ನವದೆಹಲಿ: ಬ್ಯಾಂಕುಗಳ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರ ಬೇಕೆಂಬ ದೃಷ್ಟಿಯಿಂದ ಅನುತ್ಪಾದಕ ಸಾಲ (ಎನ್ ಪಿಎ)ದ ಪ್ರಮಾಣ ತಗ್ಗಿಸುಕೊಳ್ಳುವುದು ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಸುಸ್ತಿದಾರರ ವಿರುದ್ಧ ಎಂತದೇ ಕ್ರಮ ಜರುಗಿಸಲು ಬ್ಯಾಂಕ್ಗಳಿಗೆ ಸಂಪೂರ್ಣ ಅಧಿಕಾರವಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬ್ಯಾಂಕುಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿದ ಅವರು, ಈಗಿನ ಬ್ಯಾಂಕುಗಳ ಅನುತ್ಪಾದಕ ಸಾಲ(ಎನ್ಪಿಎ)ದ ಪ್ರಮಾಣ ಮಿತಿ ಮೀರಿದೆ. ಅದು ಸಹಿಸಿಕೊಳ್ಳುವ ಅಥವಾ ನಿರ್ವಹಿಸಬಹುದಾದ ಪ್ರಮಾಣದಲ್ಲಿಲ್ಲ.
ಹೀಗಾಗಿ ಕಾಲಮಿತಿಯಲ್ಲಿ ಇದನ್ನು ತಗ್ಗಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುತ್ಪಾದಕ ಸಾಲದ ಸಮಸ್ಯೆ ನಿವಾರಿಸಿಕೊಳ್ಳಲು ಬ್ಯಾಂಕುಗಳು ವೈಯಕ್ತಿಕ ಸಾಲಗಾರರಿಂದ ಸಾಲಗಾರರಿಂದ ನೇರ ವಸೂಲಾತಿ ಸೇರಿದಂತೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಉದ್ಯಮಿ ವಿಜಯï ಮಲ್ಯ ರು.7 ಸಾವಿರ ಕೋಟಿ ಪಾವತಿಸದ ಹಿನ್ನೆಲೆಯಲ್ಲಿ ಎಸ್ಬಿಐ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರನೆಂದು ಘೋಷಿಸಿರುವ ಬಗ್ಗೆ ಪ್ರಶ್ನಿಸಿದಾಗ, ಸಾಲ ವಸೂಲಿ ಮಾಡಲು ಬ್ಯಾಂಕುಗಳಿಗೆ ಎಲ್ಲ ಅಗತ್ಯ ಅಧಿಕಾರ ಮತ್ತು ಸ್ವಾಯತ್ತತೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಉದ್ದೇಶಪೂರ್ವಕ ಬಾಕಿದಾರರ ಮೇಲೆ ಕ್ರಮ ಕೈಗೊಳ್ಳಲು ಸಂಪೂರ್ಣ ಅಧಿಕಾರ ನೀಡಿದೆ.
ದಿವಾಳಿ ಕಾನೂನು ಶೀಘ್ರದಲ್ಲಿಯೇ ಜಾರಿಯಾಗಲಿದೆ. ಇಂಥ ಪ್ರಕರಣಗಳನ್ನು ಹೆಚ್ಚು ಸಮರ್ಥವಾಗಿ ನಿಭಾಯಿಸಲು ನೆರವಾಗಲಿದೆ ಎಂದರು. ಹಿಂಜರಿತದಲ್ಲಿರುವ ವಲಯಗಳ ಪುನಶ್ಚೇತನಕ್ಕೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಬ್ಯಾಂಕುಗಳ ಸಾಲ ಮರುಪಾವತಿ ಪ್ರಮಾಣ ಸುಧಾರಿಸುವ ನಿರೀಕ್ಷೆ ಇದೆ ಎಂದರು. ಉಕ್ಕು, ಕಬ್ಬಿಣದ ಬೆಲೆ ಕುಸಿತ, ಕಟ್ಟಡ ನಿರ್ಮಾಣ ಉದ್ಯಮದಲ್ಲಿನ ಹಿಂಜರಿತ ಮತ್ತಿತರ ಕಾರಣಗಳಿಂದಾಗಿ ಅನುತ್ಪಾದಕ ಸಾಲದ ಪ್ರಮಾಣ ಹೆಚ್ಚಿದೆ.
ಈ ವಲಯಗಳ ಪುನಶ್ಚೇತನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಕಾಲಾನುಕ್ರಮದಲ್ಲಿ ಪ್ರತಿಫಲ ಸಿಗಲಿದೆ. ಬ್ಯಾಂಕುಗಳ ಸಾಲ ವಸೂಲಾತಿ ಸುಧಾರಿಸಲಿದೆ. ಆದರೆ, ಬ್ಯಾಂಕ್ ಗಳ ಮೇಲೆ ಎನ್ಪಿಎ ಹೊರೆ ಹೆಚ್ಚಿದ್ದು ಇದನ್ನು ತಗ್ಗಿಸಲು ಕ್ರಮ ರೂಪಿಸಲಾಗುತ್ತದೆ.
ಕಳೆದ ಸಾಲಿನಲ್ಲಿ 5.20ರಷ್ಟಿದ್ದ ಎನ್ಪಿಎ ಪ್ರಮಾಣ ಪ್ರಸಕ್ತ ಸಾಲಿನ ಜೂನ್ ಅಂತ್ಯಕ್ಕೆ ಶೇ.6.03ಕ್ಕೆ ಏರಿದ್ದು ಆತಂಕಕ್ಕೆ ಕಾರಣವಾಗಿದೆ. ಹೆಚ್ಚು ಅನುತ್ಪಾದಕ ಸಾಲ ಹೊಂದಿರುವ ಬ್ಯಾಂಕುಗಳ ಮುಖ್ಯಸ್ಥರ ಜತೆಗೆ ಪ್ರತ್ಯೇಕವಾಗಿ ಚರ್ಚಿಸಲಾಗಿದೆ ಎಂದರು.