.

ಕಾವೇರಿ ನೀರು ಹಂಚಿಕೆ ಕುರಿತಂತೆ ರಾಜ್ಯದ ವಿರುದ್ಧ ಸುಪ್ರೀಂ ನೀಡಿದ್ದ ತೀರ್ಪು ನಗರ ಸೇರಿದಂತೆ ಇನ್ನಿತರೆ ಪ್ರದೇಶಗಳಲ್ಲಿ ಸಾಕಷ್ಟು ಪ್ರಕ್ಷುಶ್ಧ ವಾತಾವರಣವನ್ನು ನಿರ್ಮಾಣ ಮಾಡಿತ್ತು. ತಮಿಳುನಾಡು ರಾಜ್ಯ ನೋಂದಣಿ ಹೊಂದಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಪ್ರತಿಭಟನಾ ನಿರತ ಜನರನ್ನು ಚದುರಿಸುವ ಸಲುವಾಗಿ ಹೆಗ್ಗನಹಳ್ಳಿಯಲ್ಲಿ ಪೊಲೀಸರು ಗೋಲಿಬಾರ್ ಕೂಡ ನಡೆಸಿದ್ದರು. ಪರಿಣಾಮ 2 ಜನರು ಸಾವನ್ನಪ್ಪಿ, ನಾಲ್ವರಿಗೆ ಗಂಭೀರವಾಗಿ ಗಾಯವಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಸಾಕಷ್ಟು ಪರಿಶ್ರಮಪಟ್ಟಿತ್ತು. ತೀವ್ರವಾಗಿ ಪ್ರತಿಭಟನೆ ನಡೆಯುತ್ತಿದ್ದ ನಗರದ 16 ಪ್ರದೇಶಗಳಲ್ಲಿ ಕರ್ಫ್ಯೂ ಕೂಡ ಜಾರಿ ಮಾಡಲಾಗಿತ್ತು.

ಇದೀಗ ರಾಜ್ಯದ ಹಲವು ಜಿಲ್ಲೆಗಳು ಸೇರಿದಂತೆ ನಗರದಲ್ಲೆಡೆ ಶಾಂತಿಯುತ ವಾತಾವರಣ ಮರುಕಳಿಸಿದ್ದು, ಮತ್ತೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಅಧಿಕಾರಿಗಳು ಎಚ್ಚರವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದೂ ಕೂಡ ನಗರದ 16 ಠಾಣಾ ಪ್ರದೇಶಗಳಲ್ಲಿ ಕರ್ಫ್ಯೂವನ್ನು ಮುಂದುವರಿಸಿದ್ದಾರೆ. ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್ ನಲ್ಲಿಯೂ ಎಂದಿನಂತೆ ಜನರ ಓಡಾಟಗಳು ಸಹಜವಾಗಿದ್ದು, ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳು ತಮ್ಮ ಸೇವೆಗಳನ್ನು ಆರಂಭಿಸಿವೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು, ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆಯಿಲ್ಲ. ಎಂದಿನಂತೆ ಶಾಲಾ-ಕಾಲೇಜುಗಳು ಮುಂದುವರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com