ನವದೆಹಲಿ: ಭಾರತೀಯ ಪ್ರಜೆಗಳು 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿರುವಂತೆಯೇ ಅತ್ತ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ತ್ರಿವರ್ಣ ಧ್ವಜದ ವಿಶೇಷ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ಗೌರವ ಸಲ್ಲಿಸಲಾಗಿದೆ.
68ನೇ ಗಣರಾಜ್ಯೋತ್ಸವ ನಿಮಿತ್ತ ದೆಹಲಿಗೆ ವಿಶೇಷ ಅತಿಥಿಯಾಗಿ ಯುಎಇ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರು ಆಗಮಿಸಿರುವಂತೆಯೇ ಅತ್ತ ಭಾರತ-ಯುಎಇ ಸ್ನೇಹವನ್ನು ಪ್ರತಿಬಿಂಬಿಸುವ ಸಲುವಾಗಿ ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾಗೆ ತ್ರಿವರ್ಣ ಧ್ವಜದ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕ ಪ್ರದರ್ಶನ ಮಾಡಲಾಗಿದೆ. ಇಡೀ ಬುರ್ಜ್ ಖಲೀಫಾ ಕಟ್ಟಡಕ್ಕೆ ವಿಶೇಷ ಬೆಳಕಿನ ವ್ಯವಸ್ಥೆ ಮಾಡಿ ಅದರ ಮೂಲಕ ತ್ರಿವರ್ಣ ಧ್ವಜವನ್ನು ಪ್ರದರ್ಶನ ಮಾಡಲಾಯಿತು.
ಈ ಸಾರ್ವಜನಿಕ ಪ್ರದರ್ಶನ ಅಲ್ಲಿ ನೆರೆದಿದ್ದ ಸಾವಿರಾರು ಪ್ರವಾಸಿಗರ ಕಣ್ಮನ ಸೆಳೆಯಿತು. ಈ ವಿಶೇಷ ಬೆಳಕಿನ ವ್ಯವಸ್ಥೆ ಯುಎಇ ಹಾಗೂ ಭಾರತ ದೇಶಗಳ ನಡುವಿನ ಐಕಮತ್ಯವನ್ನು ಸಾರುತ್ತದೆ ಎಂದು ಬುರ್ಜ್ ಖಲೀಫಾದ ಮಾಲೀಕತ್ವ ಸಂಸ್ಥೆ ಇಮಾರ್ ತಿಳಿಸಿದೆ.
Advertisement