ಶರನ್ನವರಾತ್ರದ ಎರಡನೇ ದಿನ ದುರ್ಗೆಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ದ್ವಿತೀಯಂ ಬ್ರಹ್ಮಚಾರಿಣಿ ಎಂದು ಭಕ್ತಿಯಿಂದ ಪೂಜಿಸುವ ಬ್ರಹ್ಮಚಾರಿಣಿ ಸತಿ ಮತ್ತು ಪಾರ್ವತಿ ದೇವಿಯ ಅವಿವಾಹಿತ ರೂಪವಾಗಿದ್ದು ಈಕೆ ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲವನ್ನು ಹಿಡಿದಿರುವ ದುರ್ಗೆಯಾಕಾರವನ್ನು ಕಾಣಬಹುದು.
ಬ್ರಹ್ಮಚಾರಿಣಿಯ ಕಥೆಯೇನು?
ದಕ್ಷಮಹಾರಾಜನ ಮಗಳಾದ ಸತೀ ದೇವಿ ಯಜ್ಞದ ಬೆಂಕಿಗೆ ಆಹುತಿಯಾದ ನಂತರ, ಪರ್ವತಗಳ ರಾಜನಾದ ಹಿಮವಾನನ ಮಗಳಾಗಿ ಪಾರ್ವತಿ ಜನಿಸುತ್ತಾಳೆ. ಹಾಗಾಗಿ ಇವಳನ್ನು ಹೇಮವತಿ ಎಂದೂ ಕರೆಯಲಾಗುತ್ತದೆ. ಬಳಿಕ ಈಕೆ ಯೌವನಾವಸ್ಥೆಗೆ ಬಂದಾಗ ನಾರದ ಮುನಿಯ ಸಲಹೆಯಂತೆ, ಹಿಂದಿನ ಜನ್ಮದಲ್ಲಿ ಪತಿಯಾಗಿದ್ದ ಈಶ್ವರನನ್ನು ಮತ್ತೆ ವರಿಸಲು ತಪಸ್ಸಿನ ಹಾದಿ ಹಿಡಿದು ಭಕ್ತಿಯಿಂದ ಅತ್ಯಂತ ಕಠಿಣ ತಪಸ್ಸನ್ನು ಅನುಸರಿಸುತ್ತಾಳೆ. ಅನೇಕ ವರ್ಷಗಳವರೆಗೂ ಆಹಾರ ಮತ್ತು ನೀರಿಲ್ಲದೇ ತಪಸ್ಸನ್ನು ಮಾಡಿ “ಅಪರ್ಣಾ”, “ಉಮಾ” ಎಂಬೆಲ್ಲಾ ಹೆಸರುಗಳಿಂದ ಪ್ರಖ್ಯಾತಳಾಗುತ್ತಾಳೆ.
ಆತಿಥ್ಯಕ್ಕೆ ಪಾರ್ವತಿ
ಸನಾತನ ಧರ್ಮದಲ್ಲಿ ಆತಿಥ್ಯಕ್ಕೆ ಹೆಣ್ಣುಮಕ್ಕಳನ್ನು ನಿಯೋಜಿಸಲಾಗುತ್ತದೆ. ಹೆಣ್ಣು ಮಕ್ಕಳಿಗೆ ಅತಿಥಿ ಸತ್ಕಾರ ನೈಸರ್ಗಿಕವಾಗಿ ಬಂದಿರುತ್ತದೆ. ಶಿವನಿುಪ ತಪೋಭಾವದಲ್ಲಿ ಕುಳಿತಿದ್ದಾಗ ಪಾರ್ವತಿ ಭಕ್ತಿ, ಪ್ರೀತಿಯಿಂದ ನಿಶ್ಚಲವಾದ ಭಕ್ತಿಯಿಂದ ಸೇವೆ ಮಾಡುತ್ತಾಳೆ.
ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂದಿತು ಎಂದು ನಂಬಲಾಗಿದೆ. ಅವಳ ತಪಸ್ಸಿಗೆ ಕೊನೆಯಲ್ಲಿ ಬ್ರಹ್ಮನು ಪ್ರತ್ಯಕ್ಷನಾಗಿ’ ಇದುವರೆಗೂ ಯಾರೂ ಮಾಡದಂತಹ ಕಠಿಣ ತಪಸ್ಸನ್ನು ಮಾಡಿದ್ದಕ್ಕಾಗಿ ಆಕೆಗೆ, ಈ ಜನ್ಮದಲ್ಲಿ ಶಿವನನ್ನೇ ಪತಿಯಾಗಿ ಪಡೆಯುವೆ’ ಎಂದು ಆಶೀರ್ವದಿಸುತ್ತಾನೆ. ಬಳಿಕ ಅವಳ ತಪಸ್ಸಿಗೆ ಈಶ್ವರನೂ ಮೆಚ್ಚಿ ಪಾರ್ವತಿಯನ್ನು ಪತ್ನಿಯಾಗಿ ಸ್ವೀಕರಿಸುತ್ತಾನೆ.
ಎರಡನೇ ದಿನದ ಪೂಜಾ ವಿಧಾನ
ಈ ದಿನ ದೇವಿಗೆ ತಪ್ಪದೇ ಮಲ್ಲಿಗೆ ಹೂವನ್ನು ಅರ್ಪಿಸುವುದು ಶ್ರೇಷ್ಠ. ಜೊತೆಗೆ ತುಪ್ಪದ ದೀಪ ಬೆಳಗಿಸಿ ಶ್ರೀ ದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ದೇವಿಯ ಆಶೀರ್ವಾದ ಲಭಿಸುತ್ತದೆ. ಜೊತೆಗೆ ಈ ದಿನ ಬ್ರಹ್ಮಚಾರಿಣಿ ಮಂತ್ರವನ್ನು ಕೂಡ ಓದಬೇಕು, ದೇವಿ ಸಂತುಷ್ಟಳಾಗಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ನೈವೇದ್ಯವನ್ನು ಅರ್ಪಿಸಿ ಆರತಿ ಮಾಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಅದರಲ್ಲಿಯೂ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡುವುದರಿಂದ ದೇವಿ ಸಂತುಷ್ಟಳಾಗುತ್ತಾಳೆ ಎಂಬ ನಂಬಿಕೆ ಇದೆ. ದೇವಿಗೆ ಅನ್ನದಿಂದ ಮಾಡಿದ ನೈವೇದ್ಯ ಶ್ರೇಷ್ಠ ಎನ್ನುತ್ತಾರೆ ನಾಡಿನ ಚಿಂತಕಿ, ಲೇಖಕಿ ಡಾ ಆರತಿ ವಿ ಬಿ.
ಸನಾತನ ಧರ್ಮದಲ್ಲಿ ಇದೇ ರೀತಿ ದೇವಿಯನ್ನು ಪೂಜಿಸಬೇಕೆಂಬ ನಿರ್ದಿಷ್ಟ ನಿಯಮಗಳಿಲ್ಲ. ಅವರವರ ಯಥಾಶಕ್ತಿಯಾನುಸಾರ, ಅವರವರ ಕುಲ, ಗೋತ್ರ, ಮನೆತನದ ಸಂಪ್ರದಾಯ ಪ್ರಕಾರ ದೇವರನ್ನು ಪೂಜಿಸಿ ನೈವೇದ್ಯ ಮಾಡಬಹುದು.