ಕೇಂದ್ರ ಬಜೆಟ್

ಲೋಕಸಭೆ ಚುನಾವಣೆ ಮೇಲೆ ಕಣ್ಣು: ಅಂತ್ಯೋದಯ ಉಚಿತ ಆಹಾರ ಯೋಜನೆ 1 ವರ್ಷ ವಿಸ್ತರಣೆ; ಸಂಪೂರ್ಣ ವೆಚ್ಚ ಭರಿಸಲಿದೆ ಕೇಂದ್ರ ಸರ್ಕಾರ

Shilpa D

ನವದೆಹಲಿ:  ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಮುಂದಿನ ವರ್ಷದವರೆಗೆ ಉಚಿತ ಆಹಾರ ಯೋಜನೆಯನ್ನು ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಇದರಿಂದಾಗಿ ಕೋಟ್ಯಂತರ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿ ಬಡವರಿಗೆ ಇನ್ನೂ ಒಂದು ವರ್ಷಗಳ ಕಾಲ ಉಚಿತ ಆಹಾರ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಘೋಷಿಸಿದ್ದಾರೆ. ತಮ್ಮ ಬಜೆಟ್‌  ಭಾಷಣದಲ್ಲಿ, ಕೋವಿಡ್  ಸಾಂಕ್ರಾಮಿಕ ಸಮಯದಲ್ಲಿ, 28 ತಿಂಗಳ ಕಾಲ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.

ಕೋವಿಡ್‌ ಕಾಲದಲ್ಲಿ ಹಸಿವನ್ನು ನೀಗಿಸಿದ ಈ ಯೋಜನೆಯನ್ನು ಇನ್ನೂ ಒಂದು ವರ್ಷಗಳ ಕಾಲ ವಿಸ್ತರಿಸುತ್ತಿದ್ದೇವೆ. ಈ ಯೋಜನೆ ಜಾರಿಗೆ ಸರ್ಕಾರಕ್ಕೆ 2 ಲಕ್ಷ ಕೋಟಿ ರೂ.  ಅಗತ್ಯವಿದ್ದು, ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಹೇಳಿದರು. ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ, ಉಜ್ವಲ ಭವಿಷ್ಯದತ್ತ ಸಾಗುತ್ತಿದೆ. 10 ವರ್ಷಗಳಲ್ಲಿ ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಿದೆ ಎಂದು ಸರ್ಕಾರದ ಸಾಧನೆಯನ್ನು ತಿಳಿಸಿದರು.

ಅಗ್ಗದ ಬೆಲೆಯಲ್ಲಿ ಅಕ್ಕಿ, ಗೋಧಿ, ಸಕ್ಕರೆ ಇತ್ಯಾದಿ ಅಗತ್ಯ ಆಹಾರವಸ್ತುಗಳನ್ನು ಕೇಂದ್ರ ಸರ್ಕಾರ ನೀಡಲಿದೆ. ಕೋವಿಡ್ ವೇಳೆ ಈ ಉಚಿತ ಆಹಾರಧಾನ್ಯ ವಿತರಣೆ ಕೋಟ್ಯಂತರ ಜನರಿಗೆ ಅನುಕೂಲವಾಗಿತ್ತು. ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟಪ್‌ಗಳಿಗೆ ಉತ್ತೇಜನ ಕೊಡಲು ಸರ್ಕಾರ ಅಗ್ರಿಕಲ್ಚರ್ ಆಕ್ಸಲರೇಟರ್ ಫಂಡ್ ಅನ್ನು ಸ್ಥಾಪಿಸಿದೆ.

SCROLL FOR NEXT