ಕೇಂದ್ರ ಬಜೆಟ್

'ಸರ್ವೋಜನ ಸುಖಿನೋಭವಂತು' ನಿರೀಕ್ಷೆಯಲ್ಲಿ ಮಧ್ಯಂತರ ಬಜೆಟ್

Sumana Upadhyaya

ನವದೆಹಲಿ: ಶುಕ್ರವಾರ ಕೇಂದ್ರ ಸರ್ಕಾರದ ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ನಾಲ್ಕು ತಿಂಗಳ ಅವಧಿಗೆ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಾರೆ. ಇದರಲ್ಲಿ ಹತ್ತು ಹಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಮಧ್ಯಮ ವರ್ಗ ಸೇರಿದಂತೆ ಕಾರ್ಪೊರೇಟ್ ವಲಯಗಳಿಗೆ ತೆರಿಗೆ ಕಡಿತ, ಕೃಷಿ ವಲಯಕ್ಕೆ ಮತ್ತು ಸಣ್ಣ ಗಾತ್ರದ ಕೈಗಾರಿಕಾ ವಲಯಕ್ಕೆ ಪರಿಹಾರ ಪ್ಯಾಕೇಜ್ ಗಳು ಘೋಷಣೆಯಾಗುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಲೋಕಸಭೆ ಚುನಾವಣೆ ಹತ್ತಿರದಲ್ಲಿರುವಾಗ ನಾಲ್ಕು ತಿಂಗಳ ಅವಧಿಗೆಂದು ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ. ಹೊಸ ಸರ್ಕಾರ ಅಸ್ತಿತ್ವ ಬಂದು ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗುವವರೆಗೆ ಸರ್ಕಾರದ ಆಡಳಿತ, ಕಾರ್ಯಕ್ರಮಗಳು ಮುಂದುವರಿದುಕೊಂಡು ಹೋಗಲು ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ.

ಕೇಂದ್ರ ಸರ್ಕಾರದ ಮುಂದೆ ಸದ್ಯ ಕೃಷಿ ವಲಯದ ಸಮಸ್ಯೆಗಳು, ಸಣ್ಣ ಕೈಗಾರಿಕಾ ವಲಯದ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಮಧ್ಯಮ ವರ್ಗದ ಜನರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಯೋಜನೆಗಳನ್ನು ಪ್ರಕಟಿಸುವ ಸವಾಲುಗಳಿವೆ.

ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಆದಾಯ ತೆರಿಗೆ ಪಾವತಿ ಪ್ರಮಾಣವನ್ನು ವರ್ಷಕ್ಕೆ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡುವ ಅಗತ್ಯವಿದೆ. ಕಾರ್ಪೊರೇಟ್ ವಲಯಗಳಿಗೆ ಶೇಕಡಾ 30ರಿಂದ 25ಕ್ಕೆ ಕಡಿತ ಮಾಡುವ ಸಾಧ್ಯತೆಯಿದೆ.

ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಢ ರಾಜ್ಯಗಳಲ್ಲಿ ಚುನಾವಣಾ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿಗೆ ಕೃಷಿ ವಲಯಕ್ಕೆ ಪ್ರಾಮುಖ್ಯತೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ಒಡಿಶಾದ ಕಲಿಯಾ ಯೋಜನೆ ಮತ್ತು ತೆಲಂಗಾಣದ ರೈತ ಬಂಧು ಯೋಜನೆಯ ಸಾಲಿನಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಪ್ರತಿ ಹೆಕ್ಟೇರ್ ಜಮೀನಿಗೆ ಸರ್ಕಾರದಿಂದ 15 ಸಾವಿರ ರೂಪಾಯಿ ನೇರ ಹೂಡಿಕೆ ನೆರವನ್ನು ಮಧ್ಯಂತರ ಬಜೆಟ್ ನಲ್ಲಿ ಘೋಷಿಸುವ ನಿರೀಕ್ಷೆಯಿದೆ. ಬಡ್ಡಿರಹಿತ ಸಾಲ, ಬೆಳೆ ವಿಮೆ ಯೋಜನೆಯಡಿ ಕನಿಷ್ಠ ಪ್ರೀಮಿಯಂ ಮೊತ್ತ ಪಾವತಿಯನ್ನು ಘೋಷಿಸುವ ಸಾಧ್ಯತೆಯಿದೆ.

ಮಧ್ಯಪ್ರದೇಶದಲ್ಲಿ ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ ಭವಂತರ್ ಯೋಜನೆಯನ್ನು ಈ ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಈ ಯೋಜನೆಯಡಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಬೆಲೆಯ ನಡುವಿನ ಅಂತರಕ್ಕೆ ಪರಿಹಾರ ಘೋಷಿಸುವುದಾಗಿದೆ.
 
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆದಾರು ನೋಟುಗಳ ಅಪನಗದೀಕರಣದಿಂದ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ತೀವ್ರ ಹೊಡೆತಕ್ಕೊಳಗಾಗಿದ್ದು ಇವರಿಗೆ ಅನುಕೂಲವಾಗಲು ಬಜೆಟ್ ನಲ್ಲಿ ಕೆಲವು ರಿಯಾಯಿತಿ, ಹಣಗಳ ಸುಗಮ ಹರಿವಿಕೆಗೆ ಮತ್ತು ಕೆಲವು ಪ್ರೋತ್ಸಾಹಕರ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ.

SCROLL FOR NEXT