ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು, ಜಯಮಾಲಾ ಅವರು ನಿಭಾಯಿಸುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು 5,725 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ.
ರಾಜ್ಯ ಸರ್ಕಾರದ ‘ಮಾಥೃಪೂರ್ಣ’ ಮತ್ತು ಕೇಂದ್ರ ಸರ್ಕಾರದ ‘ಮಾತೃವಂದನಾ’ ಕಾರ್ಯಕ್ರಮಗಳಲ್ಲಿ ಹಲವು ಸೌಲಭ್ಯಗಳು ದೊರೆಯುತ್ತಿದ್ದು,ಇವುಗಳ ಜೊತೆಗೆ “ಮುಖ್ಯಮಂತ್ರಿ ಮಾತೃಶ್ರೀ ಯೋಜನೆ”ಯನ್ನು ಹೊಸದಾಗಿ ರೂಪಿಸಿದೆ. ಈ ಹೊಸ ಯೋಜನೆಯಡಿ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಹೆರಿಗೆ ಪೂರ್ವದ 3 ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ 3 ತಿಂಗಳ ಕಾಲ ಮಾಸಿಕ 1,000 ರೂ. ಗಳನ್ನು ಅವರ ಆಧಾರ್ ಲಿಂಕ್ಡ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ಈ ಮೊತ್ತವನ್ನು ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ ಹೆಚ್ಚಿಸಲಾಗುವುದು. ಈ ಯೋಜನೆಯು ತಾಯಿಯ ಮೊದಲ ಮಕ್ಕಳಿಗೆ ಅನ್ವಯವಾಗುತ್ತದೆ. ಈ ಯೋಜನೆಗೆ 350 ಕೋಡಿ ರೂ.ಗಳನ್ನು ಮೀಸಲಿಡಲಾಗಿದೆ. 2018ರ ನವೆಂಬರ್ 1ರಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಆಧಾರ ಸ್ವಯಂ ಉದ್ಯೋಗ ಯೋಜನೆಯ ಘಟಕ ವೆಚ್ಚವನ್ನು ಈಗಿರುವ 35,000 ರೂ. ಗಳಿಂದ 1 ಲಕ್ಷ ರೂ. ಗಳಿಗೆ ಹೆಚ್ಚಿಸಿ, ಇದರಲ್ಲಿ ಶೇ. 50ರಷ್ಟು ಬ್ಯಾಂಕ್ ಸಾಲ ಮತ್ತು ಶೇ. 50 ರಷ್ಟು ಸಹಾಯಧನ ಒದಗಿಸಲು ಉದ್ದೇಶಿಸಲಾಗಿದೆ. 2016ರ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯು ಎಲ್ಲಾ 21 ವಿಧದ ವಿಕಲಚೇತನ ವ್ಯಕ್ತಿಗಳ ಸಮೀಕ್ಷೆಯನ್ನು ಕೈಗೊಳ್ಳಲು 5 ಕೋಟಿ ರೂ. ಅನುದಾನ ಒದಗಿಸಲಾಗಿದೆ.