ಜೀವನದ ಜಂಜಾಟವನ್ನು ನಿರ್ವಹಿಸುವುದು ಪ್ರತಿ ಮನುಷ್ಯನಿಗೂ ಸವಾಲಿನ ಸಂಗತಿ. ಅಂತಹ ಸವಾಲನ್ನು ನಿರ್ವಹಿಸಲು ಜ್ಞಾನಿಗಳು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವ ಸಲಹೆ ನೀಡಿದ್ದಾರೆ. ಕೆಲವು ಆಧ್ಯಾಮಿಕ ಅಂಶಗಳನ್ನು ಪಾಲಿಸುವುದು, ಸವಾಲುಗಳನ್ನು ಎದುರಿಸಲು ಮನಸ್ಸಿಗೆ ಸಹಕಾರಿಯಾಗಲಿದ್ದು, ಬಾಲ್ಯದಿಂದಲೇ ಅಂತಹ ಅಂಶಗಳನ್ನು ಪಾಲಿಸುವುದನ್ನು ಕಲಿತರೆ ಉತ್ತಮ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಕೆಲವು ಸರಳ ಶ್ಲೋಕಗಳನ್ನು ಕಲಿಸುವುದು ಅವರಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ರೂಢಿಸುತ್ತದೆ.
ಈ ಶ್ಲೋಕಗಳು ಕೇವಲ ಪಠಣೆಗೆ ಮಾತ್ರ ಸೀಮಿತವಾಗದೇ ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ತನ್ನಂತೆಯೇ ನೋಡಿ, ಗೌರವಿಸಬೇಕೆಂಬುದನ್ನೂ ತಿಳಿಸುವುದರಿಂದ. ಶ್ಲೋಕದ ಜೊತೆ ಜೊತೆಗೇ ಮಕ್ಕಳ ವ್ಯಕ್ತಿತ್ವವೂ ವಿಕಾಸಗೊಳ್ಳಲಿದೆ.
ಮಕ್ಕಳಿಗೆ ಕಲಿಸಬಹುದಾದ ಸರಳ ಶ್ಲೋಕಗಳು ಇಂತಿವೆ:
ಓಂ ಸಹನಾ ಭವತುಃ ಸಹನೋ ಭುನಕ್ತುಃ ಸಹವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು ಮಾವಿದ್ವಿಶಾವಹೈ ಓಂ ಶಾಂತಿ ಶಾಂತಿ ಶಾಂತಿಃ.
ನಮ್ಮೆಲ್ಲರನ್ನೂ ದೈವಿಕ ಶಕ್ತಿ ರಕ್ಷಿಸಲಿ, ಎಲ್ಲರೂ ಜೊತೆಯಾಗಿ ಆಹಾರ ಸೇವಿಸೋಣ, ಅಗಾಧವಾದ ಶಕ್ತಿಯಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ನಮ್ಮೆಲ್ಲರ ಬೌದ್ಧಿಕ ಬೆಳವಣಿಗೆ ಮತ್ತಷ್ಟು ವೃದ್ಧಿಯಾಗಲಿ. ನಮ್ಮೆಲ್ಲರ ನಡುವೆ ವೈರತ್ವ ಬಾರದೇ ಇರಲಿ ಎಂಬುದು ಈ ಶ್ಲೋಕದ ಅರ್ಥವಾಗಿದೆ.
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:|
ಈ ಶ್ಲೋಕವನ್ನು ಮಕ್ಕಳಿಗೆ ಕಲಿಸುವುದರಿಂದ ಮಕ್ಕಳಲ್ಲಿ ಬಾಲ್ಯದಿಂದಲೇ ಬೋಧನೆ ಮಾಡುವ ಗುರುಗಳ ಬಗ್ಗೆ ಗೌರವಾದರಗಳು ಬೆಳೆಯುತ್ತವೆ. ಗುರುವನ್ನು ಬ್ರಹ್ಮ ವಿಷ್ಣು ಮಹೇಶ್ವರಿಗೆ ಹೋಲಿಕೆ ಮಾಡಲಾಗಿದ್ದು, ಗುರುವೇ ಸಾಕ್ಷಾತ್ ಪರಬ್ರಹ್ಮ ಎಂಬ ಅರ್ಥವನ್ನು ಈ ಶ್ಲೋಕ ನೀಡುತ್ತದೆ.