ಹಿಂದೂ ಧರ್ಮದಲ್ಲಿ ತುಳಸಿ ಪವಿತ್ರ ಸಸ್ಯ ಎಂಬ ನಂಬಿಕೆ ಇದೆ. ವಿಷ್ಣುವಿಗೆ ಪ್ರಿಯಾವಾದ ತುಳಸಿ ಗಿಡವನ್ನು ಭಾರತದಲ್ಲಿ ಬಹುತೇಕ ಪ್ರತಿ ಮನೆಗಳಲ್ಲೂ ಸಹ ಬೆಳೆಸಿ ಪೂಜೆ ಮಾಡುವ ಪದ್ಧತಿ ನಡೆದುಬಂದಿದೆ.
ತುಳಸಿಯಲ್ಲಿರುವ ಅನೇಕ ಔಷಧೀಯ ಗುಣಗಳಿರುವುದೂ ಸಹ ಅದನ್ನು ಪೂಜನೀಯವಾಗಿ ಗುರುತಿಸಲು ಕಾರಣವಾಗಿದೆ. ಧಾರ್ಮಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಹಲವು ಮಹತ್ವಗಳನ್ನು ಹೊಂದಿರುವ ತುಳಸಿ ಗಿಡವನ್ನು ಮನೆಯಲ್ಲಿ ನೆಡುವಾಗ ಪ್ರಮುಖವಾಗಿ ಗಮನ ಹರಿಸಬೇಕಿರುವ ಕೆಲವೊಂದು ಸಂಗತಿಗಳ ಬಗ್ಗೆ ಮಾಹಿತಿ ಹೀಗಿವೆ.
ಏಕಾದಶಿ ಹಾಗೂ ರವಿವಾರಗಳಂದು ತುಳಸಿ ಎಲೆಗಳನ್ನು ಕೀಳಬಾರದು ಎಂಬ ನಂಬಿಕೆ ಇದೆ. ಆದ್ದರಿಂದ ಆ ದಿನಗಳಲ್ಲಿ ತುಳಸಿಯ ಎಲೆಗಳನ್ನು ಕೀಳಬಾರದು ಎಂಬ ಅಂಶಗಳು ಗಮನದಲ್ಲಿರುವುದು ಉತ್ತಮ. ಒಣಗಿದ ತುಳಸಿ ಗಿಡಗಳನ್ನು ಇಟ್ಟುಕೊಳ್ಳುವುದು, ಸಾಮಾನ್ಯಗಿಡಗಳಂತೆ ಎಸೆಯುವುದು ಸೂಕ್ತವಲ್ಲ. ಅದನ್ನು ನೀರಿನಲ್ಲಿ ವಿಸರ್ಜಿಸುವುದು ಸೂಕ್ತ, ಅವಕಾಶ ಇದ್ದರೆ ನದಿಯಲ್ಲಿ ವಿಸರ್ಜಿಸಿದರೆ ಉತ್ತಮ ಎಂಬ ನಂಬಿಕೆ ಇದೆ. ಒಣಗಿದ ತುಳಸಿ ಗಿಡವನ್ನು ವಿಸರ್ಜಿಸಿದ ನಂತರ ತಕ್ಷಣವೇ ಹೊಸ ಗಿಡವನ್ನು ನೆಡಬೇಕು. ತುಳಸಿ ಗಿಡದ ನಡುವೆ ಮುಳ್ಳಿನ ಗಿಡಗಳನ್ನು ಬೆಳೆಸುವುದನ್ನು ನಿಲ್ಲಿಸಿ, ಅದರ ಬದಲು ತುಳಸಿ ಗಿಡದ ನಡುವೆ ಹೂವಿನ ಗಿಡಗಳನ್ನು ಬೆಳೆಸಬಹುದು.
ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಬೆಳಿಗ್ಗೆ ವೇಳೆ ತುಳಸಿ ಪೂಜೆ ನಡೆಯುತ್ತದೆ. ಬೆಳಿಗ್ಗೆ ಈ ರೀತಿಯಲ್ಲಿ ತುಳಸಿ ಪೂಜೆ ನಡೆಸುವುದರ ಹಿಂದೆ ವೈದ್ಯಕೀಯ ಕಾರಣವಿರಬಹುದು ಎಂದು ಊಹಿಸಲಾಗುತ್ತದೆ. ಅದೇನೆಂದರೆ ತುಳಸಿ ಗಿಡಕ್ಕೆ ಆಮ್ಲಜನಕ ಬಿಡುಗಡೆ ಮಾಡುವ ರೋಗ ನಿರೋಧಕ ಶಕ್ತಿ ಮತ್ತು ಔಷಧಿ ಗುಣಗಳಿವೆ. ಈ ಹಿನ್ನೆಲೆಯಲ್ಲಿ ತುಳಸಿಯ ಗಿಡಕ್ಕೆ ಬೆಳಿಗ್ಗೆ ಎದ್ದು ಪೂಜೆ ಸಲ್ಲಿಸುವುದರಿಂದ ಉಸಿರಾಟಕ್ಕೆ ಶುದ್ಧ ಗಾಳಿ ಸಿಗುತ್ತದೆ.
ವಾಸ್ತು ಪ್ರಕಾರವೂ ತುಳಸಿ ಮಹತ್ವ ಪಡೆದುಕೊಂಡಿದ್ದು, ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲಗಳು ದೊರೆಯುತ್ತದೆ, ಋಣಾತ್ಮಕ ಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಇದೆ. ಕೊನೆಯದಾಗಿ ಎಲ್ಲರಿಗೂ ತಿಳಿದಿರುವಂತೆ ದಿನ ಬೆಳಿಗ್ಗೆ 2-3 ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.