ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತ-ಅಮೆರಿಕ ಜಂಟಿಯಾಗಿ ಖಂಡನೆ; 26/11 ದಾಳಿಯ ಅಪರಾಧಿಗಳಿಗೆ ಶಿಕ್ಷೆ ನೀಡಲು ಕರೆ

ಭಯೋತ್ಪಾದಕ ಗುಂಪುಗಳ ವಿರುದ್ಧ ಸಂಘಟಿತವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭಾರತ ಮತ್ತು ಅಮೆರಿಕ ಘೋಷಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಭಯೋತ್ಪಾದಕ ಗುಂಪುಗಳ ವಿರುದ್ಧ ಸಂಘಟಿತವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭಾರತ ಮತ್ತು ಅಮೆರಿಕ ಘೋಷಿಸಿವೆ.

ವಿಶ್ವಸಂಸ್ಥೆ ಸೂಚಿಸಿರುವ ಭಯೋತ್ಪಾದಕ ಗುಂಪುಗಳು ಸೇರಿದಂತೆ ಗಡಿಗಳಲ್ಲಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸಿರುವ ಎರಡೂ ದೇಶಗಳು 26/11 ಮುಂಬೈ ದಾಳಿಯ ಅಪರಾಧಿಗಳಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಕರೆ ನೀಡಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೊ ಬೈಡನ್ ನಡುವೆ ನಿನ್ನೆ ಶ್ವೇತಭವನದಲ್ಲಿ ನಡೆದ ಮೊದಲ ದ್ವಿಪಕ್ಷೀಯ ಮಾತುಕತೆ ನಂತರ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ, ಜಾಗತಿಕ ಮಟ್ಟದ ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತ ಮತ್ತು ಅಮೆರಿಕ ಜಂಟಿಯಾಗಿ ಕೈಜೋಡಿಸಲಿವೆ ಎಂದು ತಿಳಿಸಿವೆ.

 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅನುಮೋದನೆ ಸಮಿತಿ ಸೂಚಿಸಿರುವ ಗುಂಪುಗಳು ಸೇರಿದಂತೆ ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಭಯ ನಾಯಕರು ಪುನರುಚ್ಛರಿಸಿದ್ದು, ಗಡಿಯಲ್ಲಿ ಭಯೋತ್ಪಾದನೆ ಸೇರಿದಂತೆ 26/11ರ ಮುಂಬೈ ದಾಳಿಯ ಉಗ್ರರಿಗೆ ಶಿಕ್ಷೆ ನೀಡಿ ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಉಭಯ ನಾಯಕರು ಕರೆ ನೀಡಿದ್ದಾರೆ.

ಯಾವುದೇ ಭಯೋತ್ಪಾದಕ ಸಮರಗಳನ್ನು ಬಳಸುವುದನ್ನು ಖಂಡಿಸಿರುವ ಉಭಯ ನಾಯಕರು ಭಯೋತ್ಪಾದಕ ಗುಂಪುಗಳಿಗೆ ವ್ಯಾವಹಾರಿಕ, ಆರ್ಥಿಕ ಅಥವಾ ಮಿಲಿಟರಿ ಬೆಂಬಲ ನೀಡುವ ದೇಶಗಳ ಕ್ರಮವನ್ನು ವಿರೋಧಿಸಲು ಸಹ ಒಪ್ಪಿಕೊಂಡಿದ್ದಾರೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನ ಮೂಲದ ಮೂಲಭೂತವಾದಿ ಪಾದ್ರಿ ಹಫೀಜ್ ಸಯೀದ್ ನ ಜಮಾತ್-ಉದ್-ದವಾ (ಜ್ಯೂಡಿ) ಲಷ್ಕರ್-ಎ-ತೊಯ್ಬಾದ ಮುಂಚೂಣಿ ಸಂಘಟನೆಯಾಗಿದ್ದು, 2008ರಲ್ಲಿ ಮುಂಬೈ ದಾಳಿಗೆ ಕಾರಣಕರ್ತವಾಗಿದೆ, ಈ ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ನಾಗರಿಕರು ಮೃತಪಟ್ಟಿದ್ದರು.

ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನವಾಗಿ ಘೋಷಿಸಿದ್ದ, ಸಯೀದ್ ಎಂಬ ವಿಶ್ವಸಂಸ್ಥೆ ಗುರುತಿಸಿರುವ ಭಯೋತ್ಪಾದಕ ಕಳೆದ ವರ್ಷ ಜುಲೈ 17 ರಂದು ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಬಂಧಿತನಾಗಿದ್ದ. 70 ವರ್ಷದ ಈತನನ್ನು ಲಾಹೋರ್‌ನ ಅತಿ ಭದ್ರತೆಯ ಕೋಟ್ ಲಖ್‌ಪತ್ ಜೈಲಿನಲ್ಲಿ ಇರಿಸಲಾಗಿದೆ.

ಭಯೋತ್ಪಾದಕ ಗುಂಪುಗಳ ವಿರುದ್ಧ ವಿಶ್ವಾಸಾರ್ಹ, ಪರಿಶೀಲಿಸಬಹುದಾದ ಮತ್ತು ಬದಲಾಯಿಸಲಾಗದ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಭಾರತವು ಪದೇ ಪದೇ ಪಾಕಿಸ್ತಾನಕ್ಕೆ ಕರೆ ನೀಡುತ್ತಾ ಬಂದಿದೆ.

ಮುಂಬರುವ ಅಮೆರಿಕ-ಭಾರತ ಭಯೋತ್ಪಾದನೆ ನಿಗ್ರಹ ಜಂಟಿ ಕಾರ್ಯಪಡೆ, ಸಂವಾದ ಮತ್ತು ಹೊಸ ಅಮೆರಿಕ-ಭಾರತ ಹೋಮ್ಲ್ಯಾಂಡ್ ಭದ್ರತಾ ಮಾತುಕತೆ, ಎರಡು ದೇಶಗಳ ನಡುವಿನ ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಬಲಪಡಿಸುತ್ತದೆ, ಗುಪ್ತಚರ ಹಂಚಿಕೆ ಮತ್ತು ಕಾನೂನು ಜಾರಿ ಸಹಕಾರ ಕೂಡ ಇದರಲ್ಲಿ ಸೇರಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com