ನವದೆಹಲಿ: ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲಹೆಯಂತೆ ಅಂಧರು ಬಳಸುವ ಬ್ರೈಲ್ ಕಾಗದದ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಅಂಧರು ಬಳಸುವ ವಿಶೇಷ ಸಾಧನಗಳ ಮೇಲೆ ಆಮದು ಸುಂಕವನ್ನು ತೆಗೆದು ಹಾಕಬೇಕು. ಈ ಮೂಲಕ ಅಂಧರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.
ರಾಹುಲ್ ಸಲಹೆಯನ್ನು ಪರಿಗಣಿಸಿದ್ದು, ಬ್ರೈಲ್ ಕಾಗದದ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿಗೆ ರಾಹುಲ್ ಭೇಟಿ ನೀಡಿದ್ದ ವೇಳೆ, ಕಾಮರ್ಸ್ ಅಂಧ ವಿದ್ಯಾರ್ಥಿನಿ ಚಂದನಾ, ಅಂಧರು ಬಳಸುವ ವಿಶೇಷ ಸಾಧನಗಳ ಮೇಲಿನ ಸುಂಕದಿಂದ ಅಂಧರಿಗೆ ಯಾವ ರೀತಿ ಕಷ್ಟವಾಗುತ್ತಿದೆ ಎಂದು ವಿವರಿಸಿ, ಮಧ್ಯಪ್ರವೇಶಿಸುವಂತೆ ರಾಹುಲ್ ಗೆ ಮನವಿ ಮಾಡಿದ್ದಳು. ವಿದ್ಯಾರ್ಥಿನಿಯ ಕೋರಿಕೆ ಮೇರೆಗೆ ರಾಹುಲ್ ಗಾಂಧಿ ವಾಣಿಜ್ಯ ಸಚಿವರಿಗೆ ಪತ್ರ ಬರೆದಿದ್ದರು.