ಭಾರತ ಪ್ರಾಚೀನ ಕಾಲದಿಂದಲೂ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿದೆ. ಭಾರತೀಯ ವಾಸ್ತುಶಿಲ್ಪಕಾರರು ಕೇವಲ ಶಿಲ್ಪಿಗಳಷ್ಟೇ ಅಲ್ಲದೇ ಭೌತಶಾಸ್ತ್ರದ ಪ್ರಕಾಂಡ ಪಂಡಿತರೂ ಆಗಿದ್ದರೆಂಬುದಕ್ಕೆ ಹಲವು ಜೀವಂತ ಉದಾಹರಣೆಗಳು ಇಂದಿಗೂ ಕಾಣಸಿಗುತ್ತವೆ. ಈ ಪೈಕಿ 1000 ವರ್ಷಗಳ ಇತಿಹಾಸವುಳ್ಳ ತಂಜಾವೂರಿನ ಬೃಹದೇಶ್ವರ ದೇವಾಲಯವೂ ಒಂದಾಗಿದೆ.
ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಲ್ಪಟ್ಟಿರುವ ಶಿವನ ದೇವಾಲಯವಾಗಿರುವ ತಂಜಾವೂರಿನ ಬೃಹದೇಶ್ವರ ದೇವಾಲಯ ಭಾರತೀಯ ವಾಸ್ತುಶಿಲ್ಪದ ಅಚ್ಚರಿಗಳ ಆಗರವಾಗಿದೆ. ದ್ರಾವಿಡ ಶೈಲಿಯಲ್ಲಿರುವ ದೇವಾಲಯ ಚೋಳ ವಂಶದ ರಾಜ ರಾಜ ಅರಸನ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು, ವಿಶ್ವದ ಅತ್ಯಂತ ಅದ್ಭುತ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆ.
ದೇವಾಲಯದ ಗೋಪುರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ವಿಶ್ವದ ಅತ್ಯಂತ ಎತ್ತರದ ಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸುಂದರ ರಚನೆಗಳು, ಕಲೆಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಜೊತೆಗೆ ಹೆಸರೇ ಸೂಚಿಸುವಂತೆ ಬೃಹತ್ ಶಿವಲಿಂಗವಿದ್ದು ವಿಶ್ವದಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತಿದೆ.
ಮೇಲೆ ಹೇಳಿದಂತೆ ಬೃಹದೇಶ್ವರ ದೇವಾಲಯದ ವಾಸ್ತು ಶಿಲ್ಪದ ಅಚ್ಚರಿ ಎಂದರೆ, ಮಧ್ಯಾಹ್ನದ ವೇಳೆ ನೆರಳು ಬೀಳದಂತೆ ಕಟ್ಟಲಾಗಿರುವ ವಿಮಾನ ಗೋಪುರ. ವಿಮಾನ ಗೋಪುರದ ಅಡಿಯ ಭಾಗ ಮೇಲ್ಭಾಗಕ್ಕಿಂತ ದೊಡ್ಡದಾಗಿರುವ ಕಾರಣ ಮಧ್ಯಾಹ್ನದ ಬಿಸಿಲಿನಿಂದ ಉಂಟಾಗುವ ನೆರಳು ಗೋಪುರದ ಅಡಿಯ ಭಾಗದಲ್ಲೇ ಸೇರಿ ಹೋಗುತ್ತದೆ. ನೆಲದ ಮೇಲೆ ಬೀಳುವುದಿಲ್ಲ. ಆದ್ದರಿಂದ ನೆರಳು ಬೀಳುವುದಿಲ್ಲ ಎಂದು ಹೇಳಲಾಗುತ್ತದೆ. ತಂತ್ರಜ್ಞಾನ ಮುಂದುವರೆಯದ ದಿನಗಳಲ್ಲಿ ಬೃಹದೇಶ್ವರ ದೇವಾಲಯದ ಗೋಪುರ ನಿರ್ಮಾತೃ ವಾಸ್ತು ಶಿಲ್ಪಿಗಳ ಬೆಳಕಿನ ಜ್ಞಾನ ನಿಜಕ್ಕೂ ಬೆರಗು ಮೂಡಿಸುವಂತಿದ್ದು, ಇಂದಿಗೂ ವಿಶ್ವವಿಖ್ಯಾತವಾಗಿ ಪ್ರಸಿದ್ಧಿ ಪಡೆದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos