ಪಾಕಿಸ್ತಾನದ ವಿನಾಶಕಾರಿ ಪ್ರವಾಹದಲ್ಲಿ 1,300 ಜನ ಸಾವು, 5 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತ

ಪಾಕಿಸ್ತಾನದಲ್ಲಿನ ಭೀಕರ ಪ್ರವಾಹದ ಪರಿಣಾಮವಾಗಿ ದೇಶದಲ್ಲಿ ಸುಮಾರು 1,300 ಜನರು ಮೃತಪಟ್ಟಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ಜೂನ್‌ನಿಂದ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 1,290ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 29 ಜನರು ಸಾವಿಗೀಡಾಗಿದ್ದಾರೆ.
ಪಾಕಿಸ್ತಾನದಲ್ಲಿ ಪ್ರವಾಹ
ಪಾಕಿಸ್ತಾನದಲ್ಲಿ ಪ್ರವಾಹ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿನ ಭೀಕರ ಪ್ರವಾಹದ ಪರಿಣಾಮವಾಗಿ ದೇಶದಲ್ಲಿ ಸುಮಾರು 1,300 ಜನರು ಮೃತಪಟ್ಟಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ. ಜೂನ್‌ನಿಂದ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 1,290ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 29 ಜನರು ಸಾವಿಗೀಡಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಶನಿವಾರ ತಿಳಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

ಈಮಧ್ಯೆ, ಪಾಕಿಸ್ತಾನದ ಸರ್ಕಾರಿ ಏಜೆನ್ಸಿಗಳು ಮತ್ತು ಖಾಸಗಿ ಎನ್‌ಜಿಒಗಳು ತಮ್ಮ ಪರಿಹಾರ ಕಾರ್ಯಾಚರಣೆಗಳನ್ನು 'ತೀವ್ರ ಪ್ರಮಾಣದಲ್ಲಿನ ಮಾನವೀಯ ವಿಪತ್ತುಟ ಎಂದು ವಿವರಿಸಿದ್ದಾರೆ.

ದೇಶದ ದೊಡ್ಡ ಭಾಗಗಳು ಮುಳುಗಡೆಯಾಗಿವೆ. ವಿಶೇಷವಾಗಿ ದಕ್ಷಿಣದಲ್ಲಿ ಬಲೂಚಿಸ್ತಾನ, ಖೈಬರ್ ಪಖ್ತುನ್‌ಖ್ವಾ ಮತ್ತು ಸಿಂಧ್ ಪ್ರಾಂತ್ಯಗಳು ಪ್ರವಾಹದಿಂದಾಗಿ ಮುಳುಗಿವೆ. ಸಿಂಧ್‌ನಲ್ಲಿ ಕನಿಷ್ಠ 180 ಜನರು ಮೃತಪಟ್ಟಿದ್ದಾರೆ. ನಂತರ ಖೈಬರ್ ಪಖ್ತುಂಕ್ವಾ (138) ಮತ್ತು ಬಲೂಚಿಸ್ತಾನ್ (125) ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಕನಿಷ್ಠ, 1,468,019 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, 736,459 ಜಾನುವಾರುಗಳು ಪ್ರವಾಹದಿಂದಾಗಿ ಮೃತಪಟ್ಟಿವೆ.

ಪ್ರವಾಹದಿಂದ ತತ್ತರಿಸುತ್ತಿರುವ ಪಾಕಿಸ್ತಾನಕ್ಕೆ ಹಲವಾರು ದೇಶಗಳಿಂದ ಮಾನವೀಯ ನೆರವು ಹರಿದು ಬರುತ್ತಿದ್ದು, ಶನಿವಾರ ಬೆಳಗ್ಗೆ ಇಸ್ಲಮಾಬಾದ್‌ನಲ್ಲಿ ಫ್ರಾನ್ಸ್‌ನ ಮೊದಲ ಮಾನವೀಯ ನೆರವಿನ ವಿಮಾನ ಇಳಿದಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಹಾನಿಯ ಆರಂಭಿಕ ಅಂದಾಜನ್ನು 10 ಶತಕೋಟಿ ಡಾಲರ್ ಎನ್ನಲಾಗಿದೆ, ಆದರೆ ಇನ್ನೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ.

ಕೇಂದ್ರ ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಸುರಕ್ಷತೆ ಸಚಿವೆ ಶಾಜಿಯಾ ಮಾರಿ, ಇದುವರೆಗೆ 723,919 ಕುಟುಂಬಗಳು 25,000 ನಗದು ಪರಿಹಾರವನ್ನು (ಪ್ರತಿ ಕುಟುಂಬಕ್ಕೆ) ಪಡೆದಿವೆ ಮತ್ತು ₹ 18.25 ಬಿಲಿಯನ್ ಮೊತ್ತವನ್ನು ವಿತರಿಸಲಾಗಿದೆ. ಸವಾಲುಗಳ ಹೊರತಾಗಿಯೂ, ಬೆನಜೀರ್ ಆದಾಯ ಬೆಂಬಲ ಕಾರ್ಯಕ್ರಮವು ಪ್ರಧಾನಿ (ಶೆಹಬಾಜ್ ಷರೀಫ್) ಅವರ ಘೋಷಣೆಯ ನಂತರ ಕೆಲವೇ ಸಮಯದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇಂದು ಮುಂಜಾನೆ ರಾಷ್ಟ್ರೀಯ ಪ್ರವಾಹ ಪ್ರತಿಕ್ರಿಯೆ ಮತ್ತು ಸಮನ್ವಯ ಕೇಂದ್ರದಲ್ಲಿ ಮಿಲಿಟರಿ ಅಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಅವರು, ಪ್ರವಾಹದ ಸಂದರ್ಭದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು ಮತ್ತು ಸರ್ಕಾರವು ತನ್ನ ಪದಾಧಿಕಾರಿಗಳ ಬೆಂಬಲದೊಂದಿಗೆ ದೇಶವನ್ನು ಆದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುವುದಾಗಿಯೂ ತಿಳಿಸಿರುವುದಾಗಿ' ಜಿಯೋ ನ್ಯೂಸ್ ವರದಿ ಮಾಡಿದೆ.

ಬಲೂಚಿಸ್ತಾನ್, ಖೈಬರ್ ಪಖ್ತುಂಕ್ವಾ, ಸಿಂಧ್ ಮತ್ತು ಪಂಜಾಬ್‌ನಾದ್ಯಂತ 500,000 ಕ್ಕೂ ಹೆಚ್ಚು ಜನರು ಸದ್ಯ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿರುವ ಪ್ರವಾಹವು 33 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಾಧಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com