ಭಕ್ತಿ-ಭವಿಷ್ಯ

ವಿಶ್ವದ ಏಕೈಕ ಆನೆಯ ದಂತ (ಹಸ್ತಿದಂತ) ಸಿಂಹಾಸನ ಇರುವುದೆಲ್ಲಿ ಗೊತ್ತಾ?

Srinivasamurthy VN
ನೀವು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನದ ಬಗ್ಗೆ ಕೇಳಿರುತ್ತೀರಿ ಆದರೆ ಆನೆಯ ದಂತದಿಂದ ಮಾಡಿರುವ ವಿಶೇಷವಾದ ಹಸ್ತಿದಂತ ಸಿಂಹಾಸನದ ಬಗ್ಗೆ ಕೇಳಿದ್ದೀರಾ?
ಹೌದು, ಆನೆಯ ದಂತದಿಂದ ನಿರ್ಮಾಣವಾಗಿರುವ ಸಿಂಹಾಸನ ನಮ್ಮ ಕರ್ನಾಟಕದಲ್ಲಿದೆ. ಜಗತ್ತಿನ  ಏಕೈಕ ಹಸ್ತಿ ದಂತ ಸಿಂಹಾಸನ ಇರುವುದು ರಾಮಚಂದ್ರಾಪುರ ಮಠದಲ್ಲಿ. 1930-40ರ ದಶಕದಲ್ಲಿ ಹಸ್ತಿದಂತ ಸಿಂಹಾಸನವನ್ನು ನಿರ್ಮಿಸಲಾಗಿತ್ತು. ರಾಮಚಂದ್ರಾಪುರ ಮಠದ ಅಂದಿನ ಶ್ರೀಗಳಾಗಿದ್ದ ಶ್ರೀ ರಾಮಚಂದ್ರಭಾರತೀ ಸ್ವಾಮಿಗಳು ಸಾಕಿದ ಆನೆಯ ಮರಣಾನಂತರ ಅದರ ದಂತದಿಂದ ಈ ಸಿಂಹಾಸನವನ್ನು ನಿರ್ಮಿಸಲಾಗಿದೆ. ಮಹಾತ್ಮ ಗಾಂಧಿ ಸಹ ಈ ಸಿಂಹಾಸನದ ದರ್ಶನ ಪಡೆದಿದ್ದರೆಂಬುದು ವಿಶೇಷ.
ಶ್ರೀ ಮಠದ 33ನೇ ಯತಿಗಳಾಗಿದ್ದ ರಾಘವೇಶ್ವರ ಶ್ರೀಗಳ ಕಾಲದಲ್ಲಿ ರಾಮಭದ್ರ ಎಂಬ ಸಲಗ ಇತ್ತು. ಕಾಂಚೀಯ ರಾಜರು ಆ ಕಾಲದಲ್ಲಿ ಶ್ರೀಗಳಿಗೆ ಆನೆಯನ್ನು ಉಡುಗೊರೆಯಾಗಿ ನೀಡಿದ್ದರು. ಶ್ರೀಮಠದಲ್ಲಿ ರಾಮಭದ್ರ ಆನೆ ಶ್ರೀಗಳಿಗೆ ಅತ್ಯಂತ ಪ್ರಿಯವಾದ ಆನೆಯಾಗಿತ್ತು. 1909ರಲ್ಲಿ ಶ್ರೀಗಳು ಬ್ರಹ್ಮೈಕ್ಯರಾದ ಬಳಿಕ ರಾಮಭದ್ರ ಆನೆ ತಾನೂ ಉಪವಾಸ ಕುಳಿತು ದೇಹ ತ್ಯಾಗ ಮಾಡಿತು.
ಅದೇ ಆನೆಯ ದಂತವನ್ನು ಸಂರಕ್ಷಿಸಿ 34ನೇ ಯತಿಗಳಾದ ಶ್ರೀ ರಾಮಚಂದ್ರ ಭಾರತೀ ಶ್ರೀಗಳು ಸಿಂಹಾಸನವನ್ನು ಸಿದ್ಧಪಡಿಸುವಂತೆ ಆದೇಶಿಸಿದ್ದರು. ಮೈಸೂರು ಅರಮನೆಯ ಶಿಲ್ಪಿಯಾಗಿದ್ದ ಮೂಡುಕೋಡು ಹಿರಣ್ಯಪ್ಪ ಎಂಬ ಶಿಲ್ಪಿ ತನ್ನ ಜೊತೆಗಾರರೊಂದಿಗೆ 18 ವರ್ಷಗಳ ಕಾಲ ಸಮಯ ತೆಗೆದುಕೊಂಡು ಈ ಸಿಂಹಾಸನವನ್ನು ಸಿದ್ಧಪಡಿಸಿದ್ದರು. ರಾಮಾಯಣ ಮತ್ತು ಮಹಾಭಾರತದ ಅನನ್ಯ ಕೆತ್ತನೆಗಳು ಸಿಂಹಾಸನದಲ್ಲಿ ಕಾಣಸಿಗುತ್ತವೆ.
SCROLL FOR NEXT