ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಿಲ್ಲ, ಆದರೂ ಅಪಾಯವಿದೆ: ಡಬ್ಲ್ಯುಎಚ್ಒ
ನವದೆಹಲಿ: ಕೊರೊನಾ ವೈರಸ್ “ಕೋವಿಡ್ -19” ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶ್ಲಾಘಿಸಿದ್ದು, ಇದೀಗ ದೇಶದಲ್ಲಿ ರೋಗದ ಪ್ರಕರಣಗಳು ಗುಣಾತ್ಮಕವಾಗಿ ಹೆಚ್ಚಾಗುತ್ತಿಲ್ಲ, ಆದರೆ ಇದು ಸಂಭವಿಸುವ ಅಪಾಯವಿದೆ. ಆದ್ದರಿಂದ ಸಂಪೂರ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎಂದು ತಿಳಿಸಿದೆ.
ಡಬ್ಲ್ಯುಎಚ್ಒ ಆರೋಗ್ಯ ವಿಪತ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಮೈಕೆಲ್ ಜೆ. ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
"ಭಾರತದಲ್ಲಿ ಪ್ರಕರಣಗಳು ಮೂರು ವಾರಗಳಲ್ಲಿ ದ್ವಿಗುಣಗೊಳ್ಳುತ್ತಿವೆ ಮತ್ತು ಗುಣಾತ್ಮಕವಾಗಿ ಹೆಚ್ಚಾಗದೇ ಇದ್ದರೂ, ಪ್ರಕರಣಗಳು ಸ್ಥಿರವಾಗಿ ಹೆಚ್ಚುತ್ತಿವೆ". ಅತೀ ಹೆಚ್ಚು ಸೋಂಕು ತಗುಲಿದ ರಾಷ್ಟ್ರಗಳ ಪೈಕಿ ಭಾರತ 6ನೇ ಸ್ಥಾನಕ್ಕೆ ಜಿಗಿದಿದೆ. ಅಲ್ಲದೆ, ಇದೇ ಮೊದಲ ಬಾರಿಗೆ 24 ಗಂಟೆಗಳೊಳಗೆ 10,000ದಷ್ಟು ಹೊಸ ಪ್ರಕರಣಗಳು ದಾಖಲಾಗಿವೆ.ಭಾರತದಲ್ಲಿ ಕೊರೋನಾ ಸ್ಫೋಟಗೊಂಡಿಲ್ಲ. ಆದರೆ, ರಾಷ್ಟ್ರವ್ಯಾಪಿಯಾಗಿ ಲಾಕ್'ಡೌನ್ ನಿಯಮಗಳನ್ನು ಸಡಿಲಗೊಳಿಸಿರುವುದರಿಂದ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.
ಭಾರತ ಮಾತ್ರವಲ್ಲ, ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದಕ್ಷಿಣ ಏಷ್ಯಾದಲ್ಲಿ ಕೊರೋನಾ ವೈರಸ್ ಸ್ಪೋಟಗೊಂಡಿಲ್ಲ. ಆದರೆ, ಅದು ಸಂಭವಿಸುವ ಅಪಾಯ ಯಾವಾಗಲೂ ಇದ್ದೇ ಇರುತ್ತದೆ. ಸೂಕ್ತ ಸಮಯಕ್ಕೆ ಭಾರತದಲ್ಲಿ ಲಾಕ್'ಡೌನ್ ಜಾರಿಯಾದ ಪರಿಣಾಮ ವೈರಸ್ ಹರಡುವುದು ನಿಯಂತ್ರಣಗೊಂಡಿದೆ.
ಇದೀಗ ಲಾಕ್'ಡೌನ್ ಸಡಿಲಗೊಂಡಿರುವ ಪರಿಣಾಮ ಸೋಂಕು ಗಂಭೀರ ಸ್ಥಿತಿಗೆ ತಿರುಗುತ್ತಿದೆ. ಭಾರತದಲ್ಲಿ ದೊಡ್ಡ ಸಂಖ್ಯೆಯ ಜನ ಸಂಖ್ಯೆಯಿದ್ದು, ವಲಸೆ ಹೋಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕಾರ್ಮಿಕರಿಗೆ ವಲಸೆ ಹೋಗುವುದು ಬಿಟ್ಟರೆ ಅವರಿಗೆ ಬೇರೆ ಮಾರ್ಗಗಳಿಲ್ಲ. ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ದೊಡ್ಡದೇ ಎನಿಸಿದರೂ, 1.3 ಬಿಲಿಯನ್ ಜನಸಂಖ್ಯೆ ಹೊಂದಿರುವ ದೇಶಕ್ಕೆ ಇದು ಸಾಧಾರಣವಾಗಿದೆ ಎಂದು ತಿಳಿಸಿದ್ದಾರೆ.