
ಢಾಕಾ: ಭಾರತದ ಗಡಿಯಲ್ಲಿ ಸಣ್ಣಪುಟ್ಟ ಘರ್ಷಣೆಗಳನ್ನು ನಡೆಸುವ ಮೂಲಕ ದೇಶದಲ್ಲಿನ ಆಂತರಿಕ ಪರಿಸ್ಥಿತಿಯ ಗಮನ ಬೇರೆಡೆಗೆ ಸೆಳೆಯಬಹುದು. ಜನರು ತನ್ನ ಬೆನ್ನಿಗೆ ನಿಲ್ಲುವಂತೆ ಮಾಡಬಹುದು ಎಂದು ಬಾಂಗ್ಲಾದೇಶ ಹಂಗಾಮಿ ಪ್ರಧಾನಿ ಮೊಹಮ್ಮದ್ ಯೂನಸ್ ಭಾವಿಸಿದ್ದರು.
ಬಹುರಂಗಗಳಲ್ಲಿ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸುತ್ತಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಕಳೆದ ತಿಂಗಳ ಆರಂಭದಲ್ಲಿ ತನ್ನ ಎಲ್ಲಾ ದೇಶೀಯ ಸಮಸ್ಯೆಗಳಿಂದ ಗಮನ ಬೇರೆಡೆಗೆ ಸೆಳೆಯಲು ಒಂದು ದುಷ್ಟ ಸಂಚು ರೂಪಿಸಿದರು. ಭಾರತ-ಬಾಂಗ್ಲಾದೇಶ ಗಡಿಗೆ ಸೀಮಿತವಾಗಿದ್ದರೂ ಸಹ ಭಾರತದೊಂದಿಗಿನ ಘರ್ಷಣೆಯು ತಮ್ಮ ಎಲ್ಲಾ ಸಂಕಷ್ಟ ನಿವಾರಿಸುತ್ತದೆ. ಬೇಗ ಚುನಾವಣೆ ನಡೆಸಿ ಎಂಬ ಬೇಡಿಕೆಯನ್ನು ನಿರ್ಲಕ್ಷಿಸುವ ಮೂಲಕ ತಮ್ಮ ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ದೇಶದ ಜನತೆ ಸೇರಿದಂತೆ ಎಲ್ಲಾ ಪಾಲುದಾರರು ರಾಷ್ಟ್ರೀಯತೆಯ ಮನೋಭಾವದಲ್ಲಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಭಾರತದೊಂದಿಗೆ ಯೋಜಿತ ಮುಖಾಮುಖಿಯಲ್ಲಿ ತಮ್ಮ ಬೆನ್ನಿಗೆ ನಿಲ್ಲುತ್ತಾರೆ ಎಂದು ನಿರೀಕ್ಷಿಸಿದ್ದರು.
ಬಾಂಗ್ಲಾದೇಶ ಸೇನೆ ಮತ್ತು ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಜಮಾತ್-ಇ-ಇಸ್ಲಾಮಿ ಬಾಂಗ್ಲಾದೇಶ ಮತ್ತು ಹೊಸದಾಗಿ ರಚಿಸಲಾದ ಜಾತಿಯಾ ನಾಗರಿಕ್ ಪಕ್ಷದ ಅಥವಾ (ರಾಷ್ಟ್ರೀಯ ನಾಗರಿಕ ಪಕ್ಷ) ಕೆಲವು ನಾಯಕರೊಂದಿಗೆ ಸಮಾಲೋಚಿಸಿ ಯೂನಸ್ ಈ ಯೋಜನೆಯನ್ನು ರೂಪಿಸಿದ್ದರು. ಬಾಂಗ್ಲಾದೇಶದಲ್ಲಿ 'ರಾಜರ ಪಕ್ಷ' ಎಂದೂ ಕರೆಯಲ್ಪಡುವ ಎನ್ಸಿಪಿ, ಯೂನಸ್ ಅವರ ಆಶೀರ್ವಾದ ಮತ್ತು ಬಲವಾದ ಬೆಂಬಲವನ್ನು ಹೊಂದಿದ್ದು, ಶೇಖ್ ಹಸೀನಾ ವಿರುದ್ಧದ ದಂಗೆಗೆ ಕಾರಣವಾದ ವಿದ್ಯಾರ್ಥಿಗಳ ಚಳವಳಿಯ (ADSM) ನಾಯಕರು ಈ ವರ್ಷದ ಫೆಬ್ರವರಿಯಲ್ಲಿ ಪಕ್ಷವನ್ನು ರಚಿಸಿದರು.
ಭಾರತವು ಪಾಕಿಸ್ತಾನದ ವಿರುದ್ಧ 'ಆಪರೇಷನ್ ಸಿಂಧೂರ್' ಅನ್ನು ಪ್ರಾರಂಭಿಸಿದ ಸಮಯದಲ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಖಲೀಲುರ್ ರೆಹಮಾನ್ ಮತ್ತು ಸೇನಾ ಕ್ವಾರ್ಟರ್-ಮಾಸ್ಟರ್ ಜನರಲ್ (QMG) ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಫೈಜುರ್ ರೆಹಮಾನ್ ಅವರೊಂದಿಗೆ ನಿಕಟ ಸಮಾಲೋಚನೆ ನಡೆಸಿ ಯೂನಸ್ ಯೋಜನೆಯನ್ನು ಚರ್ಚಿಸಿ ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತದೆ. ಸೇನೆಯ ಉನ್ನತ ಶ್ರೇಣಿಯಲ್ಲಿರುವ ಸೇನಾ ಮುಖ್ಯಸ್ಥರನ್ನು ವಿರೋಧಿಸುವ ಕೆಲವರಲ್ಲಿ QMG ಒಬ್ಬರು. ಪಾಕಿಸ್ತಾನದ ಐಎಸ್ಐಗೆ ಹತ್ತಿರವಾಗಿದ್ದಾರೆಂದು ನಂಬಲಾದ ಲೆಫ್ಟಿನೆಂಟ್ ಜನರಲ್ ರೆಹಮಾನ್, ಈ ವರ್ಷದ ಮಾರ್ಚ್ನಲ್ಲಿ ಸೇನಾ ಮುಖ್ಯಸ್ಥರ ಹತ್ಯೆ ವಿಫಲ ಪ್ರಯತ್ನ ಸಹ ನಡೆಸಿದ್ದರು.
ಭಾರತದ ಗಮನ ಪಾಕಿಸ್ತಾನದ ಮೇಲೆ ಕೇಂದ್ರೀಕೃತವಾಗಿರುವುದರಿಂದ, ಯೂನಸ್ ಮತ್ತು ಅವರ ಸಹೋದ್ಯೋಗಿಗಳು ತಮ್ಮ ನೆರೆಹೊರೆಯವರು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನಡೆಯುತ್ತಿರುವ ಪ್ರಚೋದನಕಾರಿ ಚಟುವಟಿಕೆಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ ಎಂದು ಭಾವಿಸಿದರು ಎಂದು ಢಾಕಾ ಕಂಟೋನ್ಮೆಂಟ್ನ ಹಿರಿಯ ಸಿಬ್ಬಂದಿ ಅಧಿಕಾರಿಯೊಬ್ಬರು ಸ್ವರಾಜ್ ಪತ್ರಿಕೆಗೆ ತಿಳಿಸಿದರು. ಹೀಗಾಗಿ ಗಡಿಯಲ್ಲಿ ಬಾಂಗ್ಲಾದೇಶದ ಗಡಿ ಭದ್ರತಾ ಪಡೆ (BGB) ಅನ್ನು ಹೆಚ್ಚು ಆಕ್ರಮಣಕಾರಿ ಚಟುವಟಿಕೆಗಳನ್ನು ನಡೆಸುವಂತೆ ಸೂಚಿಸಲಾಗಿತ್ತು. ಈ ಮೂಲಕ ಭಾರತದ ಗಡಿ ಭದ್ರತಾ ಪಡೆ (BSF) ಜೊತೆ ಘರ್ಷಣೆಯನ್ನು ಪ್ರಚೋದಿಸುವುದು ಈ ಯೋಜನೆಯಾಗಿತ್ತು. BGB ಪಡೆಗಳಿಗೆ ಬೆಂಬಲವಾಗಿ ಗಡಿಯುದ್ದಕ್ಕೂ ಕೆಲವು ಪ್ರದೇಶಗಳಲ್ಲಿ ಸೇನಾ ಘಟಕಗಳನ್ನು ನಿಯೋಜಿಸುವುದು ಸಹ ಈ ಯೋಜನೆಯಲ್ಲಿ ಸೇರಿತ್ತು.
ಕಳೆದ ವರ್ಷ ಆಗಸ್ಟ್ ಆರಂಭದಲ್ಲಿ ಢಾಕಾದಲ್ಲಿ ಯೂನಸ್ ಅಧಿಕಾರ ವಹಿಸಿಕೊಂಡ ಕೂಡಲೇ, ಬಿಜಿಬಿ ಅಂತರರಾಷ್ಟ್ರೀಯ ಗಡಿಯಲ್ಲಿ ಅತ್ಯಂತ ಆಕ್ರಮಣಕಾರಿ ನಿಲುವನ್ನು ಅಳವಡಿಸಿಕೊಂಡಿತ್ತು. ಭಾರತದ ಗಡಿ ಭಾಗದಲ್ಲಿ ಬೇಲಿ ಹಾಕುವುದು ಮತ್ತು ಇತರ ನಿರ್ಮಾಣಗಳ ಬಗ್ಗೆಯೂ ಅದು ಆಕ್ಷೇಪ ವ್ಯಕ್ತಪಡಿಸಲು ಪ್ರಾರಂಭಿಸಿತ್ತು. ಅಷ್ಟೇ ಅಲ್ಲದೆ ಕಳೆದ ವರ್ಷದ ಡಿಸೆಂಬರ್ ಆರಂಭದಲ್ಲಿ ಬಿಜಿಬಿ ಪಡೆಗಳು ಗಡಿ ದಾಟಿ ಭಾರತದೊಳಗೆ ಬಂದು ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ದೇವಾಲಯದ ನವೀಕರಣವನ್ನು ತಡೆಯಲು ಪ್ರಯತ್ನಿಸಿತ್ತು. ಬಿಜಿಬಿಯ ಈ ವರ್ತನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ಆದರೆ ಈ ವರ್ಷದ ಫೆಬ್ರವರಿ ಮಧ್ಯದಿಂದ ಆಕ್ರಮಣಕಾರಿ ನಿಲುವನ್ನು ಬಿಜಿಬಿ ಕೈಬಿಟ್ಟರು. ಇದಕ್ಕೆ ಕಾರಣ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ವಕಾರ್-ಉಜ್-ಜಮಾನ್ ಬಿಜಿಬಿ ಮಹಾನಿರ್ದೇಶಕ ಮೇಜರ್ ಜನರಲ್ ಮೊಹಮ್ಮದ್ ಅಶ್ರಫುಜ್ಜಮಾನ್ ಸಿದ್ದಿಕಿ ಅವರಿಗೆ ಗಡಿ ಪಡೆಯ ಆಕ್ರಮಣಕಾರಿ ನಿಲುವನ್ನು ಕಡಿಮೆ ಮಾಡಲು ಮತ್ತು ಕೈಬಿಡುವಂತೆ ಸೂಚಿಸಿದ್ದರಿಂದ ಬಿಜಿಬಿ ನಂತರ ಇಂತಹ ಕೃತ್ಯಗಳಿಗೆ ಕೈಹಾಕಲಿಲ್ಲ. ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್, ಬಿಜಿಬಿ ಮಹಾನಿರ್ದೇಶಕರನ್ನು ತಮ್ಮ ಸೈನ್ಯವು ಯುದ್ಧೋಚಿತ ನಿಲುವು ತೆಗೆದುಕೊಳ್ಳುವಂತೆ ಪ್ರಚೋದಿಸಿದ್ದಕ್ಕಾಗಿ ಖಂಡಿಸಿದ್ದರು.
ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ (ಮೊಹಮ್ಮದ್ ಯೂನಸ್) ಅವರ ನಿವಾಸ ಮತ್ತು ಕಚೇರಿಯಾಗಿ ಕಾರ್ಯನಿರ್ವಹಿಸುವ 'ಜಮುನಾ'ದಿಂದ ಮೌಖಿಕ ಸೂಚನೆಗಳನ್ನು ಪಡೆದಿರುವುದಾಗಿ ಬಿಜಿಬಿ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್ ಅವರಿಗೆ ತಿಳಿಸಿದರು. ಬಿಎಸ್ಎಫ್ ಅನ್ನು ಪ್ರಚೋದಿಸಬೇಕೆಂದು ಯೂನಸ್ ಬಯಸಿದ್ದರು. ಆದರೆ ಭಾರತದ ಜೊತೆ ಸಂಘರ್ಷಕ್ಕೆ ಇಳಿದರೆ ಅದು ಸರ್ವನಾಶಕ್ಕೆ ನಾಂದಿ ಹಾಡಿದಂತೆ. ಮುಂದೆಂದು ಇಂತಹ ಚಟುವಟಿಕೆಗಳನ್ನು ನಡೆಸದಂತೆ ವಕಾರ್-ಉಜ್-ಜಮಾನ್ ಬಿಜಿಬಿ ಮಹಾನಿರ್ದೇಶಕರಿಗೆ ತಿಳಿಸಿದರು. ಮುಂದೆ ತಮ್ಮ ಯೋಜನೆ ವಿಫಲಗೊಂಡಿದ್ದರಿಂದ ಯೂನಸ್ ಆಕ್ರೋಶಗೊಂಡು ತಾವು ರಾಜಿನಾಮೆ ನೀಡುವ ಮಾತುಗಳನ್ನು ಹಾಡಿದ್ದರು. ಕೊನೆಗೆ ವಿಧಿಯಿಲ್ಲದೆ ಮುಂದಿನ ವರ್ಷ ಏಪ್ರಿಲ್ ನಲ್ಲಿ ಚುನಾವಣೆಯನ್ನು ನಡೆಸುವುದಾಗಿ ಯೂನಸ್ ಘೋಷಿಸಬೇಕಾಯಿತು.
Advertisement