

ಟೆಲ್ ಅವೀವ್: ಇರಾನ್-ಇಸ್ರೇಲ್, ಅಮೆರಿಕ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿರುವಂತೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ ಬೆನ್ನಲ್ಲೇ ಇಸ್ರೇಲ್ ಮೇಲೆ ಇರಾನ್ ಪ್ರತಿದಾಳಿ ನಡೆಸಿದ್ದು, ಇರಾನಿನ ಸಿನಗಾಗ್ ಮೇಲೆ ನಡೆದ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ.
ಇದೇ ಸಂದರ್ಭದಲ್ಲಿ ಇಸ್ರೇಲ್ ನ ಬೀಟ್ ಶೆಮೇಶ್ನಲ್ಲಿ ಪರಿಸ್ಥಿತಿ ಅವಲೋಕಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನೇತನ್ಯಾಹು ಧನ್ಯವಾದ ಹೇಳಿ ಅಚ್ಚರಿ ಮೂಡಿಸಿದರು.
'ತಮ್ಮ "ಶ್ರೇಷ್ಠ ಸ್ನೇಹಿತ" ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದು, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ನಡುವೆ ಇಸ್ರೇಲ್ ಜೊತೆ ನಿಂತಿದ್ದಕ್ಕಾಗಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ನಿನ್ನೆ ಅವರೊಂದಿಗೆ ದೀರ್ಘವಾಗಿ ಮಾತನಾಡಿದೆ ಮತ್ತು ಇಸ್ರೇಲ್ನೊಂದಿಗೆ ಅವರ ನಿಲುವು, ಸತ್ಯದ ಪರ ನಿಂತಿದ್ದಕ್ಕಾಗಿ ಮತ್ತು ಭಾರತದ ಜನರ ಅಗಾಧ ಸ್ನೇಹಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದೆ ಎಂದು ನೇತನ್ಯಾಹು ಹೇಳಿದರು.
"ಪ್ರಧಾನಿ ಮೋದಿ ಅವರು ಇಸ್ರೇಲ್ನಲ್ಲಿ ಹೆಚ್ಚು ಮೆಚ್ಚುಗೆ ಪಡೆದಿದ್ದಾರೆ ಮತ್ತು ಪ್ರೀತಿಸಲ್ಪಡುತ್ತಾರೆ. ನಾನು ಅವರೊಂದಿಗೆ ನಡೆದ ಚರ್ಚೆಯ ವಿವರಗಳಿಗೆ ಹೋಗುವುದಿಲ್ಲ, ಆದರೆ ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ನಾನು ಪ್ರದೇಶ ಮತ್ತು ಅದರಾಚೆಗಿನ ಅನೇಕ ಇತರ ನಾಯಕರೊಂದಿಗೆ ಮಾತನಾಡಿದ್ದೇನೆ" ಎಂದು ನೇತನ್ಯಾಹು ಹೇಳಿದರು.
ಇರಾನ್ ದುರಾಡಳಿತ ಅಂತ್ಯಕ್ಕೆ ಮುಹೂರ್ತ ಫಿಕ್ಸ್
ಇದೇ ವೇಳೆ ಇರಾನ್ ದುರಾಡಳಿತ ಅಂತ್ಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಹೇಳಿದ ನೇತನ್ಯಾಹು, ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ಜಂಟಿ ಅಭಿಯಾನವು ಇರಾನಿಯನ್ನರು ನಾಯಕತ್ವವನ್ನು ಕಿತ್ತೊಗೆಯಲು ಪರಿಸ್ಥಿತಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
'ಇರಾನ್ ಪ್ರಜೆಗಳು ಹಾಗೆ ಮಾಡುವ ಸಮಯ ಸಮೀಪಿಸುತ್ತಿದೆ. ಆ ದಿನ ಹತ್ತಿರವಾಗುತ್ತಿದೆ. ಅದು ಬಂದಾಗ, ಇಸ್ರೇಲ್ ಮತ್ತು ಅಮೆರಿಕ ಇರಾನಿನ ಜನರೊಂದಿಗೆ ಇರುತ್ತದೆ. ಇರಾನಿನ ಜನರು ನಮ್ಮೊಂದಿಗೆ ಇರುವುದು ಮುಖ್ಯ. ಅದು ಅವರ ಮೇಲೆ ಅವಲಂಬಿತವಾಗಿರುತ್ತದೆ, ನಾವು ಅಲ್ಲಿರುತ್ತೇವೆ" ಎಂದು ನೆತನ್ಯಾಹು ಇರಾನಿನ ಕ್ಷಿಪಣಿ ಅಪ್ಪಳಿಸಿದ ಸ್ಥಳದಿಂದ ವರದಿಗಾರರಿಗೆ ತಿಳಿಸಿದರು.
Advertisement