ಚುಮು.. ಚುಮು ಚಳಿ, ಮರಗಟ್ಟುವ ವಾತಾವರಣದಲ್ಲಿ ಸೂರ್ಯೋದಯಕ್ಕೂ ಮುನ್ನವೇ ಪವಿತ್ರ ಸ್ನಾನ, ಬ್ರಾಹ್ಮಿ ಮುಹೂರ್ತದಲ್ಲಿ ಇಷ್ಟ ದೇವದ ಆರಾಧನೆ ಇವು ಮಾರ್ಘಶಿರ ಮಾಸದ ಆಚರಣೆಯ ಸ್ಥೂಲ ಚಿತ್ರಣ.
ಹಿಂದೂ ಪಂಚಾಂಗದ 12 ಮಾಸಗಳಲ್ಲಿ ಮಾರ್ಘಶಿರ ಮಾಸ ದೈವಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ. ಚಾಂದ್ರಮಾನ ಮಾಸಗಳಲ್ಲಿ ಮಾರ್ಘಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ 9 ನೇ ಮಾಸದಲ್ಲಿ ಉಳಿದೆಲ್ಲದಕ್ಕಿಂತಲೂ ದೈವಾರಾಧನೆಗೇ ಅದರಲ್ಲೂ ವಿಷ್ಣುವಿನ ಆರಾಧನೆಗೇ ಹೆಚ್ಚು ಮಹತ್ವ ನೀಡಲಾಗಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಸಹ ಮಾಸಾನಾಮ್ ಮಾರ್ಗಶೀರ್ಷಃ ಅಂದರೆ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ತನ್ನನ್ನು ವರ್ಣಿಸಿದ್ದಾನೆ.
ಸೂರ್ಯ ಧನು ರಾಶಿಗೆ ಪ್ರವೇಶಿಸುವ ದಿನದಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ವೇದ, ಆಗಮಗಳಲ್ಲಿ ಈ ಮಾಸವನ್ನು ದೈವೀ ಕಾರ್ಯಗಳಿಗೆ ಶ್ರೇಷ್ಠ ಎಂದು ಹೇಳಲಾಗಿದೆಯಾದರೂ, ವಿವಾಹವೇ ಮೊದಲಾದ ಶುಭ ಕಾರ್ಯಗಳನ್ನು ಮಾತ್ರ ಮಾಡುವುದಕ್ಕೆ ಇದು ಅತ್ಯಂತ ಶ್ರೇಷ್ಠವಾದ ಮಾಸ ಅಲ್ಲ. ಕೇವಲ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುವುದಕ್ಕೆ ಈ ಮಾಸವನ್ನು ಮೀಸಲಿರಿಸಲಾಗಿದೆ ಆದ್ದರಿಂದ ಇದನ್ನು ಶೂನ್ಯ ಮಾಸ ಎಂದೂ ಹೇಳಲಾಗುತ್ತದೆ.
ಧನುರ್ಮಾಸದಲ್ಲಿಯೇ ಏಕೆ ಪೂಜೆಗಳಿಗೆ ವಿಶೇಷ ಫಲ? ಶುಭಕಾರ್ಯಗಳಿಗೆ ಶ್ರೇಶ್ಠವಲ್ಲ?
ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ನಮ್ಮ ಹಿಂದೂ ಪಂಚಾಂಗವನ್ನು ವಿಭಾಗಿಸಿದ್ದೇವೆ. ನಮ್ಮ ಕಾಲ ಗಣನೆಗೂ ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿ. ಮಾರ್ಘಶಿರ ಮಾಸ/ ಧನು ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳಿಗೆ ಪೂರ್ತಿ ಬ್ರಹ್ಮ ಮುಹೂರ್ತವಿದ್ದಂತೆ ಆದ ಕಾರಣ ದೇವತೆಗಳಿಗೇ ಶ್ರೇಷ್ಠವಾದ ಸಮಯದಲ್ಲಿ ನಾವು ದೈವಾರಾಧನೆ ಮಾಡಿದರೆ ಅದಕ್ಕೆ ವಿಶೇಷ ಫಲ ಇದೆ ಎನ್ನುತ್ತಾರೆ.
ಈ ಮಾಸದಲ್ಲಿ ಅವತಾರ ಪುರುಷರಿಗೆ ಸಂಬಂಧಪಟ್ಟ ಅನೇಕ ಘಟನಾವಳಿಗಳಿವೆ. ಈ ಮಾಸದ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದರೆ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವದು. ಅದಕ್ಕೆ ಮೋಕ್ಷದಾ ಏಕಾದಶಿ ಎಂಬ ಹೆಸರಿದೆ. ಮೋಕ್ಷದಾ ಅಂದರೆ ಮೋಕ್ಷವನ್ನು ನೀಡುವ, ಭವಬಂಧನಗಳಿಂದ ಮನಸನ್ನು ಕಳಚುವುದು ಎಂದು ಅರ್ಥ. ಹಾಗಾಗಿಯೇ ಅದಕ್ಕೆ ಗೀತಾ ಜಯಂತಿಯ ದಿನವನ್ನು ಮೋಕ್ಷದಾ ಏಕಾದಶಿ ಎಂದೂ ಹೇಳುತ್ತಾರೆ. ಇನ್ನು ಸನಾತನ ಧರ್ಮದಲ್ಲಿ ಶ್ರೇಷ್ಠ ಗುರುಗಳೆಂದು ಆರಾಧಿಸಲ್ಪಡುವ ದತ್ತಾತ್ರೇಯ ಜಯಂತಿಯೂ ಸಹ ಮಾರ್ಗಶಿರ ಮಾಸದಲ್ಲಿಯೇ ಬರುತ್ತದೆ. ಮಾರ್ಗಶಿರ ಮಾಸದ ಹುಣ್ಣಿಮೆಯಂದು ದತ್ತಾತ್ರೆಯ ಜಯಂತಿಯನ್ನು ಭಕ್ತಿ, ಆದರಗಳಿಂದ ಆಚರಿಸಲಾಗುತ್ತದೆ. ಮಾರ್ಗಶಿರ ಕೃಷ್ಣ ಏಕಾದಶಿಯ ದಿನದಂದು ಉಪಾವಾಸವಿರುವ ಆಚರಣೆಯಿದ್ದು, ಇದನ್ನು ವಿಮಲಾ ಏಕಾದಶಿ (ಸಫಲಾ) ಎಂದೂ ಕರೆಯುತ್ತಾರೆ, ಈ ದಿನದಂದು ಉಪವಾಸವಿದ್ದು, ಜ್ಞಾನಕ್ಕಾಗಿ ಪ್ರಯತ್ನಿಸಿದರೆ ನಮ್ಮಲ್ಲಿರುವ ಅಜ್ಞಾನ ನಿವೃತ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ವಿಷ್ಣುವಿನ ಅವತಾರವೇ ಆಗಿರುವ ಶ್ರೀಕೃಷ್ಣ ಮಾಸಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ಹೇಳಿದ್ದು, ಈ ಮಾಸದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ಈ ಮಾಸದ ಮತ್ತೊಂದು ಆಚರಣೆಯೆಂದರೆ ಅಮಾವಾಸ್ಯೆಯ 6 ದಿನಗಳ ನಂತರ ಸ್ಕಂದ ಷಷ್ಟಿಯನ್ನು ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಈ ರೀತಿಯ ಸ್ಕಂದ ಷಷ್ಠಿ ಆಚರಣೆ ಹೆಚ್ಚು ನಡೆಯಲಿದ್ದು, ಸಂತಾನವಿಲ್ಲದವರು ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರೆ ಸಂತಾನ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos