ಕಡಿಮೆ ಫಲವತ್ತತೆ ಜಮೀನು ಹೊಂದಿರುವವರು, ಮಳೆಯಾಶ್ರಿತವಾಗಿ ಬೇಸಾಯ ಮಾಡುವವರು ಯಾವ ಬೆಳೆ ಬೆಳೆದರೆ ಲಾಭಕಾರಿ ಎಂಬ ಯೋಚನೆ ಸಹಜ. ಅಂಥವರು ಕಿರುಧಾನ್ಯ ಬೆಳೆದು ಲಾಭ ಗಳಿಸಬಹುದು. ಕಿರುಧಾನ್ಯಗಳಿಗೆ ಮತ್ತೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಯಾಕೆಂದರೆ ಕಿರುಧಾನ್ಯದಿಂದ ಅಧಿಕ ಪೋಷಕಾಂಶ ಸಿಗುತ್ತದೆ ಮತ್ತು ಹಲವು ರೋಗಗಳನ್ನು ದೂರವಿಡಬಹುದು ಎಂಬುದನ್ನು ಜನರು ಅರಿಯತೊಡಗಿದ್ದಾರೆ. ಹೀಗಾಗಿ ಕಿರುಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಹೆಚ್ಚತೊಡಗಿದೆ. ಅಂಥ ಕಿರುಧಾನ್ಯಗಳಲ್ಲಿ ಕೊರಲೆ ಪ್ರಮುಖವಾದದ್ದು. ಇದನ್ನು ನೆರೆಯ ಸೀಮಾಂದ್ರ ಮತ್ತು ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇದರ ವೈಜ್ಞಾನಿಕ ಹೆಸರು Panicum ramosum.
ಬೆಳೆಯುವ ವಿಧಾನ
ಕೊರಲೆಯನ್ನು ಎರಡು ವಿಧಾನದ ಮೂಲಕ ಬೆಳೆಯಬಹುದು. ಮೊದಲನೆಯದು ಕೂರಿಗೆಯ ಮೂಲಕ ಬಿತ್ತುವುದು. ಸಾಲಿನಿಂದ ಸಾಲಿಗೆ ಅರ್ಧ ಅಡಿ ಅಂತರವಿರಬೇಕು. ಮತ್ತೊಂದು ವಿಧಾನವೆಂದರೆ, ಜಮೀನಿನಲ್ಲಿ ಕೊರಲೆಯನ್ನು ಚೆಲ್ಲುವುದು. ಈ ರೀತಿ ಅಡಕೆ ತೋಟಗಳಲ್ಲಿ ಮಾಡುತ್ತಾರೆ.
ಕೊರಲೆ ಬಿತ್ತಿದ ಎರಡೂವರೆ ತಿಂಗಳಿಗೆ ಕೈಸೇರುತ್ತದೆ. ಹೆಚ್ಚಿನ ನಿರ್ವಹಣೆಯ ಅವಶ್ಯ ಇಲ್ಲ. ಮಳೆಯಾಶ್ರಿತವಾಗಿ ಬೆಳೆಯುವುದಾದರೆ ಜುಲೈ- ಆಗಸ್ಟ್ ಉತ್ತಮ. ನೀರಾವರಿಯಾದರೆ ವರ್ಷದ ಎಲ್ಲ ತಿಂಗಳಲ್ಲೂ ಬಿತ್ತನೆ ಮಾಡಬಹುದು. ಎಕರೆಗೆ 5 ಕೆಜಿ ಬೀಜ ಬೇಕಾಗುತ್ತದೆ.
ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯಬಹುದು. ಕಡಿಮೆ ಮಳೆಯಾಗುವ ಪ್ರದೇಶವೇ ಕೊರಲೆಗೆ ಹೇಳಿ ಮಾಡಿಸಿದ್ದು. ಗಿಡ- ಮರದ ನೆರಳಿದ್ದರೂ ಚೆನ್ನಾಗಿ ಬೆಳೆಯುತ್ತದೆ. ಇದು ಕೊರಲೆಯ ವೈಶಿಷ್ಟ್ಯ. ಅಲ್ಲದೆ, ಇದಕ್ಕೆ ಯಾವುದೇ ರೋಗಬಾಧೆಯ ಕಾಟವಿಲ್ಲ. ನಾಟಿ ತಳಿಯ ಬೀಜಗಳೇ ಎಲ್ಲೆಡೆ ಬಳಕೆಯಲ್ಲಿವೆ.
ರೋಗ ನಿಯಂತ್ರಣ
ಕೊರಲೆಯಿಂದ ರಕ್ತದೊತ್ತಡ, ಮಧುಮೇಹ ಮತ್ತು ಕೀಲುನೋವು ಸೇರಿದಂತೆ ಮೊದಲಾದ ರೋಗಗಳಿಂದ ದೂರವಿರಬಹುದು. ಕೊರಲೆಯ ರೊಟ್ಟಿ, ದೋಸೆ ತುಂಬಾ ರುಚಿಯಾಗಿರುತ್ತದೆ. ಅಕ್ಕಿಯಿಂದ ಯಾವ ಪದಾರ್ಥಗಳನ್ನು ಮಾಡಲು ಸಾಧ್ಯವೋ ಅಷ್ಟೆಲ್ಲ ಐಟಂಗಳನ್ನು ಕೊರಲೆಯಿಂದ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಶಿರಾ ತಾಲೂಕಿನ ಎಂ. ದೊರೆ ಗ್ರಾಮದ ಎಚ್.ಕೆ. ರಘು (ಮೊ. 8095369167) ಅವರನ್ನು ಸಂಪರ್ಕಿಸಬಹುದು.ಟಿ
-ಮಹೇಶ್ ಅರಳಿ