ಕೋಲಾರ ಜಿಲ್ಲೆಯ ಮಾಲೂರಿನ ಬಳಿ ಚಿಕ್ಕ ತಿರುಪತಿ ಎಂಬ ಪುಣ್ಯ ಕ್ಷೇತ್ರವಿದ್ದು, 4 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಈ ಪುಣ್ಯ ಕ್ಷೇತ್ರದಲ್ಲಿರುವ ವಿಗ್ರಹ ಅಗ್ನಿ ದೇವ ಪ್ರತಿಷ್ಠಾಪಿಸಿ ಪೂಜಿಸಿದ ಎಂದು ಸ್ಥಳ ಪುರಾಣದ ಮೂಲಕ ತಿಳಿದುಬಂದಿದೆ.
ಮಹಾಭಾರತ ಕಾಲದ ಇತಿಹಾಸ ಹೊಂದಿದೆ ಈ ದೇವಾಲಯ. ದ್ವಾಪರಯುಗದಲ್ಲಿ ರಾಜ ಮಹಾರಾಜರು, ಋಷಿ ಮುನಿಗಳು ಮಾಡುತ್ತಿದ್ದ ಯಜ್ಞಯಾಗಾದಿಗಳ ಹವಿರ್ಭಾಗವನ್ನು ದೇವತೆಗಳಿಗೆ ಅರ್ಪಿಸುತ್ತಿದ್ದ ಹವ್ಯವಾಹನನಾದ ಅಗ್ನಿ ಹೆಚ್ಚು ತುಪ್ಪ ಸೇವನೆ ಮಾಡಿದ್ದರಿಂದಾಗಿ ಉದರಬೇನೆ (ಹೊಟ್ಟೆನೋವು) ಎದುರಿಸುತ್ತಾನೆ. ದೇವ ವೈದ್ಯರಾದ ಅಶ್ವಿನಿ ಕುಮಾರರು, ಔಷಧ ಸಸ್ಯಗಳಿಂದ ಸಮೃದ್ಧವಾದ ಖಾಂಡವ ವನವನ್ನು ಕಾಳ್ಗಿಚ್ಚಿನಿಂದ ಸುಡುವಂತೆ ತಿಳಿಸುತ್ತಾನೆ. ಈ ಔಷಧೀಯ ಸಸ್ಯಗಳ ಭಕ್ಷಣೆಯಿಂದ ನಿನ್ನ ಉದರ ಬೇನೆ ನಿವಾರಣೆ ಆಗುತ್ತದೆ ಎಂದು ತಿಳಿಸುತ್ತಾನೆ.
ಅಗ್ನಿದೇವ ಖಾಂಡವ ದಹನಕ್ಕಾಗಿ ಅರ್ಜುನನ ಮೊರೆ ಹೋಗುತ್ತಾನೆ. ಖಾಂಡವ ದಹನಕ್ಕೆ ಅಡ್ಡಿ ಆಗದಂತೆ ಆರ್ಜುನ ಹಾಗೂ ಶ್ರೀಕೃಷ್ಣ ಪರಮಾತ್ಮ ಬೆಂಗಾವಲಿಗೆ ನಿಲ್ಲುತ್ತಾರೆ. ಈ ದಹನ ಕಾಲದಲ್ಲಿ ತಕ್ಷಕನೆಂಬ ನಾಗ ಸುಟ್ಟಗಾಯಕ್ಕೆ ತುತ್ತಾಗಿ, ತೇಜೋಹೀನನಾಗುವಂತೆ ಅಗ್ನಿಗೆ ಶಪಿಸುತ್ತಾನೆ. ಆಗ ವರದ ನಾರಾಯಣನ (ಪ್ರಸನ್ನ ವೆಂಕಟರಮಣ) ಮೊರೆ ಹೋದ ಅಗ್ನಿ ಶಾಪವಿಮುಕ್ತನಾಗಿ ಮತ್ತೆ ತನ್ನ ಹಿಂದಿನ ಕಾಂತಿ ಪಡೆಯುತ್ತಾನೆ. ಶ್ರೀಮನ್ನಾರಾಯಣನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಈ ಸ್ಥಳದಲ್ಲಿ ವರದ ನಾರಾಯಣಸ್ವಾಮಿ ಪ್ರತಿಮೆ ಸ್ಥಾಪಿಸಿ ಪೂಜಿಸಿ, ದೇವಾಲಯ ನಿರ್ಮಿಸಿದನೆಂದು ಹೇಳಲಾಗುತ್ತದೆ. ಶ್ರೀದೇವಿ, ಭೂದೇವಿ ಸಹಿತನಾಗಿರುವ ಶ್ರೀನಿವಾಸ ಇಲ್ಲಿ ಅಭಯಮುದ್ರೆಯಲ್ಲಿರುವುದು ವಿಶೇಷ. ದಕ್ಷಿಣ ಭಾರತದಲ್ಲಿರುವ ಏಳು ತಿರುಪತಿಗಳ ಪೈಕಿ ಇದೂ ಒಂದೆಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿಯೂ ಸಹ ತಿರುಪತಿ ತಿಮ್ಮಪ್ಪನಿಗೆ ನಡೆಯುವಂತೆಯೇ ರಥೋತ್ಸವ, ಬ್ರಹ್ಮೋತ್ಸವ, ಕಲ್ಯಾಣೋತ್ಸವ ಇತ್ಯಾದಿ ಎಲ್ಲ ಸೇವೆಗಳೂ ನಡೆಯುತ್ತವೆ.
ಈ ದೇವಾಲಯದಲ್ಲಿ ಶ್ರಾವಣ ಮಾಸದ ಎಲ್ಲ ಶನಿವಾರಗಳಂದು, ವೈಕುಂಠ ಏಕಾದಶಿಯ ದಿನ ಹಾಗೂ ದನುರ್ಮಾಸದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಚೋಳರ ದೊರೆ ಜನಮೇಜಯ 11ನೇ ಶತಮಾನದಲ್ಲಿ ಈ ದೇವಾಲಯಕ್ಕೆ ಭೇಟಿಕೊಟ್ಟ ಬಗ್ಗೆ ಇಲ್ಲಿರುವ ಶಾಸನದಲ್ಲಿ ಉಲ್ಲೇಖವಿದೆ. ಬೆಂಗಳೂರಿನಿಂದ 45 ಕಿಲೋ ಮೀಟರ್ ದೂರದಲ್ಲಿರುವ ಚಿಕ್ಕತಿರುಪತಿಗೆ ಹೋಗಲು ಕೋಲಾರ, ಮಾಲೂರು ಹಾಗೂ ಬೆಂಗಳೂರಿನಿಂದ ನೇರ ಬಸ್ ಸೌಲಭ್ಯವಿದೆ.