ಬೆಂಗಳೂರು: ರಾಜ್ಯ ಸರ್ಕಾರ 6ನೇ ವೇತನ ಆಯೋಗದ ವರದಿಯನ್ನು ಒಪ್ಪಿದ್ದು, ಏಪ್ರಿಲ್ 1ರಿಂದ ಸರ್ಕಾರಿ ನೌಕರರ ವೇತನವನ್ನು ಶೇ.30ರಷ್ಟು ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ದಾಖಲೆಯ 13ನೇ ಬಜೆಟ್ ಮಂಡಿಸಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, 6ನೇ ವೇತನ ಆಯೋಗದ ವರದಿಯನ್ನು ಸರ್ಕಾರ ಒಪ್ಪಿದೆ ಮತ್ತು ವರದಿ ಜಾರಿಗೆ ಬಜೆಟ್ ನಲ್ಲಿ ಹಣ ಒದಗಿಸಿದ್ದೇವೆ. ಆದರೆ ಸಚಿವ ಸಂಪುಟದಲ್ಲಿ ತೀರ್ಮಾನವಾಗಬೇಕಿದೆ ಎಂದು ಹೇಳಿದ್ದಾರೆ.
2018, ಏಪ್ರಿಲ್ 1ರಿಂದ ವೇತನ ಹೆಚ್ಚಳ ವರದಿ ಜಾರಿಗೆ ಬರಲಿದೆ. 6ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನವನ್ನು ಶೇ.30ರಷ್ಟು ಹೆಚ್ಚಳ ಮಾಡುತ್ತೇವೆ. ಇದರಿಂದ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದರು.
ಸರ್ಕಾರಿ ನೌಕರರ ವೇತನ ಹೆಚ್ಚಳದಿಂದಾಗಿ ರಾಜ್ಯ ಸರ್ಕಾರ 10,508 ಕೋಟಿ ರುಪಾಯಿ ಹೊರೆಯಾಗಲಿದೆ ಎಂದು ಸಿಎಂ ತಿಳಿಸಿದರು.
ಇದು ಚುನಾವಣೆ ಬಜೆಟ್ ಅಲ್ಲ. ಸಾಮಾನ್ಯ ಬಜೆಟ್. ಬಜೆಟ್ ನಲ್ಲಿ ಯಾವುದೇ ಸುಳ್ಳು ಷೋಷಣೆ ಮಾಡಿಲ್ಲ. ಮುಂದೆ ನಾವೇ ಅಧಿಕಾರಕ್ಕೆ ಬಂದು ಇದನ್ನು ಜಾರಿಗೊಳಿಸುತ್ತೇವೆ. ಹೀಗಾಗಿ ಜಾರಿಗೊಳಿಸಲು ಸಾಧ್ಯವಾಗುವ ಮತ್ತು ಇತಿಮಿತಿಯೊಳಗೆ ಬಜೆಟ್ ಮಂಡಿಸಿದ್ದೇನೆ ಎಂದರು.