ವಾಣಿಜ್ಯ

ಷೇರು ಬಜಾರಿಗೆ ರಾಶಿ ರಾಶಿ ಹಣ

Mainashree

ಬೃಹತ್ ನಿಧಿಗಳ ಹಣದ ವ್ಯವಹಾರದ ಹೊಣೆ ಹೊತ್ತವರಿಗೆ ಈಗ ಷೇರು ಬಜಾರು ಒಂದು ದೊಡ್ಡ ಆಕರ್ಷಣೆ. ಆ ಫಂಡ್‌ಗಳು ಈಕ್ವಿಟಿ ಫಂಡ್‌ಗಳಲ್ಲಿ (ಷೇರು ವ್ಯವಹಾರದಲ್ಲಿ ಬಂಡವಾಳ ಹೂಡುವ ಫಂಡ್‌ಗಳು) ಈಗ ವಿಪರೀತವಾಗಿದೆ. ಒಂದೇ ವರ್ಷದಲ್ಲಿ ಬೃಹತ್ ಫಂಡ್‌ಗಳ ಹೂಡಿಕೆ ದುಪ್ಪಟ್ಟಾಗಿದೆ.
ಜೂನ್ ವೇಳೆಗೆ ಬೃಹತ್ ನಿಧಿಗಳ ಈಕ್ವಿಟಿ ಹೂಡಿಕೆಯ ಪ್ರಮಾಣ 2.78 ಲಕ್ಷ ಕೋಟಿ ರುಪಾಯಿಗಳಷ್ಟು. ಸಹಜವಾಗಿಯೇ ಈ ಅವಧಿಯಲ್ಲಿ ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಸಂವೇದಿ ಸೂಚ್ಯಂಕ ಶೇ.31ರಷ್ಟು ಹೆಚ್ಚಿದೆ.  ಈಗಿನ ವಿಶೇಷ ಸನ್ನಿವೇಶದಲ್ಲಿ ವಿದೇಶಿ ಫಂಡ್‌ಗಳೇ ಬಹುದೊಡ್ಡ ಪಾತ್ರವನ್ನು ವಹಿಸಿರುವುದೂ ಸ್ಪಷ್ಟ. ಅನೇಕ ಪ್ರತಿಷ್ಠಿತ ಕಂಪನಿಗಳು ವಿದೇಶಿ ಬಂಡವಾಳವನ್ನು ಸ್ವೀಕರಿಸಬಹುದಾದ ಮಿತಿಯನ್ನು ಮುಟ್ಟಿರುವುದರಿಂದ, ವಿದೇಶದಿಂದ ಬರುತ್ತಿರುವ ಹಣದ ಹೊಳೆ ಇತರ ಕಂಪನಿಗಳ ಷೇರುಗಳಿಗೂ ದಕ್ಕಿದೆ.
ಇದೆಲ್ಲವೂ ಕೇಳುವುದಕ್ಕೆ ಬಹು ಚೆನ್ನ. ಆದರೆ ಇದರ ನಿಜವಾದ ಪರಿಣಾಮವನ್ನು ಸದ್ಯದಲ್ಲೇ ಊಹಿಸುವುದು ಕಷ್ಟ. ಈಗೇನೋ ಭಾರತೀಯ ಈಕ್ವಿಟಿ ಫಂಡ್‌ಗಳ ಪರಿಸ್ಥಿತಿ ಚೆನ್ನಾಗಿದೆ. ಮುಂದೆ ಏನಾದರೂ ಏರುಪೇರಾದರೆ (ಆಗಲಾರದು ಎನ್ನುವ ವಿಶ್ವಾಸವಿದೆ) ಏನು ಗತಿ? ಅನುಭವಿಸಬೇಕಷ್ಟೆ.
ಸ್ಟೇಟ್ ಬ್ಯಾಂಕ್ ವಿಚಾರ
ಕಳೆದೆರಡು ವಾರಗಳಲ್ಲಿ ಸೆನ್ಸೆಕ್ಸ್ ಬಹುದೊಡ್ಡ ಏರಿಕೆ ಕಂಡಿದೆ. ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೇರೆ ಕಾರಣಗಳಿಂದಾಗಿ ಉಳಿತಾಯ ಖಾತೆಯ ಬಡ್ಡಿ ದರವನ್ನು ಕಡಿಮೆ ಮಾಡಿದ್ದರೂ, ಇನ್‌ಫ್ಲೇಷನ್ ದರ ಇಳಿದರೆ ಬ್ಯಾಂಕ್ ಬಡ್ಡಿ ದರವನ್ನೂ ಇಳಿಸುವುದಾಗಿ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮನ್ ರಾಜಾರಾಮ್ ಹಿಂದೆಯೇ ಹೇಳಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಇನ್‌ಫ್ಲೇಷನ್ ದರ ಇಳಿಯುವ ಸೂಚನೆಗಳೇನೋ ಕಂಡುಬರುತ್ತಿವೆ.
ವೈಯಕ್ತಿಕ ಹೂಡಿಕೆದಾರರು
ಕಳೆದ ಹಲವಾರು ತಿಂಗಳಿಂದಲೂ ಷೇರು ಪೇಟೆಯಿಂದ ದೂರವಿದ್ದ ವೈಯಕ್ತಿಕ ಹೂಡಿಕೆದಾರರು ಇದ್ದಕ್ಕಿದ್ದಂತೆ ಈಕ್ವಿಟಿ ಫಂಡ್‌ಗಳ ದಿಕ್ಕಿನಲ್ಲಿ ಓಡೋಡಿ ಬರುತ್ತಿರುವಂತಿದೆ. ಈ ಪ್ರವೃತ್ತಿಗೆ ಸದ್ಯದ ಪೇಟೆಯ ಪರಿಸ್ಥಿತಿ ಕಾರಣವೋ ಅಥವಾ ದೆಹಲಿಯಲ್ಲಿ ನೂತನ ಸರ್ಕಾರದ ಚಿಂತನೆಗಳ ಪ್ರಕಟಣೆ ಕಾರಣವೋ ಗೊತ್ತಾಗಿಲ್ಲ. ಸದ್ಯಕ್ಕಂತೂ ಪೇಟೆಯಲ್ಲಿ ಹಬ್ಬದ ವಾತಾವರಣವಿದೆ.
ಸರ್ಕಾರಿ ಬಾಂಡ್‌ಗಳು
ಇದೇ ವೇಳೆ ವಿದೇಶಿ ಹೂಡಿಕೆ ಫಂಡ್‌ಗಳು ಸರ್ಕಾರಿ ಸಾಲಪತ್ರಗಳಿಗೆ ಮುತ್ತಿಗೆ ಹಾಕಿರುವುದೂ ಸಹಜವಾದ ಬೆಳವಣಿಗೆ. ಸರ್ಕಾರಿ ಸಾಲಪತ್ರಗಳ ವ್ಯವಹಾರದಲ್ಲಿ ಈಗ ಕಮಿಷನ್ ದರಗಳು ಗಗನಕ್ಕೇರಿವೆ. ಇತ್ತೀಚಿನ ದಿನಗಳಲ್ಲಿ ಇದು ನಿಜವಾಗಿಯೂ ಹೊಸ ಅನುಭವ.
ಕೊನೆಮಾತು
ಪೇಟೆಯಲ್ಲಿ ಹಬ್ಬದ ವಾತಾವರಣ ಇದ್ದರೂ, ಮ್ಯೂಚುಯಲ್ ಫಂಡ್‌ಗಳ ವಲಯದಲ್ಲಿ ಹೆಚ್ಚಿನ ಉತ್ಸಾಹ ಕಂಡು ಬರುತ್ತಿಲ್ಲ. ಆದಾಯ ತೆರಿಗೆ ವಿನಾಯಿತಿಯ ಸೌಲಭ್ಯವನ್ನು ತೆಗೆದು ಹಾಕಿರುವುದರಿಂದ ಈ ವಲಯಕ್ಕೆ ಬರುತ್ತಿದ್ದ ಹಣ ಈಗ ಸಹಜವಾಗಿ ಬ್ಯಾಂಕ್‌ಗಳ ಫಿಕ್ಸೆಡ್ ಡಿಪಾಸಿಟ್ ಕಡೆಗೆ ತಿರುಗಿರುವಂತಿದೆ.

ಸತ್ಯ

SCROLL FOR NEXT