ಭಾರತದ ಪುರಾತನ ಆಚರಣೆಗಳ ಹಿಂದೆಯೂ ಒಂದೊಂದು ಸಂದೇಶ ನೀಡುವ ಅಥವಾ ಮನಸ್ಸಿಗೆ ನಾಟುವಂತಹ ತತ್ವಗಳಿರುತ್ತದೆ. ಪ್ರತಿಯೊಂದು ಸಮಾರಂಭಗಳಲ್ಲಿಯೂ ಇಂತಹ ತತ್ವಗಳಿರುವ ಆಚರಣೆ, ಪದ್ಧತಿಯನ್ನು ಕಾಣಬಹುದಾಗಿದ್ದು, ವಿವಾಹದಲ್ಲಿಯೂ ಇಂಥಹದ್ದೇ ಅನೇಕ ಪದ್ಧತಿಗಳಿವೆ. ಈ ಪೈಕಿ ವಿವಾಹ ಕಾರ್ಯಕ್ರಮದ ನಂತರ ನವ ದಂಪತಿಗಳು ಮನೆಯನ್ನು ಪ್ರವೇಶಿಸುವುದಕ್ಕೂ ಮುನ್ನ ವಧು ಅಕ್ಕಿ ತುಂಬಿದ ಸೇರಿನ ಪಾತ್ರೆ ಒದೆದು ಮನೆ ಪ್ರವೇಶಿಸುವುದು ಪ್ರಮುಖವಾದದ್ದು.
ವಧು ವಿವಾಹದ ನಂತರ ಪತಿಯ ಮನೆಯನ್ನು ಮೊದಲ ಬಾರಿಗೆ ಪ್ರವೇಶಿಸುವಾಗ ಮೊದಲು ಆರತಿ ಮಾಡಲಾಗುತ್ತದೆ. ನಂತರ ಹೊಸಲಿನ ಮೇಲೆ ಅಕ್ಕಿ ತುಂಬಿದ ಸೇರಿನ ಪಾತ್ರೆ ಇಟ್ಟು ಅದನ್ನು ನಿಧಾನವಾಗಿ ಬಲಗಾಲಿನಿಂದ ತಳ್ಳುವಂತೆ ಹೇಳಲಾಗುತ್ತದೆ.
ಈ ಪದ್ಧತಿಗೂ ಒಂದು ತತ್ವವಿದೆ. ಗೃಹಿಣಿ, ಮಹಿಳೆ, ಕನ್ಯೆಯರನ್ನು ಭಾರತೀಯ ಸಂಸ್ಕೃತಿಯಲ್ಲಿ ದೇವಿ ಲಕ್ಷ್ಮಿಯ ಸ್ವರೂಪವೆಂದೇ ಪರಿಗಣಿಸಲಾಗುತ್ತದೆ. ವಿವಾಹವಾದ ವಧುವನ್ನೂ ಸಹ ಪತಿಯ ಮನೆ ಲಕ್ಷ್ಮಿ ಎಂದೆ ಹೇಳುತ್ತಾರೆ. ಅಂತೆಯೇ ದೇವಿ ಲಕ್ಷ್ಮಿ (ಸಂಪತ್ತು, ಸಂವೃದ್ಧಿ) ಮನೆ ಪ್ರವೇಶಿಸುವುದು ಬಾಗಿಲ ಹೊಸಲಿನ ಮೂಲಕವೇ ಆದ್ದರಿಂದ ಲಕ್ಷ್ಮಿಯ ಸಾನ್ನಿಧ್ಯವೂ ಹೊಸಲಿನ ಮೇಲೆಯೇ ಇರುತ್ತದೆ.
ಇನ್ನು ಅಕ್ಕಿ ಸಂವೃದ್ಧಿಯ ಸೂಚಕವಾಗಿದ್ದು, ವಿವಾಹವಾಗಿ ಬಂದ ನವ ವಧು ಹೊಸಲಿನ ಮೇಲಿರುವ ಅಕ್ಕಿ ತುಂಬಿದ ಸೇರಿನ ಪಾತ್ರೆಯನ್ನು ನಿಧಾನವಾಗಿ ಬಲಗಾಲಿನಿಂದ ತಳ್ಳಿದರೆ ಸಂವೃದ್ಧಿಯ ಸಂಕೇತವಾಗಿರುವ ಅಕ್ಕಿ ಮನೆತುಂಬ ಹರಡಿ, ಅಕ್ಕಿಯಂತೆ ಸಂವೃದ್ಧಿಯೂ ಮನೆ ತುಂಬ ಹರಡಲಿ ಎಂಬ ತತ್ವ ಅಡಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos