ಭಕ್ತಿ-ಭವಿಷ್ಯ

ಭಕ್ತಾದಿಗಳಿಗೆ ದಿವೌಷಧ ನೀಡುವ ಗೋಮುಖ ತೀರ್ಥವಿರುವ ಶ್ರೀಧರ ಸ್ವಾಮಿಗಳ ತಪೋ ಕ್ಷೇತ್ರ!

Srinivas Rao BV
ಭಾರತ ಅಸಂಖ್ಯಾತ ಯೋಗಿಗಳ ತಪಸ್ ಶಕ್ತಿ ಇರುವ ದೇಶ, ಇಲ್ಲಿನ ಯೋಗಿಗಳ ತಪಸ್ ಶಕ್ತಿಯ ಪ್ರತೀಕವಾಗಿರುವ ಅನೇಕ ಸ್ಥಳಗಳು ಇಲ್ಲಿವೆ. ಅಂತಹ ಕ್ಷೇತ್ರಗಳ ಪೈಕಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಪುರವೂ ಒಂದು. 
ಶಿವಮೊಗ್ಗದ ವರದಪುರವೆಂದರೆ ತಕ್ಷಣ ಯತಿಶ್ರೇಷ್ಠರಾದ ಶ್ರೀಧರ ಸ್ವಾಮಿಗಳು ನೆನಪಾಗುತ್ತಾರೆ. ವರದಹಳ್ಳಿ ಶ್ರೀಧರ ಸ್ವಾಮಿಗಳ ತಪೋಭೂಮಿ, ಶ್ರೀಧರ ಸ್ವಾಮಿಗಳ ಲೀಲಾವಿಶೇಷವನ್ನು ಕಂಡಂತಹ ಪುಣ್ಯ ಭೂಮಿ. ದತ್ತಾತ್ರೆಯ ಸ್ವರೂಪಿಯೆಂದೇ ಭಕ್ತರಿಂದ ಆರಾಧಿಸಲ್ಪಡುವ ಶ್ರೀಧರ ಸ್ವಾಮಿಗಳು ಮಹಾರಾಷ್ಟ್ರದ ಸಜ್ಜನಗಢದಲ್ಲಿ ಜನಿಸಿದರಾದರೂ ದಕ್ಷಿಣದ ವರದಹಳ್ಳಿಯನ್ನು ತಮ್ಮ ತಪೋಭೂಮಿಯನ್ನಾಗಿಸಿಕೊಂಡರು.
ವಿದೇಹ ಮುಕ್ತಿ ಪಡೆಯುವವರೆಗೂ ಅನೇಕ ಪ್ರದೇಶಗಳಲ್ಲಿ ಸಂಚರಿಸಿ ಧರ್ಮ ಜಾಗೃತಿಯನ್ನುಂಟುಮಾಡಿರುವ ಶ್ರೀಧರ ಸ್ವಾಮಿಗಳ ಸಮಾಧಿ ಇರುವುದೂ ವರದಹಳ್ಳಿಯಲ್ಲಿಯೇ. ಶ್ರೀಧರರ ಸಮಾಧಿ ಇರುವುದೂ ಸಹ ತಪೋಕ್ಷೇತ್ರವಾದ ವರದಹಳ್ಳಿಯಲ್ಲೇ ಎಂಬುದು ಮತ್ತೊಂದು ವಿಶೇಷ. ಇಂದಿಗೂ ಸಹ ವರದಹಳ್ಳಿಯಲ್ಲಿರುವ ಶ್ರೀಧರಾಶ್ರಮದಲ್ಲಿ ಶ್ರೀಧರ ಸ್ವಾಮಿಗಳ ಪಾದುಕಾ ಪೂಜೆ, ಪೂಜೆಯ ನಂತರ ನಡೆಯುವ ಭಜನಾ ಸೇವೆ ಸ್ವಾಮಿ ಶ್ರೀಧರರ ಮಹಿಮೆಯನ್ನು ಸಾರುತ್ತದೆ.
ಹಲವು ರೋಗಗಳಿಗೆ ರಾಮಬಾಣವಾಗಿರುವ ವರದಹಳ್ಳಿಯ ಮತ್ತೊಂದು ವಿಶೇಷವೆಂದರೆ ಇಲ್ಲಿನ ಗೋ ಮುಖದಿಂದ ಹೊರ ಹೊಮ್ಮುವ ತೀರ್ಥ ಜಲ. ಒಮ್ಮೆ ತುಂಬಿಟ್ಟರೆ ಎಷ್ಟೇ ವರ್ಷವಾದರೂ ಹಾಳಾಗದೇ ಉಳಿಯುವುದು ಈ ಜಲದ ವಿಶೇಷತೆ. ಹಾಗೆಯೇ ಇಲ್ಲಿನ ಜನರ ನಂಬಿಕೆಯಂತೆ ಈ ತೀರ್ಥ ಅನೇಕ ಚರ್ಮವ್ಯಾಧಿ ನಿವಾರಕವೂ ಆಗಿದೆ. ಹಾಗಾಗಿಯೇ ಶ್ರೀಧರಾಶ್ರಮಕ್ಕೆ ಭೇಟಿ ನೀಡುವ ಭಕ್ತರು ತಪ್ಪದೇ ತೀರ್ಥ ಸ್ನಾನ ಮಾಡುತ್ತಾರೆ. ಇಲ್ಲಿನ ಪರಿಶುಧ್ದ ಜಲ ಔಷದೀಯ ಗುಣಗಳನ್ನು ಹೊಂದಿದ್ದು ವ್ಯಾಧಿನಿವಾರಕ ,ಮಕ್ಕಳ ಭಯ ನಿವಾರಕ ಎಂದೂ ಪ್ರಸಿದ್ದಿ ಪಡೆದಿದ್ದು, ಶ್ರೀಧರ ಸ್ವಾಮಿಗಳ ತಪೋಭೂಮಿ, ಗೋಮುಖ ತೀರ್ಥ ಅರಸಿ ಬರುವ ಭಕ್ತಾದಿಗಳಿಗೆ ದಿವೌಷಧವಾಗಿದೆ.
SCROLL FOR NEXT